Monday 5 June 2017

ರಂಗಶಂಕರದಲ್ಲಿ ಡಾ. ಶ್ರೀಪಾದ ಭಟ್ ನಾಟಕಗಳ ಉತ್ಸವ




||ಉದಯ ಗಾಂವಕಾರ
_________________________

ಪ್ರತಿಯೊಂದು ಅಭಿವ್ಯಕ್ತಿಯೂ ತನ್ನ ಉತ್ಕೃಷ್ಟ ಎತ್ತರವನ್ನು ತಲುಪಿದಾಗ ಕವಿತೆಯಾಗುತ್ತದೆ. ಡಾ. ಶ್ರೀಪಾದ ಭಟ್ಟರು ತನ್ನ ನಾಟಕಗಳನ್ನು ಪ್ರತಿಮೆಗಳ ಮೂಲಕ ಕಟ್ಟುತ್ತಾರೆ. ಎಲ್ಲವನ್ನೂ ಹೇಳದೇ ನೋಡುಗನ ಭಾವಲೋಕದಲ್ಲಿ  ದೃಶ್ಯಗಳನ್ನು ಮುಂದುವರಿಸುತ್ತಾರೆ. ಸಾಲುಗಳ ನಡುವಿರುವ ಅರ್ಥವನ್ನು ಹುಡುಕಾಡುತ್ತಾರೆ. ಸ್ನಿಗ್ಧ ದೃವದ ಹರಿವನ್ನು ಪ್ರತಿ ದೃಶ್ಯಕ್ಕೂ ಒದಗಿಸುತ್ತಾರೆ. ಅವರ ನಾಟಕಗಳೆಲ್ಲ ಚೆಂದದ ಕವಿತೆಗಳೇ!

ಶಿರಸಿಯ ಉರ್ದು ಶಾಲೆಯಲ್ಲಿ ಕನ್ನಡದ ಮಾಸ್ತರರಾಗಿರುವ ಶ್ರೀಪಾದರು ನಾಟಕವಾಡಲೆಂದೇ ಉಸಿರಾಡುವವರು. ಜಿ. ಎಸ್ ಅವಧಾನಿ, ಡಾ. ಆರ್ ವಿ ಭಂಡಾರಿಯಂತವರ ಒಡನಾಟದಲ್ಲಿ ತನ್ನ ಯೋಚನೆಗಳಿಗೆ ಸ್ಪಷ್ಟತೆಯನ್ನು ಪಡೆದುಕೊಂಡು ಎದೆಯ ತೇವದಲ್ಲಿ ಸಂವಹನ ನಡೆಸಲು ಸಾಹಿತ್ಯ, ನಾಟಕ ಮುಂತಾದ ಸೃಜನಶೀಲ ಅಭಿವ್ಯಕ್ತಿಗಳಿಂದ ಮಾತ್ರ ಸಾಧ್ಯ ಎಂಬ ತಿಳಿವನ್ನು ತಮ್ಮದಾಗಿಸಿಕೊಂಡವರು.
ತನ್ನ ಮಾಸ್ತರಿಕೆ ವೃತ್ತಿಯ ನಿಮಿತ್ತ ಹಾವೇರಿಯ ಶೇಷಗಿರಿಯಲ್ಲಿರುವಾಗಲೂ ಅಲ್ಲಿ ನಾಟಕದ ಕಂಪನ್ನು ಪಸರಿಸಿದ್ದು ಮಾತ್ರವಲ್ಲ. ಹಾವೇರಿಯನ್ನು ಕರ್ನಾಟಕದ ಸಾಂಸ್ಕೃತಿಕ ಭೂಪಟದಲ್ಲಿ ಗುರುತಿಸಿಕೊಳ್ಳಲು ನೆರವಾಗುವಂತಹ ಶೇಷಗಿರಿಯ ರಂಗಮಂದಿರದ ನಿರ್ಮಾಣಕ್ಕೆ ಸ್ಪೂರ್ತಿಯಾದವರು .ಶ್ರೀಪಾದರು ಅಲ್ಲಿ ತನ್ನ ಶಾಲಾ ಮಕ್ಕಳಿಗಾಗಿ ಅವರು ಅನೇಕ ನಾಟಕಗಳನ್ನು ನಿರ್ದೇಶಿಸಿದರು. ಅವರು ನಿರ್ದೇಶಿಸಿದ `ದೇವರ ಕಾಡು’ ರಾಷ್ಟ್ರ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ ಮೊದಲ ಸ್ಥಾನ ಪಡೆಯಿತು. ಶ್ರೀಪಾದರು ನಿರ್ದೇಶಿಸಿದ ಕರ್ಣಭಾರ, ಚಿತ್ರಾ ನಾಟಕಗಳು ರಾಷ್ರೀಯ ನಾಟಕಶಾಲೆಯ ಭಾರತೀಯ ನಾಟಕ ಮಹೋತ್ಸವದಲ್ಲಿ ಪ್ರದರ್ಶನ ಕಂಡಿವೆ. ಅವರ ಕಂಸಾಯಣ, ರೆಕ್ಕೆ ಕಟ್ಟುವಿರಾ, ಮಕ್ಕಳ ರವೀಂದ್ರ ನಾಟಕಗಳು ದೆಹಲಿಯ ಜಶ್ನೆ ಬಚಪನ್ ನಾಟಕೋತ್ಸವದಲ್ಲಿ ಪ್ರದರ್ಶಿತವಾಗಿವೆ. ಕನ್ನಡದ ಕಥನ ಕಾವ್ಯಗಳನ್ನು ರಂಗದ ಮೇಲೆ ಓದುವ ಕಾವ್ಯರಂಗ ಎಂಬ ಹೊಸ ರಂಗಮಾರ್ಗವನ್ನೇ ಕನ್ನಡ ರಂಗಭೂಮಿಗೆ ಶ್ರೀಪಾದನೀಡಿದರು. ನಾಟಕ ಅಕಾಡೆಮಿಯ ಸಿ.ಜಿ.ಕೆ ಪ್ರಶಸ್ತಿ, ಸದಾನಂದ ಸುವರ್ಣ ಪ್ರಶಸ್ತಿ, ಮಂಜುನಾಥ ಉದ್ಯಾವರ ಪ್ರಶಸ್ತಿಗಳೂ ಸೇರಿದಂತೆ ಅನೇಕ ಪ್ರಶಸ್ತಿಗಳು ಶ್ರೀಪಾದರನ್ನು ಹುಡುಕಿಕೊಂಡು ಬಂದಿವೆ. ಸಮುದಾಯ ಚಳುವಳಿಯಲ್ಲಿ ಸಕ್ರೀಯವಾಗಿ ತೊಡಗಿಕೊಂಡು ತನ್ನ ತಿಳಿವು-ತೀವೃತೆಗಳನ್ನು ಹೆಚ್ಚಿಸಿಕೊಳ್ಳುತ್ತಲೇ ತನ್ನ ಕಸುಬುದಾರಿಕೆಯ ಮೂಲಕ ಸಮುದಾಯದ ಕಲಾಭಿವ್ಯಕ್ತಿಗೆ ಶ್ರೀಪಾದರು ಘನತೆಯನ್ನು ಒದಗಿಸಿರುವರು.

ಶ್ರೀಪಾದರು ಪೌರಾಣಿಕ ಕಥಾಭಾಗವೊಂದನ್ನು ಎತ್ತಿಕೊಂಡಾಗಲೂ ಸಮಕಾಲೀನ ವಿಷಯಗಳನ್ನು ಚರ್ಚಿಸುತ್ತಾರೆ. ಅದು ಬರಿಯ ಒಣ ಶಬ್ದಾಡಂಬರವಾಗದಂತೆಯೂ ನೋಡಿಕೊಳ್ಳುತ್ತಾರೆ. ಅವರ ಮಹಿಳಾ ಭಾರತ ನಾಟಕವು ವರ್ತಮಾನ, ಭೂತ ಮತ್ತು ಭವಿಷ್ಯತ್ತುಗಳನ್ನು ಒಂದಾಗಿಸುತ್ತಾ ಕಾಲದ ಎಲ್ಲೆಗಳನ್ನು ನಾಜೂಕಾಗಿ ಮುರಿಯುತ್ತದೆ. ಸಮುದಾಯ ರೆಪರ್ಟರಿಗಾಗಿ ಅವರು ನಿರ್ದೇಶಿಸಿದ ಮೃತ್ಯುಂಜಯ ನಾಟಕದಲ್ಲಿ ಶ್ರೀಪಾದರು ಬರೀ ಕಾಲದ ಮೇರೆಗಳನ್ನು ಮಾತ್ರ ಮೀರುವುದಿಲ್ಲ; ಭೌಗೋಳಿಕ ಗಡಿಗಳನ್ನೂ ಜನಹೋರಾಟದ ಮಹಾಯಜ್ಞ್ಷದಲ್ಲಿ ವಿಲೀನಗೊಳಿಸುತ್ತಾರೆ. ಮನುಷ್ಯನ ಸಣ್ಣತನಗಳು ಹೇಗೆ ಕಾಲದೇಶಗಳನ್ನು ಮೀರುತ್ತವೋ ಹಾಗೆ ಮನುಷ್ಯನ ಕಷ್ಟಗಳೂ ಕಾಲಾತೀತವೂ ದೇಶಾತೀತವೂ ಆಗಿರುತ್ತವೆ ಎಂಬುದನ್ನು ಸೂಚಿಸುತ್ತ ಅವರ ನಾಟಕಗಳು ನಮ್ಮ ಶತ್ರುವನ್ನು ಗುರುತಿಸಿಕೊಳ್ಳಲು ಸಮಸ್ತ ಮನುಷ್ಯ ಕುಲವೇ ಒಟ್ಟಿಗೆ ಸೇರಬೇಕೆಂಬ ಹೆಬ್ಬಯಕೆಯನ್ನು ವ್ಯಕ್ತಪಡಿಸುತ್ತವೆ.

