Monday 15 April 2019

ಸಮುದಾಯ ಕರ್ನಾಟಕ-ಮತದಾರರಲ್ಲಿ ಒಂದು ಮನವಿ

ಭಾರತವಿಂದು ನಿರ್ಣಾಯಕ ಘಟ್ಟ ತಲುಪಿದೆ. ಇನ್ನೊಂದು ಮಹಾಚುನಾವಣೆಗೆ ಸಜ್ಜಾಗಿದೆ. ಈ ಚುನಾವಣೆ ಕೇವಲ ಮುಂದಿನ ಐದು ವರ್ಷದ ಭವಿಷ್ಯವನ್ನಲ್ಲ; ಮತದಾನದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಭವಿಷ್ಯದಲ್ಲಿ ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯೇ ಅರ್ಥ ಕಳೆದುಕೊಳ್ಳುವ ಸಾಧ್ಯತೆ ಇದೆ. ಎಲ್ಲರೂ ಮತದಾನ ಮಾಡುವಂತೆಜಾಗೃತಿ ಮೂಡಿಸುವ ಧನಾತ್ಮಕ ಕೆಲಸ ತಡವಾಗಿ ಯಾದರೂ ನಡೆಯುತ್ತಿದೆ. ಆದರೆ ಕಡ್ಡಾಯ ಮತದಾನ ಮಾಡಬೇಕು ಎನ್ನುವುದು ಎಷ್ಟು ಮುಖ್ಯವೋ, ಯಾರಿಗೆ ಮತದಾನ ಮಾಡಬೇಕು ಎನ್ನುವುದು ಕೂಡ ಅಷ್ಟೇ ಮುಖ್ಯವಾದುದು ಎಂದು ಸಮುದಾಯ ಕರ್ನಾಟಕ ಭಾವಿಸುತ್ತದೆ.
ಸ್ವಾತಂತ್ರ್ಯ ಬಂದು ಏಳು ದಶಕಗಳು ಆಗುತ್ತಿದ್ದರೂ ಅನ್ನ-ನೀರು-ಸೂರು-ಅಕ್ಷರ ಎಲ್ಲ ಜನರನ್ನೂ ತಲುಪಲಾರದ ದೌರ್ಬಲ್ಯ ನಮ್ಮದಾಗಿದೆ. ಪ್ರಜಾಪ್ರಭುತ್ವದ ಅಡಿಗಲ್ಲಾದ ಪ್ರಜೆಗಳ ಭೌತಿಕ ಅಗತ್ಯತೆಯನ್ನು ಪೂರೈಸುವ ಕುರಿತು ಇಂದು ಚರ್ಚಿಸುವ ಬದಲು ದೇವರು-ಧರ್ಮ-ಜಾತಿಯಂಥ ಭಾವನಾತ್ಮಕ ಸಂಗತಿಯ ಕುರಿತು ಒತ್ತು ಕೊಟ್ಟು ಮತದಾರರ ದಿಕ್ಕು ತಪ್ಪಿಸುವ ಕೆಲಸ ನಡೆಸಲಾಗುತ್ತಿದೆ. ಕಳೆದ ಚುನಾವಣೆಗಳಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿನ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳಲು ಹಲವು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಅನ್ಯ ಮಾರ್ಗ ಹಿಡಿದುದೇಶದ ಭವಿಷ್ಯದ ಕುರಿತ ಚರ್ಚೆಯ ದಿಕ್ಕನ್ನೇ ಬದಲಿಸುತ್ತಿದ್ದಾರೆ. ದೇಶದ ಜನತೆಯ ಆಶಯದ ಭಾಗವಾಗಿ ರೂಪಿತವಾದ ನಮ್ಮ ಸಂವಿಧಾನ ಜಾತಿ, ಮತ, ಪ್ರದೇಶ, ಬಣ್ಣ, ಲಿಂಗ, ಭಾಷೆ ಇತ್ಯಾದಿ ಯಾವ ತಾರತಮ್ಯವಿಲ್ಲದೆ ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಕಳೆದ ಐದು ವರ್ಷಗಳಿಂದ ನಡೆದ ಬೆಳವಣಿಗೆ ನೋಡಿದರೆ ಆಳುವ ವರ್ಗ ಸಂವಿಧಾನವನ್ನೇ ಅಮಾನ್ಯ ಮಾಡುವ ಕಡೆಗೆ ಹೆಜ್ಜೆ ಹಾಕುತ್ತಿದೆ. ಸಾಮಾಜಿಕ ನ್ಯಾಯ, ರೂಲ್ ಆಫ್ ಲಾ, ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆ, ಕಲ್ಯಾಣ ರಾಜ್ಯದ ಕಲ್ಪನೆ, ಮಾನವ ಹಕ್ಕುಗಳು, ಜಾತ್ಯತೀತತೆ ಮತ್ತು ಧರ್ಮ ನಿರಪೇಕ್ಷತೆ ಹೀಗೆ ಒಟ್ಟಾರೆಯಾಗಿ ಭಾರತದ ಬಹುತ್ವದ ಮೇಲೆ ಅಕ್ಷರಶಃ ಮಾರಣಾಂತಿಕ ಹಲ್ಲೆ ನಡೆಯುತ್ತಿದೆ.
