Tuesday, 9 May 2017

ರಂಗರಂಗು ರಜಾಮೇಳದ ಎರಡು ನಾಟಕಗಳು


*ಸುಧಾ ಆಡುಕಳ

 ಮಳೆ ಬಂತು ಮಳೆ

 ಕುಂದಾಪುರದ ಗಾಂಧಿಪಾರ್ಕನಲ್ಲಿರುವ ಬಾಲಭವನ ಮಕ್ಕಳ ಹೆಜ್ಜೆಗೆಜ್ಜೆಗಳಿಂದ ಗಿಜಿಗುಡುತ್ತಿತ್ತು. ಬೇಸಿಗೆಯ ಸೆಕೆಗೆ ಮೈಯೆಲ್ಲ ಬೆವರಿ ನೀರಿಳಿಯುತ್ತಿದ್ದಂತೆ ರಂಗದ ಮೇಲೆ ಬಂದ ಪುಟ್ಟ ಪುಟ್ಟ ಮಕ್ಕಳು ತಮ್ಮ ಸಹಜವಾದ ಅಭಿನಯದೊಂದಿಗೆ ತಂಪಾದ ಮಳೆಯನ್ನೇ ಸುರಿಸಿದರು.  ಸಮುದಾಯ ಕುಂದಾಪುರ ಪ್ರತಿವರ್ಷದಂತೆ ಈ ವರ್ಷವೂ ವಲಸೆ ಕಾರ್ಮಿಕರ ಮಕ್ಕಳು ಮತ್ತು ಸರಕಾರಿ ಶಾಲೆಯ ಮಕ್ಕಳನ್ನು ಗುರಿಗುಂಪನ್ನಾಗಿಸಿಕೊಂಡು ಹತ್ತು ದಿನಗಳ ರಂಗುರಂಗಿನ ರಜಾಮೇಳವನ್ನು ಆಯೋಜಿಸಿತ್ತು. ಮಕ್ಕಳ ಶಿಬಿರಗಳು ಸಂತೆಯ ಸರಕಾಗುತ್ತಿರುವ ಸಮಯದಲ್ಲೇ ಸಮುದಾಯ ಮಕ್ಕಳ ಸೃಜನಶೀಲ ಚೈತನ್ಯ ಮತ್ತು ಧಾರಾಳ ಸಂತಸಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಮೇಳವನ್ನು ಆಯೋಜಿಸಿದ್ದರಿಂದ ಅಲ್ಲಿ ರಂಗಭೂಮಿಯೇ ಈ ಮೇಳದ ಕೇಂದ್ರವಾಗಿದ್ದುದು ಸ್ವಾಭಾವಿಕವಾಗಿತ್ತು. ಮಕ್ಕಳು ಬಣ್ಣಗಳೊಡನೆ, ಮಣ್ಣಿನೊಡನೆ ಆಟವಾಡುತ್ತಾ ತಮ್ಮ ರಜೆಗೆ ಚಂದದ ಬಣ್ಣವನ್ನು ತುಂಬಿಸಿಕೊಂಡರು. ಸ್ವಚ್ಛಂದದ ಸುಖ ಮತ್ತು ಒಡನಾಟದ ಕೌಶಲಗಳನ್ನು ಒಟ್ಟಿಗೆ ಬೆರೆಸಿ ಸಮುದಾಯ ನಡೆಸಿದ ಮಕ್ಕಳ ಸಂತೆ ಈ ಮೇಳದ ಯಾವರೀತಿಯದು ಎಂಬುದನ್ನು ತೋರಿಸಿತು.. ಮೇಳದ ಕೊನೆಯ ದಿನ ಪುಟಾಣಿ ಮಕ್ಕಳು ಶ್ರೀಮತಿ ಚಿನ್ನಾ ವಾಸುದೇವ್ ಅವರ ನಿರ್ದೇಶನದಲ್ಲಿ ಮಳೆ ಬಂತು ಮಳೆ ಎಂಬ ನಾಟಕವನ್ನು ಪ್ರದರ್ಶಿಸಿದರು. ರಂಗಕರ್ಮಿ ಅಭಿಲಾಶಾ ಎಸ್. ಅವರ ಹಾಡೊಂದರ ಆಶಯವನ್ನು ಉದಯ ಗಾಂವಕಾರ ಅವರು ಮೇಳದ ಮಕ್ಕಳಿಗೆ ಒಗ್ಗುವಹಾಗೆ ನಾಟಕವಾಗಿ ರೂಪಾಂತರಿಸಿರುವುದು ಮತ್ತು ವಿಸ್ತರಿಸಿರುವುದು ಕೂಡಾ ಈ ಮೇಳದ ಭಾಗವಾಗಿಯೇ ಎಂಬುದು ವಿಶೇಷ. ಬೇಸಿಗೆಯ ರಜೆಯಲ್ಲಿ ಬಿಸಿಲಿನ ಬೇಗೆ, ವಾಹನಗಳ ಸದ್ದು, ಧೂಳಿನ ಉಪಟಳಕ್ಕೆ ಸೋತ ಮಕ್ಕಳೆಲ್ಲ ಪಕ್ಕದ ಕಾಡೊಂದಕ್ಕೆ ಆಟವಾಡಲು ಹೋಗುತ್ತಾರೆ. ಅಲ್ಲಿ ಒಂದು ಕಾಲದಲ್ಲಿ ತುಂಬಿ ಹರಿಯುತ್ತಿದ್ದ ಕೆರೆಯು ಇಂದು ಖಾಲಿಯಾಗಿ ಪಶು ಪಕ್ಷಿಳೆಲ್ಲ ಕಷ್ಟದಲ್ಲಿರುವುದನ್ನು ಕಂಡು ಮರುಗುತ್ತಾರೆ. ಮಳೆಗಾಗಿ ಮೋಡಗಳನ್ನು ಪ್ರಾರ್ಥಿಸಿದಾಗ ಮೋಡಗಳು ಮಕ್ಕಳಿಗೆ ಪ್ರಕೃತಿಯ ಪಾಠವನ್ನು ಹೇಳಿಕೊಡುತ್ತವೆ. ಹಾಗಾಗಿ ಮಕ್ಕಳೆಲ್ಲ ಮೋಡಗಳ ಆಣೆಯಾಗಿ ಒಂದೋಂದು ಗಿಡನೆಡುವ ಪ್ರತಿಜ್ಞೆಗೈಯುತ್ತಾರೆ. ಮೋಡಗಳು ಖುಶಿಗೊಂಡು ಮಳೆಸುರಿಸುತ್ತವೆ. ಪುಟಪುಟನೆ ಹಾರುವ ಕಪ್ಪೆಗಳು, ಠಣ್ಣನೆ ಜಿಗಿಯುವ ಜಿಂಕೆಗಳು, ತೂರಾಡುವ ಮರಗಿಡಗಳು, ಬಿಳಿಯ ರೆಕ್ಕೆ ಬಿಚ್ಚಿಬರುವ ಮೋಡಗಳಾಗಿ ಮಕ್ಕಳ ಅಭಿನಯ ನಿಜಕ್ಕೂ ಉತ್ತಮವಾಗಿತ್ತು. ಗುಂಪಿನಲ್ಲಿ ಸಂಭಾಷಣೆ ಹೇಳುವ ಸಮನ್ವಯತೆ, ರಂಗಚಲನೆಯ ಚುರುಕುತನ ಎಲ್ಲಕ್ಕಿಂತ ಮಿಗಿಲಾಗಿ ಅಭಿನಯವನ್ನು ಮಕ್ಕಳು ಅನುಭವಿಸುವ ಖುಶಿಯೂ ಸೇರಿ ನಾಟಕ ಮುಗಿಯುವಾಗ ಸೆಕೆಯೆಲ್ಲ ಮಾಯವಾಗಿ ಚಪ್ಪಾಳೆಯ ಸುರಿಮಳೆಯಾಯಿತು. ಮಕ್ಕಳ ಗ್ರಹಿಕೆಗೆ ಸುಲಭವಾಗುವಂತಹ ಪುಟ್ಟಪುಟ್ಟ ಸಂಭಾಷಣೆಯನ್ನು ಪ್ರತಿಮಗುವಿಗೂ ಹಂಚಿದ ರೀತಿ ನಾಟಕದಲ್ಲಿ ಎಲ್ಲ ಮಕ್ಕಳೂ ಕ್ರಿಯಾಶೀಲರಾಗಿರುವಂತೆ ಮಾಡಿತು. ಅನಿಸಿಕೆಗಳನ್ನು ಹೇಳುವಾಗ ತಡವರಿಸಿದ ಮಕ್ಕಳು ನಾಟಕದಲ್ಲಿ ಚಿನಕುರಳಿಗಳಂತೆ ಮಾತನಾಡಿ ವಿಸ್ಮಯ ಮೂಡಿಸಿದರು. ವಾಸುದೇವ ಗಂಗೇರ ಮತ್ತು ಗುಂಪಿನವರ ಗಾಯನವೂ ನಾಟಕಕ್ಕೆ ವಿಶೇಷ ಕಳೆಯೇರಿಸಿತ್ತು. ಸಣ್ಣ ಮಕ್ಕಳನ್ನಿಟ್ಟುಕೊಂಡು, ಕಡಿಮೆ ಸಮಯದಲ್ಲಿ ಇಂತದೊಂದು ರಂಗಪ್ರಸ್ತುತಿಯನ್ನು ನೀಡಿದ ಚಿನ್ನ ವಾಸುದೇವ್ ಅವರು ನಿಜಕ್ಕೂ ಅಭಿನಂದನಾರ್ಹರು.