ಶ್ರೀಪಾದರು ಒಬ್ಬರೇ ಇರುವವರಲ್ಲ. ನಾಲ್ಕು ಜನ ಸೇರಿದಲ್ಲೇ ಇರುವವರು. ಶಿಕ್ಷಕರಿಗಾಗಿ ನಡೆಯುವ ಕಾರ್ಯಾಗಾರಗಳಲ್ಲಿ, ನಾಟಕದ ಸೆಮಿನಾರು, ಚರ್ಚೆಗಳಲ್ಲಿ ಮಾತ್ರವಲ್ಲ ಬೀದಿ ಹೋರಾಟಗಳಲ್ಲೂ ಕಾಣಸಿಗುವವರು. ಸಮಯ ಸಿಕ್ಕಾಗ ಪಂಪನನ್ನೋ, ತಿರುಮಲೇಶರನ್ನೋ ಓದುತ್ತಾ, ಉಮೇದು ಬಂದಾಗ ಎಕ್ಕುಂಡಿಯವರನ್ನು ಹಾಡುತ್ತಾ, ಯಾವುದೋ ಊರಿನಲ್ಲಿ ಗುರುತೇ ಇಲ್ಲದ ಗಲ್ಲಿಯಲ್ಲಿ ಸಾಹಿತ್ಯ-ಸಂಸ್ಕೃತಿಗಳ ಮಾತಾಡುತ್ತಾ ಲೋಕವನ್ನೇ ಮರೆಯಬಲ್ಲವರು.

ಅವಧಿಯ ಜಿ. ಎನ್ ಮೋಹನರ ಸಹಕಾರದಲ್ಲಿ ಜೂನ್ 15, 16 ಮತ್ತು 17 ರಂದು ರಂಗಶಂಕರದಲ್ಲಿ ಡಾ. ಶ್ರೀಪಾದ ಭಟ್ ನಾಟಕೋತ್ಸವವನ್ನು ಏರ್ಪಡಿಸಲಾಗಿದೆ. ಠ್ಯಾಗೋರರ ಕೆಂಪುಕಣಗಿಲೆ ಮತ್ತು ಚಿತ್ರಾ ಹಾಗೂ ಮಾಂಟೋನ ಮಿಸ್ಟೇಕ್ ಆಧರಿಸಿದ ನಾಟಕಗಳು ಅಲ್ಲಿ ಪ್ರದರ್ಶನಗೊಳ್ಳಲಿವೆ.

 ಶ್ರೀಪಾದರು ಈ ಗೌರವಕ್ಕೆ ತುಂಬು ಅರ್ಹರು.
____________________________________________



ನಾಟಕಗಳ ವಿಮರ್ಶೆ
ಚಿತ್ರಾ ನೃತ್ಯ ನಾಟಕ

ಮಿಸ್ಟೇಕ್

ಕೆಂಪು ಕಣಗಿಲೆ

ಚಿತ್ರಾ: ಮುಸುಕು ತೆಗೆದ ಮಾಯಾಂಗನೆ




ಅಹಲ್ಯಾ ಬಲ್ಲಾಳ್ 
ಕಣ್ಣ ಮುಂದೆಯೇ ಕಾಣಿಸುವಂಥದ್ದು ನಿಜವಾಗಿರಬೇಕಿಲ್ಲ. ಅದುಸೌಂದರ್ಯಎನ್ನುವ ಹೆಸರುಪಟ್ಟಿ ಹೊತ್ತ ಪ್ರದರ್ಶನ ಯಾ ಜಾಹೀರಾತು ಸರಕೇ ಆಗಿರಲಿ, ದೇಶದಲ್ಲಿ ನಡೆಯುವ ಆಗುಹೋಗುಗಳೇ ಆಗಿರಲಿ. ಪರದೆ ಸರಿಸಿದಾಗ ಗೋಚರವಾಗುವ ನಿಜಕ್ಕೆ ತಾನೆ ಮೌಲ್ಯವಿರುವುದು. ನೆಮ್ಮದಿ ತರುವಂಥದ್ದು ಅದೇ ಹೊರತು ಕಡ ತಂದಸೌಂದರ್ಯವಲ್ಲ.. ..