ದಲಿತರ ಮೇಲಿನ ದೌರ್ಜನ್ಯ ಹೆಚ್ಚಿದೆ. ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಏರಿಕೆಯಾಗಿದೆ. ಅಲ್ಪ ಸಂಖ್ಯಾತರ ಮೇಲಿನ ದಾಳಿ ಗರಿಷ್ಟ ಮಟ್ಟಕ್ಕೆ ಮುಟ್ಟಿದೆ. ವಿದ್ಯಾರ್ಥಿ ಯುವಜನರಿಗೆ ಉಚಿತ ಶಿಕ್ಷಣ-ಉದ್ಯೋಗ ಕೊಡುವ ಬದಲು ಧರ್ಮಾಧಾರಿತ ಹಿಂಸೆಗೆ ಅವರನ್ನು ಪ್ರಚೋದಿಸಲಾಗುತ್ತದೆ. ಬುದ್ಧ ನಡೆದಾಡಿದ ನೆಲದಲ್ಲಿ ಯುದ್ದೋನ್ಮಾದವನ್ನು ಸೃಷ್ಟಿಸಲಾಗುತ್ತಿದೆ. ಭಾರತದ ಹೆಮ್ಮೆಯ ಸೈನ್ಯವನ್ನೇ ರಾಜಕೀಯಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ದ್ವೇಷದ ರಾಜಕೀಯವು ದೇಶವನ್ನು ಒಡೆಯುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಶಾಂತಿ ಕದಡಿದೆ. ಪ್ರಗತಿ ಕುಂಠಿತವಾಗಿದೆ. ಹಿಂಸೆ ಹೆಚ್ಚುತ್ತಿದೆ. ಜನರನ್ನು ಭಯ ಮತ್ತು ಅಭದ್ರತೆ ಕಾಡುತ್ತಿದೆ.
ಕೋಮುವಾದ ಮತ್ತು ಧಾರ್ಮಿಕ ಮೂಲಭೂತವಾದವನ್ನು ಪ್ರಶ್ನಿಸುವವರ ಮೇಲೆ ಧಾಳಿ ಮಾಡುವ ಮೂಲಕ ಭೀತಿಯ ವಾತಾವರಣ ಹುಟ್ಟುಹಾಕಲಾಗುತ್ತಿದೆ. ತಮ್ಮ ಆಣತಿಯನ್ನು ಪಾಲಿಸದ ಪನ್ಸಾರೆ, ದಾಭೋಲ್ಕರ್, ಕಲಬುರ್ಗಿ, ಗೌರಿ...ಹೀಗೆ ಹಲವರನ್ನು ಸಾಯಿಸಲಾಗಿದೆ. ಬರಹಗಾರರು, ಕಲಾವಿದರು, ಸಂಗೀತಗಾರರು, ಅಧ್ಯಾಪಕರು, ಪತ್ರಕರ್ತರನ್ನೂ ಒಳಗೊಂಡು  ಸಾಂಸ್ಕøತಿಕ ವಲಯದ ಪ್ರಜ್ಞಾವಂತರು ನಾಡಿನ ಬಹುತ್ವವನ್ನು ಬೆಂಬಲಿಸಿ ಮಾತನಾಡಿದಾಗ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಲಾಗುತ್ತಿದೆ. ಪ್ರತಿರೋಧದ ದನಿಯನ್ನೇ ಅಡಗಿಸುವ ಮೂಲಕ ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳುವ ಹುನ್ನಾರ ನಡೆದಿದೆ. ಆರ್ಥಿಕ, ಸಾಂಸ್ಕøತಿಕ, ಸಾಮಾಜಿಕ ತುರ್ತು ಪರಿಸ್ಥಿತಿಯನ್ನು ಅಘೋಷಿತವಾಗಿ ಜಾರಿಗೊಳಿಸಲಾಗುತ್ತಿದೆ.
