Tuesday 18 December 2018

ಸಹಯಾನ ಸಾಹಿತ್ಯೋತ್ಸವ-ಭಾರತ ಸಂವಿಧಾನ : ಹೊಸ ತಲೆಮಾರು



ಸರ್ವಾಧ್ಯಕ್ಷರು 
ಸಹಯಾನ ಸಾಹಿತ್ಯೋತ್ಸವ- 30 ಡಿಸೆಂಬರ್, 2018, ರವಿವಾರ

                   ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ಅವರಿಗೆ ಸರ್ವಾಧ್ಯಕ್ಷ ಗೌರವ
ಡಿಸೆಂಬರ್ 30, 2018 ರಂದು ರವಿವಾರ ರಾಜ್ಯ ಮಟ್ಟದ ಸಹಯಾನ ಸಾಹಿತ್ಯೋತ್ಸವವನ್ನು ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. “ಭಾರತ ಸಂವಿಧಾನ: ಹೊಸ ತಲೆಮಾರು” ಎನ್ನುವ ವಿಷಯದ ಮೇಲೆ 8 ನೇ ರಾಜ್ಯ ಮಟ್ಟದ ಸಾಹಿತ್ಯೋತ್ಸವ ನಡೆಯುತ್ತಿದ್ದು ಸರ್ವಾಧ್ಯಕ್ಷತೆಯನ್ನು ಖ್ಯಾತ ಸಂಸ್ಕøತಿ ಚಿಂತಕರೂ ಸಂವಿಧಾನ ತಜ್ಞರೂ ಆದ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಎಚ್. ಎನ್. ನಾಗಮೋಹನದಾಸ್ ವಹಿಸಲಿದ್ದಾರೆ.

ಸರ್ವಾಧ್ಯಕ್ಷತೆ ವಹಿಸಿಕೊಳ್ಳುತ್ತಿರುವ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ಅವರು ಮೂಲತಃ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಹಿನ್ನೆಲೆಯಿಂದ ಬಂದವರು. ಕರ್ನಾಟಕದಲ್ಲಿ ನಡೆದ ಹಲವು ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿರುವ ಅವರು ಹುಟ್ಟಿದ್ದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಹೆಬ್ಬಣ್ಣಿ ಗ್ರಾಮದಲ್ಲಿ 1952ರ ಫೆಬ್ರುವರಿ 12ರಂದು. ತಂದೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎನ್.ನಾಗಪ್ಪ. ತಾಯಿ ಪಾರ್ವತಮ್ಮ.
ಪ್ರಾಥಮಿಕ ಮತ್ತು ಪೌಢ ಶಿಕ್ಷಣವನ್ನು ಕನ್ನಡ ಶಾಲೆಯಲ್ಲಿ ಕಲಿತ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು. ಅಖಿಲ ಭಾರತ ವಕೀಲರ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಯಂಗ್ ಅಡ್ವೊಕೇಟ್ಸ ಫೋರಂನ ಸಂಸ್ಥಾಪಕರು ಇವರು. ಮತ್ತು ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯಲ್ಲಿ ಸದಸ್ಯರಾಗಿ ಸಕ್ರಿಯ ಪಾತ್ರವಹಿಸಿದ್ದಾರೆ.  2004ರ ಅಕ್ಟೋಬರ್‍ನಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕ. 2014ರಿಂದ ದೆಹಲಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ವಕೀಲರಾಗಿ ನೇಮಕ. ಬಾಬಾಬುಡನ್ ಗಿರಿ ಆಯೋಗ, ಲಿಂಗಾಯತ ಸ್ವತಂತ್ರ ಧರ್ಮದ ಕುರಿತ ಆಯೋಗ…ಹೀಗೆ ರಾಜ್ಯ ಸರಕಾರದ ಹಲವು ಆಯೋಗಗಳ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ ಖ್ಯಾತಿ ಇವರದು. ಒಳ್ಳೆಯ ವಾಗ್ಮಿಗಳೂ, ಬರಹಗಾರರೂ ಆಗಿರುವ ಇವರ ಪುಸ್ತಕಗಳು: 
1. ಸಮಾಜವಾದ; 2. ಕರ್ನಾಟಕದಲ್ಲಿ ನ್ಯಾಯಾಂಗ, 3. ಅಸ್ಪøಶ್ಯತೆ, ಸಮಾಜ ಮತ್ತು ಕಾನೂನು; 4. ಅರಿವು ಬೆಳಕು; 5. ಮಹಿಳಾ ಅಸಮಾನತೆ; 6. ಛಾಲೆಂಜಸ್ ಆ್ಯಂಡ್ ಪ್ರಾಬ್ಲೆಮ್ಸ ಬಿಫೋರ್ ಯಂಗ್ ಲಾಯರ್ಸ್; 7. ಚಾಲೆಂಜಸ್ ಟು ದ ಕಾನ್ಸ್ಟಿಟ್ಯೂಷನ್; 8. ಜಾಗತಿಕ ಧುರೀಣ ಡಾ. ಅಂಬೇಡ್ಕರ್;
9. ಡಾ. ಅಂಬೇಡ್ಕರ್ ಮತ್ತು ಕಾರ್ಮಿಕ ಕಾನೂನು, 10. ಮಾಧ್ಯಮ ದಿಕ್ಕು ಎತ್ತ, ಇತ್ಯಾದಿ. ಅವರು ಇತ್ತೀಚೆಗೆ ಬರೆದು ಪ್ರಕಟಿಸಿದ “ಸಂವಿಧಾನ ಓದು” ಪುಸ್ತಕವು 50,000 ಪ್ರತಿಗಳ ದಾಖಲೆಯ ಮಾರಾಟ ಕಂಡಿದೆ. ರಾಜ್ಯದಾದ್ಯಂತ ಓಡಾಡಿ ಸಂವಿಧಾನದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ.

____________________________________________________________

ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್  ಅವರು ಇತ್ತೀಚೆಗೆ ಬರೆದು ಪ್ರಕಟಿಸಿದ “ಸಂವಿಧಾನ ಓದು” ಪುಸ್ತಕವು 50,000 ಪ್ರತಿಗಳ ದಾಖಲೆಯ ಮಾರಾಟ ಕಂಡಿದೆ. ರಾಜ್ಯದಾದ್ಯಂತ ಓಡಾಡಿ ಸಂವಿಧಾನದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ.
__________________________________________________

9 ವರ್ಷದ ಹಿಂದೆ ಅವರೇ ಸಹಯಾನವನ್ನು ಕೂಡ ಉದ್ಘಾಟಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಹತ್ತು ವರ್ಷದ ನಂತರ ಮತ್ತೆ ಸಹಯಾನಕ್ಕೆ ಬರುತ್ತಿರುವುದು ಹೆಮ್ಮೆಯ ಸಂಗತಿ. ಇವರೊಂದಿಗೆ, ಸಾಹಿತ್ಯೋತ್ಸವದ ಉದ್ಘಾಟಕರಾಗಿ ಪದ್ಮಶ್ರೀ ಗಣೇಶ ದೇವಿಯವರು ಮತ್ತು ಸಮಾರೋಪ ಮಾತುಗಳನ್ನಾಡಲು ದೆಹಲಿಯ ಜೆ ಎನ್ ಯು ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆಯವರು ಆಗಮಿಸುತ್ತಿದ್ದು ನಾಡಿನ ಸುಮಾರು 200 ಜನ ಚಿಂತಕರು ಪಾಲ್ಗೊಳ್ಳಲಿದ್ದಾರೆ.