ಅನೇಕರಿಗೆ ಆಗುವಂತೆ ನನಗೂ ಹೀಗೆಲ್ಲಾ ಫಿಲಾಸಾಫಿಕಲ್ ಯೋಚನೆಗಳು ಆಗಾಗ ಸುಳಿದು ಹೋಗುವುದುಂಟು. ಸಲ ಮಾತ್ರ ಅದಕ್ಕೊಂದು ಬಲವಾದ ಕಾರಣವೂ ಇತ್ತು. ಸಂದರ್ಭ ತುಸು ಅನಿರೀಕ್ಷಿತವೇ.
ಅಚಾನಕ್ಕಾಗಿ ಊರಿಗೆ ಹೋಗಬೇಕಾಗಿ ಬಂದಿತ್ತು. ಮಣಿಪಾಲ ಪದವಿಪೂರ್ವ ಕಾಲೇಜಿನ ಮೊದಲ ಮಹಡಿಯ ಸಭಾಭವನದಲ್ಲಿ ಎದುರಿನ ಜಮಖಾನೆಯ ಮೇಲೆ, ಲೈಟುಸ್ಟ್ಯಾಂಡಿನ ಪಕ್ಕದಲ್ಲಿ ಕೂತಿದ್ದೆ. ಬಣ್ಣಬಣ್ಣದ ಕನಸಿನಲ್ಲಿ ದೃಶ್ಯಗಳು ಒಂದರ ನಂತರ ಒಂದು ಅನಾವರಣಗೊಳ್ಳುತ್ತಿವೆಯೋ ಎಂಬಂತೆ ಭಾಸವಾಗುತ್ತಿದ್ದಚಿತ್ರಾನಾಟಕವನ್ನು ನೋಡುತ್ತಿದ್ದಂತೆ ಕಣ್ಮನಗಳಿಗೆ ಬೆಡಗು, ಹೊರಗೆ ಕತ್ತಲಲ್ಲಿ ಮಿಂಚು, ಮಳೆ-ಗುಡುಗು. ನನ್ನ ಪಾಲಿಗೆ ಒಂದು ಸರ್ರಿಯಲ್ ಅನುಭವ ಭಾಗ್ಯ!
ನಾಟಕವೆನ್ನುವ ಸುಳ್ಳನ್ನು ಸುಂದರವಾಗಿ ಕಟ್ಟಿಕೊಡುವ ಮೂಲಕ ಸತ್ಯದ ಶೋಧದಲ್ಲಿ ತೊಡಗುವ, ಪ್ರೇಕ್ಷಕರನ್ನೂ ತೊಡಗಿಸುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿರುವ ಡಾ. ಶ್ರೀಪಾದ ಭಟ್ಟರ ನಿರ್ದೇಶನದಲ್ಲಿ, ನೃತ್ಯನಿಕೇತನ ಕೊಡವೂರು ಇದರ ರಜತ ಹಬ್ಬದ ಅಂಗವಾಗಿ ಆಹ್ವಾನಿತರಿಗಾಗಿ ಅದೇ ಸಂಸ್ಥೆಯ ಕಲಾವಿದೆಯರು ಅಭಿನಯಿಸಿದ, ಚಿನ್ನಾರಿ ತಂಡ ಆಯೋಜಿಸಿದ ಮೊದಲ ಪ್ರಯೋಗವದು. ರವೀಂದ್ರನಾಥ ಟಾಗೋರರ ನೃತ್ಯರೂಪಕಚಿತ್ರಾವನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಚೆಂದವಾಗಿ ರೂಪಾಂತರಿಸಿ ನಮ್ಮ ಕಾಲಕ್ಕೆ ತಂದವರು ಸುಧಾ ಆಡುಕಳ.
ಚಿತ್ರಾ ಅಥವಾ ಚಿತ್ರಾಂಗದೆ ಮಹಾಭಾರತದಲ್ಲಿ ಬರುವ ಒಂದು ಪಾತ್ರ. ಅರ್ಜುನ ತನ್ನ ಅಲೆದಾಟದಲ್ಲಿ ಈಶಾನ್ಯ ಭಾರತದ ಮಣಿಪುರವೆಂಬ ಸಹಜ ಸೌಂದರ್ಯದ ನಾಡಿಗೆ ಹೋದಾಗ ಅಲ್ಲಿಯ ಅರಸನ ಮಗಳನ್ನು ಪ್ರೇಮಿಸಿ ಮದುವೆಯಾಗಬಯಸುತ್ತಾನೆ. ಅರಸನೋ ಮಗಳನ್ನೂ ಅವಳಿಗೆ ಹುಟ್ಟುವ ಮಕ್ಕಳನ್ನೂ ಮಣಿಪುರದಿಂದಾಚೆಗೆ ಕರೆದುಕೊಂಡುಹೋಗುವಂತಿಲ್ಲ ಎಂಬ ಕರಾರು ಹಾಕುತ್ತಾನೆ. ಸರಿ ಎಂದು ಒಪ್ಪಿದ ಅರ್ಜುನ ಚಿತ್ರಾಳನ್ನು ಮದುವೆಯಾಗಿ ಬಬ್ರುವಾಹನ ಎಂಬ ಮಗನನ್ನು ಪಡೆಯುತ್ತಾನೆ.
ಪ್ರಸಿದ್ಧ ಕಥೆಗೆ ಹಲವು ಓದುಗಳಿವೆ. ಟಾಗೋರರು ಅದನ್ನು ಒಂದು ಸುಂದರ ಶೃಂಗಾರ ಕಥಾನಕವಾಗಿ ಕಂಡಿದ್ದಾರೆ. ಕುವೆಂಪುರವರ ಚಿತ್ರಾಂಗದಾ ಕೃತಿಯಲ್ಲಿ ಅರ್ಜುನನಿಲ್ಲದೆ ಚಿತ್ರಾಂಗದೆ ಕಳೆದ ದಿನಗಳ ವರ್ಣನೆಯಿದೆ. ನಮ್ಮ ಯಕ್ಷಗಾನ ಮತ್ತು ಚಲನಚಿತ್ರಗಳಲ್ಲಿ ಬಬ್ರುವಾಹನ-ಅರ್ಜುನ ಮುಖಾಮುಖಿಯ ಹಿನ್ನೆಲೆಯಲ್ಲಿ ಚಿತ್ರಾಂಗದೆ ಸಾಕಷ್ಟು ಜನಪ್ರಿಯಳೇ. ನಿರ್ದೇಶಕ ಋತುಪರ್ಣೋ ಘೋಷ್ಚಿತ್ರಾಂಗದಾ: ಕ್ರೌನಿಂಗ್ ವಿಶ್ಎಂಬ ಸಿನೆಮಾದಲ್ಲಿ ಲೈಂಗಿಕ ಅಸ್ಮಿತೆಯ ಆಯಾಮವನ್ನು ಚಿತ್ರಿಸಿದ್ದಾರೆ. ಜಗತ್ತಿನಾದ್ಯಂತ ರಬೀಂದ್ರ ಸಂಗೀತ ಮತ್ತು ಇತರ ಪ್ರಕಾರಗಳ ಸಂಗೀತದೊಂದಿಗೆ ಮೂಲ ಬಂಗಾಳಿ ಹಾಗೂ ಬೇರೆ ಭಾಷೆಗಳಲ್ಲಿ ನೃತ್ಯರೂಪಕದ ಅನೇಕ ಉತ್ತಮ ಪ್ರದರ್ಶನಗಳಾಗಿವೆ.
ಹೀಗೆ ಸಮಾಜೋ-ರಾಜಕೀಯ ನೆಲೆ (ಹಸ್ತಿನಾಪುರದ ಸಾಮ್ರಾಜ್ಯ-ಮಣಿಪುರದ ಬುಡಕಟ್ಟು ಜನಾಂಗ), ಲಿಂಗಾಧಾರಿತ ನೆಲೆ (ಸ್ತ್ರೀ-ಪುರುಷ), ಹೆಣ್ಣೊಬ್ಬಳ ಜೀವನ ಪಯಣದ ನೆಲೆ (ಪುತ್ರಿ-ಪ್ರೇಯಸಿ-ಪತ್ನಿ-ತಾಯಿ-ಸಂಗಾತಿ), ಅಧ್ಯಾತ್ಮಿಕ ನೆಲೆ ಇತ್ಯಾದಿಯಾಗಿ ಇದರ ಅರ್ಥೈಸುವಿಕೆಗೆ ಅವಕಾಶವಿದೆ.ಟಾಗೋರರ ಮೂಲ ನಾಟಕವನ್ನು ಹಾಗೇ ಓದಿದಾಗಲೂ ಹಲವಾರು ಸಮಕಾಲೀನ ವ್ಯಾಖ್ಯಾನಗಳು ಸಾಧ್ಯವಾಗುವಂತಿತ್ತು. ಮೂಲದಲ್ಲಿಯ ಅರ್ಜುನ ಚಿತ್ರಾ ಸಂಬಂಧದ ಸಾಂಸಾರಿಕ ಕಥನವನ್ನು ಹೆಚ್ಚು ಲಂಬಿಸದೇ ಚಿತ್ರಾಳ ಒಳಹೊರಗಿನ ಹೊಯ್ದಾಟದಲ್ಲಿ ಆಕೆ ಪಡೆದ ಗೆಲುವು ಯಾವುದು ಅನ್ನೋದನ್ನು ಮುನ್ನೆಲೆಗೆ ತಂದೆಎನ್ನುತ್ತಾರೆ ನಿರ್ದೇಶಕರು.