ಅಂತರ್‍ಧರ್ಮೀಯರ ಮದುವೆ, ಸ್ನೇಹಕೂಟ, ಭಿನ್ನ ಉಡುಪು, ಭಿನ್ನ ಆಹಾರ, ಭಿನ್ನ ನಂಬಿಕೆಯ ಮೇಲೆ ನೈತಿಕ ಪೋಲಿಸ್ ಗಿರಿ, ಗೋರಕ್ಷಣೆ ಮತ್ತು ಮರ್ಯಾದಾ ಹತ್ಯೆಯ ಹೆಸರಿನಲ್ಲಿ ಕಾನೂನು ಬಾಹಿರ ದಾಳಿ ಮುಂದುವರೆದಿದೆ.
ಸಂವಿಧಾನದ ಹೆಸರಿನಲ್ಲಿ ಪ್ರತಿಜ್ಞೆ ಮಾಡಿ ಅಧಿಕಾರಕ್ಕೆ ಬಂದ ಜನಪ್ರತಿನಿಧಿಗಳು ಸಂವಿಧಾನ ಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ. ಸಂವಿಧಾನಕ್ಕೆ ಅವಮಾನ ಮಾಡಲಾಗುತ್ತಿದೆ. ಜನಪ್ರತಿನಿಧಿಗಳೇ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕೊಲೆ ಸುಲಿಗೆಯಂಥ ಕ್ರಿಮಿನಲ್ ಕೆಲಸದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಂತವರನ್ನು ಶಿಕ್ಷಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.
ಇಂತಹ ಪರಿಸ್ಥಿತಿ ಬದಲಾಗಬೇಕಿದೆ. ಸಂವಿಧಾನದತ್ತ ಹಕ್ಕುಗಳು ನಿರಂತರವಾಗಿರಬೇಕಾದರೆ ಈ ನಾಡಿನ ಜೀವವಾದ ಸಹಿಷ್ಣುತೆ, ಸೋದರತೆ, ಸೌಹಾರ್ದತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸಬೇಕಿದೆ. ಏಕ ಸಂಸ್ಕøತಿ, ಏಕ ಭಾಷೆ, ಏಕ ಧರ್ಮವನ್ನು ಪ್ರತಿಪಾದಿಸುವವರನ್ನು ಸೋಲಿಸಬೇಕಾಗಿದೆ. ಸಂವಿಧಾನವನ್ನು ಬದಲಾಯಿಸಿ ಮನುಸ್ಮೃತಿಯನ್ನು ಜಾರಿಗೆ ತರಬೇಕೆಂದು ಬಯಸುವವರನ್ನು ತಿರಸ್ಕರಿಸಬೇಕಿದೆ. ಅದಕ್ಕಾಗಿ ಈ ಚುನಾವಣೆಯಲ್ಲಿ ಕೋಮುವಾದ, ಜಾಗತೀಕರಣ ಮತ್ತು ಜಾತಿವಾದಿ ವ್ಯಕ್ತಿಗಳನ್ನು, ಪಕ್ಷಗಳನ್ನು ಸೋಲಿಸುವ ಮೂಲಕ ಬಹುತ್ವ ಮತ್ತು ಸಮಾನ ಭಾರತವನ್ನು ಕಟ್ಟಲು ಮತದಾರರು ಮುಂದಾಗಬೇಕೆಂದು ಸಮುದಾಯ ಕರ್ನಾಟಕ ಕಳಕಳಿಯ ಮನವಿ ಮಾಡುತ್ತದೆ. ಆ ಮೂಲಕ ಭಾರತದ ಸಂವಿಧಾನವನ್ನು ಗೆಲ್ಲಿಸಬೇಕಾಗಿದೆ. ಸದ್ಯದ ಸಾಂಸ್ಕೃತಿಕ  ಬಿಕ್ಕಟ್ಟಿನಿಂದ ದೇಶವನ್ನು ರಕ್ಷಿಸುವ ಕಡೆಗೆ ಮತದಾರರು ಮುಂದಾಗಬೇಕೆಂದು, ಜನತೆಯಲ್ಲಿ ಈ ತಿಳುವಳಿಕೆಯನ್ನು ವಿಸ್ತರಿಸಬೇಕೆಂದು ವಿನಂತಿ ಮಾಡುತ್ತದೆ.