 ಕುಣಿ ಕುಣಿ ನವಿಲೆ



 
    ಕುಂದಾಪುರದ ರಂಗಅಧ್ಯಯನ ಕೇಂದ್ರದ ಶಿಕ್ಷಕರಾಗಿರುವ ವಿನಾಯಕ ಎಸ್. ಎಂ. ಅವರ ನಿರ್ದೇಶನದಲ್ಲಿ ಮೂಡಿಬಂದ ಇನ್ನೊಂದು ನಾಟಕ ಎಚ್. ಎಸ್. ವೆಂಕಟೇಶ ಮೂರ್ತಿಯವರ ‘ಕುಣಿ ಕುಣಿ ನವಿಲೆ’. ಕುಣಿಯುವುದು ನವಿಲಿನ ಸ್ವಾಭಾವಿಕ ಲಕ್ಷಣ. ಈ ನೆಲದ ಶ್ರಮಜೀವಿಗಳ ಪ್ರತಿ ನಡಿಗೆಯೂ ನೋಡುಗರಿಗೆ ಕುಣಿತದಂತೆ ಭಾಸವಾಗುತ್ತದೆ; ಅವರ ಮಾತುಗಳೆಲ್ಲ ಹಾಡಿನ ಗೇಯತೆಯನ್ನು ಪಡೆದುಕೊಳ್ಳುತ್ತವೆ. ಅದನ್ನು ನೋಡಿ, ಕೇಳಿ ಆನಂದಿಸಲು ಬಾರದಷ್ಟು ಅಸೂಕ್ಷ್ಮರಾದ ಆಡಳಿತಗಾರರು ಹಿಂದೆಯೂ ಇದ್ದರು, ಮುಂದೆಯೂ ಇರುತ್ತಾರೆ. ಇಂಥದೊಂದು ಸೂಕ್ಷ್ಮ ಸಾಂಸ್ಕøತಿಕ ಮತ್ತು ಸಾಮಾಜಿಕ ಬಿಕ್ಕಟ್ಟನ್ನು ಎಚ್. ಎಸ್. ವಿ. ಯವರ ನಾಟಕ ಪ್ರಾಣಿಗಳ ಕಥಾನಕದೊಂದಿಗೆ ಭಿತ್ತರಿಸುತ್ತದೆ. ನವಿಲಿನ ಲಾಸ್ಯವನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಕಾಡಿನ ರಾಜ ಹುಲಿರಾಯ ತನ್ನ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಹೊರದೇಶದಿಂದ ಬರುವ ವ್ಯಾಪಾರಿಗೆ ಉಪಾಯವಾಗಿ ನವಿಲಿನ ಮೊಮ್ಮಗಳನ್ನೇ ಮಾರಿಬಿಡುವ ಹುನ್ನಾರ ಮಾಡುತ್ತಾನೆ. ಆದರೆ ನವಿಲುಗಳೆಲ್ಲ ಒಗ್ಗಟ್ಟಿನಿಂದ ಇದನ್ನು ವಿರೋಧಿಸಿ ಅವರನ್ನೆಲ್ಲ ಓಡಿಸುವಲ್ಲಿ ಸಫಲರಾಗುತ್ತಾರೆ. ಮಕ್ಕಳ ಶಿಬಿರದಲ್ಲಿ ಸಿಗುವ ಸೀಮಿತವಾದ ಕಾಲಾವಧಿಯಲ್ಲಿ ಇಂಥದೊಂದು ಕ್ಲಿಷ್ಠಕರವಾದ ನಾಟಕವನ್ನು ಕಟ್ಟುವುದು ಕಷ್ಟದ ಕೆಲಸ. ಆದರೂ ಅನೇಕ ಸಾಂಕೇತಿಕವಾದ ಪ್ರತಿಮೆಗಳನ್ನಿಟ್ಟು, ನಾಟಕದ ಆಶಯವನ್ನು ಪ್ರೇಕ್ಷಕರಿಗೆ ಮುಟ್ಟಿಸುವ ಪ್ರಯತ್ನವನ್ನು ನಿರ್ದೇಶಕರು ಪ್ರಾಮಾಣಿಕವಾಗಿ ಮಾಡಿದ್ದಾರೆ. ಮುದ್ರಿತ ಸಂಗೀತ ಮಕ್ಕಳ ಸಹಜ ರಂಗಪ್ರಸ್ತುತಿಗೆ ಕೆಲವೆಡೆ ಪೂರಕವಾಗಿರಲಿಲ್ಲ. ಜೊತೆಗೆ ಸಹಜವಾಗಿಯೇ ಕಿಶೋರ ವಯಸ್ಸಿನ ಮಕ್ಕಳಲ್ಲಿರುವ ಸಂಕೋಚ ನಿರ್ಬಿಡೆಯ ಅಭಿನಯಕ್ಕೆ ತೊಡಕಾಗಿತ್ತು. ಹುಲಿಯ ಪಾತ್ರವನ್ನು ನಿರ್ವಹಿಸಿದ ಮಗುವಿನ ಸಂಭಾಷಣೆಯ ವೈಖರಿ ಮನಮುಟ್ಟುವಂತಿತ್ತು. ಬಂಡವಾಳಶಾಯಿಯಾಗಿ ಆಝಾದ್ ಎಲ್ಲರ ಗಮನ ಸೆಳೆದರು. ವೈಯಕ್ತಿಕ ಅಭಿನಯವನ್ನು ಗುಂಪಿನ ಚಲನೆಯಾಗಿ ಮಾರ್ಪಡಿಸಿದ್ದರೆ ಇನ್ನಷ್ಟು ಮಕ್ಕಳಿಗೆ ಅವಕಾಶ ಸಿಗಬಹುದಿತ್ತೇನೋ? ಸಾಮುದಾಯಿಕ ತಲ್ಲಣವೊಂದಕ್ಕೆ ಆಧುನಿಕ ಸ್ಪರ್ಶ ನೀಡಿ ಸಮಕಾಲೀನಗೊಳಿಸುವ ನಿರ್ದೇಶಕರ ಪ್ರಯತ್ನ ಪ್ರಶಂಸನೀಯ.