ಪ್ರಯೋಗದಲ್ಲಿ ನೃತ್ಯ ಮತ್ತು ನಾಟಕ ಎರಡರ ಅಂಶಗಳೂ ಇರುತ್ತವೆ ಎಂಬುದು ಮೊದಲೇ ತಿಳಿದಿದ್ದರಿಂದ ಕುತೂಹಲವಂತೂ ಇದ್ದೇ ಇತ್ತು. ನಾಂದೀಪದ್ಯದಲ್ಲಿ ಶಿವ ಪಾವರ್ತಿ ಹಾಗೂ ನರ್ತಕಿಯರುವಾಗರ್ಥಶ್ಲೋಕವನ್ನು ಅಭಿನಯಿಸಿದಾಗಲೇ ಪ್ರಸ್ತುತಿಯ ಪ್ರಮೇಯದ ಸೂಚನೆ ಸಿಕ್ಕಂತಾಯ್ತು. ಒಂದಕ್ಕೊಂದು ಬಿಡಿಸಲಾರದಂತೆ ಇರುವ ಮಾತು ಮತ್ತು ಅರ್ಥದಂತೆ ಸಹಬಾಳ್ವೆಯ, ಸಮಾನತೆಯ ಆಧಾರದ ಮೇಲೆ ನಿಂತಿರುವ ಪ್ರೀತಿಯ ದೃಷ್ಟಿಕೋನ ಇಲ್ಲಿದೆ.
ಅರ್ಜುನನಿಗೆ ಮನಸೋತು ಅವನ ಬಳಿ ಹೋಗುವ ಗಂಡು ವೇಷದ ಚಿತ್ರಾ ತಿರಸ್ಕೃತಳಾಗುವುದು, ಮದನನ ಸಹಾಯದಿಂದ ಆಕೆ ಅಪೂರ್ವ ರೂಪ ಪಡೆಯುವುದು, ಅರ್ಜುನ ಆಕೆಯನ್ನು ಮೋಹಿಸಿ ಆಕೆಯೊಡನೆ ಒಂದಾಗುವುದು, ಬಾಹ್ಯರೂಪ ತನ್ನ ನಿಜವಲ್ಲ ಎಂದು ಚಿತ್ರಾಳಿಗೆ ಅನಿಸಿ ಆಕೆ ಚಡಪಡಿಸುವುದು ಮತ್ತು ಕೊನೆಯಲ್ಲಿ ತನ್ನ ನಿಜಸ್ವರೂಪವನ್ನು ಬೆಳಕಿಗೆ ತರುವುದು.. ಹೀಗೆ ನಾಟಕದ ಕ್ರಿಯೆ ಮುಂದುವರಿಯುತ್ತದೆ.
ನೃತ್ಯ ಪ್ರಧಾನವಾದರೂ ರಂಗ ಪ್ರಸ್ತುತಿಯಲ್ಲಿ ನಾಟಕೀಯ ಅಂಶಗಳು ಹೇರಳ. ಚಿತ್ರಾಳ ಪಾತ್ರಕ್ಕಾಗಿ ಇಬ್ಬರು ನಟಿಯರ ಬಳಕೆ ಒಂದೇ ವ್ಯಕ್ತಿಯಲ್ಲಿ ಎರಡು ಮನೋಭಾವಗಳ ಚಿತ್ರಣವನ್ನು ಬಿಂಬಿಸಲು ತುಂಬ ಪರಿಣಾಮಕಾರಿಯಾದ ತಂತ್ರ. ರಂಗದ ಹಿಂದಿನ ಭಾಗದಲ್ಲಿ ಮೇಲೆ ತೂಗು ಹಾಕಿದ ದೊಡ್ಡ ಬಿಲ್ಲು; ರಂಗದ ಅಂಚಿನಲ್ಲಿ ನೆಲದ ಮೇಲೆ ಚಾಚಿಕೊಂಡಿದ್ದ ಬೃಹತ್ ಹೂಮಾಲೆ; ಮದನನಿಗೊಂದು ಹೂವಿನ ರಥ; ಅವನ ಸಹಚರರಿಗೆ ಹೂಬಾಣಗಳು; ಹೂವು ಪೋಣಿಸಿದ ಬಿಳಲುಗಳನ್ನು ಮುಖಕ್ಕೆ ಅಡ್ಡ ಹಿಡಿದುಕೊಂಡು ಹೆಜ್ಜೆ ಹಾಕುವ, ತನ್ಮೂಲಕ ಅನಾಯಾಸವಾಗಿ ವಿಶಿಷ್ಟ ಲೋಕವೊಂದರ ಅನುಭವವನ್ನು ಕಟ್ಟಿಕೊಡುವ ಪಾತ್ರಗಳು, ಸಮೂಹ ನರ್ತಕಿಯರ ವೇಷಭೂಷಣ….ರಾಜು ಮಣಿಪಾಲರ ರಂಗವಿನ್ಯಾಸ ನಾಟಕಕ್ಕೆ ಸೊಬಗು ಕೊಟ್ಟು ಒಟ್ಟು ಆಶಯಕ್ಕೆ ಪೂರಕವೇ ಆಗಿತ್ತು.
ತಂಡದ ನೃತ್ಯಗುರುಗಳಾದ ಮಾನಸಿ ಮತ್ತು ಸುಧೀರ್ ದಂಪತಿಗಳು ಪೋಷಿಸಿರುವ ಒಬ್ಬೊಬ್ಬ ವಿದ್ಯಾರ್ಥನಿಯೂ ಒಂದೊಂದು ಮುತ್ತು. ಅಚ್ಚುಕಟ್ಟಾದ ಭಂಗಿ, ಮುದ್ರೆ, ಹಾವಭಾವ, ಲಯಗಾರಿಕೆ, ಹೆಜ್ಜೆಗಳು, ಅತಿಯಾಗದ ಆಂಗಿಕಾಭಿನಯ, ಸ್ಥಿರ ಹಾಗೂ ಚರ ಗುಣದ ಸಮೂಹ ರಚನಾ ವಿನ್ಯಾಸಗಳು, ಮುಖ್ಯವಾಗಿ ಭರತನಾಟ್ಯ, ಜೊತೆಗೆ ಯಕ್ಷಗಾನ ಹಾಗೂ ಜಾನಪದ ನೃತ್ಯದ ಅಂಶಗಳು ಕಥೆಯನ್ನು ಸುಲಲಿತವಾಗಿ ಮುಂದುವರಿಸಿಕೊಂಡು ಹೋದವು.
ವಾಚಿಕದಲ್ಲಿ ಹಾಡು, ಸ್ವರ ಸಂಯೋಜನೆಗಳು, ಆಲಾಪ ಮತ್ತು ನೃತ್ಯದ ಬೋಲ್-ಗಳು ಧ್ವನಿಮುದ್ರಿತವಾಗಿದ್ದು ನಟಿಯರ ಮಾತು ಸಂಭಾಷಣೆ ಮಾತ್ರ ಲೈವ್ ಆಗಿತ್ತು. ಹೇಳಿ ಕೇಳಿ ನೃತ್ಯ ತಂಡ, ರಂಗದ ಮೇಲೆ ಕಾಣಿಸಿಕೊಂಡವರೆಲ್ಲರೂ ಸ್ತ್ರೀಯರೇ. ಅರ್ಜುನನೂ ಸೇರಿದಂತೆ ಪುರುಷ ಪಾತ್ರಗಳನ್ನೂ ಅವರೇ ನಿರ್ವಹಿಸಿದ್ದು- ನೃತ್ಯದ ಹಿನ್ನೆಲೆಯಿರುವ ನನಗಂತೂ- ಮೊದಲ ಒಂದೆರಡು ನಿಮಿಷಗಳ ನಂತರ ತೊಡಕು ಎನಿಸಲಿಲ್ಲ.
ವಸಂತನ ಚಿರಯೌವನವನ್ನು ಬಿಂಬಿಸಲೋ ಎಂಬಂತೆ ಪಾತ್ರವನ್ನು ಅಭಿನಯಿಸಿದ್ದು ನಗುಮೊಗದ ಮುದ್ದು ಪುಟ್ಟಿ. ಚಿತ್ರಾಳ ಅಂತರಂಗವನ್ನು ಇಬ್ಬರು ನಟಿಯರೂ ವ್ಯಕ್ತಪಡಿಸಿದ ರೀತಿ ತುಂಬ ಸಹಜವಾಗಿತ್ತು. ಸಂಘರ್ಷ ಇಂದಿನ ಕಾಲದ ಹೆಣ್ಣಿಗೂ ಪ್ರಸ್ತುತವೇ. ಅಷ್ಟೇ ಏಕೆ, ಇನ್ನೊಂದು ನೆಲೆಯಲ್ಲಿ ಹೊಯ್ದಾಟ ಮಾನವಕುಲಕ್ಕೇ ಸಂಬಂಧಿಸಿದ್ದು ಎನಿಸಿತು! ಕಲಾತ್ಮಕ ಪರದೆಯ ಪ್ರಾಪ್ ಎಷ್ಟೆಲ್ಲ ಅರ್ಥಗಳನ್ನು ಕೊಡುತ್ತದೆ ಎಂದು ಅದು ಬಳಕೆಯಾದ ದೃಶ್ಯಗಳಲ್ಲಿ ಅನಿಸದೇ ಇರದು. ಇಡೀ ನಾಟಕವನ್ನು ಒಂದು ನೋಟದಲ್ಲಿ ಸೆರೆಹಿಡಿ ಎನ್ನುವ ಸವಾಲೇನಾದರೂ ಎದುರಾದರೆ ನಾನಂತೂ ಪರದೆಯ ಆಚೆ ಈಚೆ ಇರುವ ಇಬ್ಬರು ಚಿತ್ರಾರ ದೃಶ್ಯವನ್ನೇ ಆಯ್ಕೆಮಾಡುವವಳು! ಅಷ್ಟರ ಮಟ್ಟಿಗೆ ನನಗೆ ಎರಡೂ ಸಂದರ್ಭಗಳು ಕಣ್ಣಿಗೆ ಕಟ್ಟಿದಂತಿವೆ.