                                                            _

   ಯುವಜನರ ಮನಸ್ಸು ಸಂವೇದನಾರಹಿತವಾಗುತ್ತಿದೆ, ಅವರ ಧ್ವನಿ ಕರ್ಕಶವಾಗುತ್ತಿದೆ ಎಂದು ದೊಡ್ಡವರು ಗೊಣುಗುತ್ತಾರೆ. ಆದರೆ, ಮಕ್ಕಳಾಗಿರುವಾಗಲೇ ಅವರ ಮನಸ್ಸಿನೊಳಗಿಷ್ಟು ಆರ್ಧೃತೆಯನ್ನು ತುಂಬಿಸಬೇಕಾದ ಜವಾಬ್ದಾರಿಯಿಂದ ನಾಗರಿಕ ಸಮಾಜ ನುಣುಚಿಕೊಳ್ಳುತ್ತಿದೆ. ಇಂಥದೊಂದು ಸಂಧಿಕಾಲದಲ್ಲಿ ವಲಸೆ ಕಾರ್ಮಿಕರ ಮಕ್ಕಳು ಮತ್ತು ಮೇಲ್ವರ್ಗದ ಮಕ್ಕಳನ್ನು ಒಟ್ಟಿಗೆ ತನ್ನ ತೆಕ್ಕೆಯಲ್ಲಿ ತೆಗೆದುಕೊಂಡು ಹತ್ತು ದಿನಗಳ ಕಾಲ ಅವರಿಗೆ ಸಾಮಾಜಿಕ ಸಹಬಾಳ್ವೆಯ ಪಾಠವನ್ನು ಹೇಳಿಕೊಟ್ಟ ಸಮುದಾಯ ಮತ್ತು ಅದರೊಂದಿಗೆ ಕೈಜೋಡಿಸಿದ ಇತರ ಸಂಸ್ಥೆಗಳ ಕಾರ್ಯ ನಿಜಕ್ಕೂ ಸ್ತುತ್ಯಾರ್ಹವಾಗಿದೆ. ಸಾಮಾಜಿಕ ಚಳುವಳಿಯ ರೂಪದಲ್ಲಿ ಹುಟ್ಟಿಕೊಂಡ ಸಮುದಾಯ ಈ ಕಾಲಘಟ್ಟದ ಅವಶ್ಯಕತೆಗನುಗುಣವಾಗಿ ಪಡೆದುಕೊಳ್ಳುತ್ತಿರುವ ಸಾಂಸ್ಕøತಿಕ ರೂಪವು ಉತ್ತಮ ಬದಲಾವಣೆಯ ಲಕ್ಷಣವೂ ಹೌದು. ಮಕ್ಕಳ ಮನೋಭೂಮಿಕೆಯನ್ನು ರೂಪಿಸಲು ನಿರಂತರವಾಗಿ ದುಡಿಯುತ್ತಿರುವ ಸಮುದಾಯದ ಎಲ್ಲ ಸಂಗಾತಿಗಳೂ ನಿಜಕ್ಕೂ ಅಭಿನಂದನಾರ್ಹರು.
Also Read
ಮಳೆ ಬಂತು ಮಳೆ : ಒಂದು ನವಿರಾದ ನಿರೂಪಣೆ-ಶ್ರೀಧರ ಎಸ್, ಸಿದ್ಧಾಪುರ  

No comments:

Post a Comment