ಟಾಗೋರರ ಕಾವ್ಯಭಾಗಗಳಿಗೆ ಸುಧಾ ನ್ಯಾಯ ಒದಗಿಸಿದ್ದಾರೆ: ವಾಚಿಕದ ಹಲವು ಭಾಗಗಳು ಉತ್ತಮ ಸಾಹಿತ್ಯಿಕ ಗುಣದಿಂದ ಕೂಡಿವೆ. ಧ್ವನಿಮುದ್ರಣದ ಮಿಕ್ಸಿಂಗ್-ನಲ್ಲಿ ಒಂದಿಷ್ಟು ಸುಧಾರಣೆಗೆ ಅವಕಾಶವಿದೆ ಅನಿಸಿತು. ಮೂಲ ಪಠ್ಯದಲ್ಲಿದ್ದ ಅರ್ಜುನನ ಪ್ರತಿಕ್ರಿಯೆಯ ಮುಂದುವರಿಕೆಯಾಗಿ ಇಲ್ಲಿ ಆತ ಚಿತ್ರಾಳಿಗೆ ಇನ್ನು ಮುಂದೆ ನಾನು ನಿನ್ನ ಸಹಚರ, ಎಲ್ಲ ಅರ್ಥಗಳಲ್ಲೂ ಸಂಗಾತಿ ಎಂದು ಹೇಳುವುದು ಇಂದಿನ ಕಾಲದ ಅಗತ್ಯವೇ ಆಗಿದೆ. ಅರ್ಜುನನ ಕೊನೆಯ ವಾಕ್ಯಗಳಿಗೆ ಇನ್ನಷ್ಟು ಒತ್ತು ಸಿಕ್ಕಿದ್ದರೆ ಇನ್ನೂ ಉತ್ತಮ ಪರಿಣಾಮ ಉಂಟಾಗುತ್ತಿತ್ತಲ್ಲವೇ ಎಂದು ಮೊದಲ ಪ್ರಯೋಗದಲ್ಲಿ ಅನಿಸಿತು.
ಟಾಗೋರರ ಮೂಲಕ ಶ್ರೀಪಾದ ಭಟ್ಟರು ಸೃಷ್ಟಿಸುವ ಚಿತ್ರಾ ಒಬ್ಬ ಅಸಾಮಾನ್ಯ ದಿಟ್ಟ ಹೆಣ್ಣು; ಲಾಲಿತ್ಯ ಹಾಗೂ ಆಂತರಿಕ ಬಲವನ್ನು ಏಕಕಾಲಕ್ಕೆ ಪ್ರತಿನಿಧಿಸುವವಳು. ಒಮ್ಮೆ ಹೋಗಿ ಅವಳನ್ನು ಭೇಟಿಯಾಗಿ, ದೃಶ್ಯಕಾವ್ಯವನ್ನು ಖುದ್ದು ಅನುಭವಿಸಿ!
ಚಿತ್ರಾನಾಟಕವನ್ನು ಉಡುಪಿಯ ಕೊಡವೂರಿನನೃತ್ಯನಿಕೇತನನೃತ್ಯ ಶಾಲೆಯ ಕಲಾವಿದರಿಗೆ ಡಾ.ಶ್ರೀಪಾದರು ನಿರ್ದೇಶಿಸಿದ್ದು ನಾಟಕ ಈಗಾಗಲೇ ದೆಹಲಿಯಲ್ಲಿ 2017 ಜನವರಿಯಲ್ಲಿ ನಡೆದಭಾರತ್ ರಂಗ ಮಹೋತ್ಸವದಲ್ಲಿ ಪ್ರದರ್ಶನಗೊಂಡು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.