Thursday 3 January 2019

ಸಂವಿಧಾನವು ಭಾರತಕ್ಕೊಂದು ಭಾಷ್ಯ ಬರೆದಿದೆ. ಅದು ಸಡಿಲವಾಗಲು ಬಿಡಬಾರದು - ಡಾ. ಪುರುಷೋತ್ತಮ ಬಿಳಿಮಲೆ





ಭಾರತದ ಐತಿಹಾಸಿಕ ಅತ್ಯುತ್ತಮ ಘಟನೆ ಎಂದರೆ ನಾವು ದಾಸ್ಯತ್ವವನ್ನು ತೊರೆದು ಸಂವಿಧಾನವನ್ನು ಹೊಂದಿ ಸಿಟಿಜನ್ ಆಗಿದ್ದುದು. ಆದರೆ ಇಂದು ಸಂವಿಧಾನಕ್ಕೆ ಗೌರವ ತೋರದವರು ವಿವಿಧ ಹಂತದ ಸ್ಥಾನಮಾನದಲ್ಲಿದ್ದಾರೆ. ಕೆಲವರು ಸರ್ವೋಚ್ಛ ನ್ಯಾಯಾಲಯವು ಧಾರ್ಮಿಕವಾಗಿ ಜನ ಒಪ್ಪುವ ತೀರ್ಪು ಕೊಡಬೇಕೆಂದು ನಿಯಂತ್ರಿಸಲು ತೊಡಗುತ್ತಾರೆ. ದೇಶದಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ ಎನ್ನುವವರು, ಕೋತಿಗಳು ಸೇತುವೆ ಕಟ್ಟಿದರು ಎನ್ನುವವರು, ಮಾನವಿಕ ವಿಷಯಗಳು ಅನುತ್ಪಾದಕ ವಿಷಯಗಳು ಎನ್ನುವವರು ಇಂದು ಉನ್ನತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾಗಿದ್ದಾರೆ. ಕೆಲವು ಮಹತ್ವದ ಉನ್ನತ ಶಿಕ್ಷಣ ಸಂಸ್ಥೆಗಳ ಗಂಬೀರತೆಯನ್ನೇ ಕಳೆದಿದ್ದಾರೆ. ಈ ರೀತಿಯ ದಾಳಿ ಮಾಡುವವರಿಗೆ ಸಾಮಾಜಿಕ ಮನ್ನಣೆ ನೀಡುತ್ತಿರುವುದು ಖೇದಕರ. ಇಂದು ಸಂವಿಧಾನದ ಬಗ್ಗೆ ಅಪನಂಬಿಕೆ ಮೂಡುವಂತೆ ಮಾಡಲಾಗುತ್ತಿದೆ. ಆದರೆ ಸಂವಿಧಾನ ಮತ್ತು ಭಾರತದ ಬಹುತ್ವ ಉಳಿಸಲು ಹೊಸ ತಲೆಮಾರಿನ ಅನೇಕರು ಬಯಸುತ್ತಿರುವುದು ಆಶಾದಾಯಕ ಬೆಳವಣಿಗೆ. ಸಂವಿಧಾನ ಈ ದೇಶಕ್ಕೊಂದು ಭಾಷ್ಯ ಬರೆದಿದೆ. ಅದು ಸಡಿಲವಾಗಲು ಬಿಡಬಾರದು ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಡಾ. ಪುರುಷೋತ್ತಮ ಬಿಳಿಮಲೆಯವರು ಹೇಳಿದರು. ಅವರು ಸಹಯಾನ ಸಾಹಿತ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮುಂದುವರೆದು ದೇಶ ಭಾಷೆ ಮತ್ತು ಸಂವಿಧಾನದ ಮೌಲ್ಯಗಳ ಬಗ್ಗೆ ವಿಶ್ಲೇಷಿಸುತ್ತಾ “ಎಲ್ಲಾ ದೇಶೀಯ ಭಾಷೆಯ ಅಭಿವೃದ್ಧಿಯ ಜವಾಬ್ದಾರಿಯೂ ಕೇಂದ್ರಕ್ಕೆ ಸಂಬಂಧಿಸಿದುದು ಎಂದು ಹೇಳಲಾಗುತ್ತದೆ. ಆದರೆ, ಇನ್ನೊಂದೆಡೆ ಹೊಸ ಶಿಕ್ಷಣ ನೀತಿಯ ಪ್ರಕಾರ ಭಾಷೆಯ ಅಭಿವೃದ್ಧಿ ಆಯಾ ರಾಜ್ಯಕ್ಕೆ ಸೇರಿದ್ದೆಂದು ಉಲೇಖಿಸಿದ್ದಾರೆ. ವಿಚಿತ್ರವೆಂದರೆ, ಈ ನೀತಿಯ ಜಾರಿಯ ಭಾಗವಾಗಿ ಹಿಂದಿ ಭಾಷೆಯ ಅಭಿವೃದ್ಧಿಗೆ ಮಾತ್ರ ಕೇಂದ್ರ ಸರ್ಕಾರದ ನೀತಿ ಆಯೋಗದ ಹಣ ಬಿಡುಗಡೆ ಆಗಿದೆ. ಇದರಿಂದ ಕೇವಲ ಕನ್ನಡವೊಂದೇ ಅಲ್ಲ, ಭಾರತದ ಬಹು ಭಾಷೆಗಳು ಅಪಾಯದಲ್ಲಿವೆ. ಹಿಂದಿಯನ್ನು ಒಂದು ಭಾಷೆಯಾಗಿ ಪ್ರಚಾರ ಮಾಡುವುದಕ್ಕೆ ತಕರಾರಿಲ್ಲ. ಆದರೆ ಕನ್ನಡ ಕಸಿಯುವುದರ ಬಗ್ಗೆ ಆತಂಕವಿದೆ. ಈ ಸಂವಿಧಾನಾತ್ಮಕ ಅಂಶಗಳ ಬಗ್ಗೆ ಭಾರತದ ಎಲ್ಲಾ ಭಾಷಿಕರೂ ಒಟ್ಟಾಗಿ ವಾದಿಸಲು ಒಂದು ವೇದಿಕೆ ಇಲ್ಲದಂತಾಗಿದೆ. ಹಾಗಾಗಿ ದೆಲ್ಲಿ ಕೇಂದ್ರಿತ ಚಿಂತನಾಕ್ರಮ ಬಿಡಬೇಕು.
ಯಾವುದೇ ಭಾಷೆ ಒಂದು ರಾಜ್ಯದ ಅಧಿಕೃತ ಭಾಷೆ ಅಲ್ಲದಿದ್ದರೂ ಸಾಂವಿಧಾನಿಕ ಮಾನ್ಯತೆಯ ಭಾಷೆಯ ಸ್ಥಾನಮಾನ ನೀಡಬಹುದು ಎಂದು ಸಂವಿಧಾನದ ತಿದ್ದುಪಡಿ ಬರುವ ಮೊದಲು ಮತ್ತು ನಂತರವೂ 8 ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳ್ಳಬೇಕೆಂದು ಒತ್ತಾಯಿಸಿ ಸೀತಾಕಾಂತ ಮಹಾಪಾತ್ರರ ಎದುರು ಅಧಿಕೃತವಾಗಿ 95 ಭಾಷೆಗಳು ಕಾದಿವೆ.
ತುಳು, ಡೋಗ್ರಿ, ಸಂತಾಲಿ, ಬೋಡೋ, ಮೈಥಿಲಿ ಈ 5 ಭಾಷೆಗಳು ಈ ಹಿಂದೆ ಸಂವಿಧಾನಾತ್ಮಕ ಮಾನ್ಯತೆಗಾಗಿ ಸರ್ಕಾರದ ಮುಂದಿದ್ದವು. ಇವುಗಳಲ್ಲಿ ಡೋಗ್ರಿ, ಬೋಡೋ, ಮೈಥಿಲಿ ಮತ್ತು ಸಂತಾಲಿ ಭಾಷೆಗಳನ್ನು ಕೇವಲ ಭಾಷೆಯ ಕಾರಣಕ್ಕಾಗಿ ಸಂವಿಧಾನಾತ್ಮಕ ಮಾನ್ಯತೆಗೆ ಒಪ್ಪಿದ್ದಲ್ಲ, ಬದಲಿಗೆ ಇದರಲ್ಲಿ ಆಯಾ ಪ್ರದೇಶದ ರಾಜಕೀಯ ಕಾರಣಗಳು ಇವೆ. ಇದರ ಮಧ್ಯೆ ತುಳು ಭಾಷೆ ಮಾತ್ರ ಸಿಲುಕಿಹಾಕಿಕೊಂಡಿದೆ.
ಮಾತೃ ಭಾಷೆಯಲ್ಲಿ ಶಿಕ್ಷಣದ ಪ್ರಶ್ನೆ ಇತ್ಯರ್ಥ ಪಡಿಸುವಾಗ ನ್ಯಾಯಾಲಯವು ಹೇಳಿದ್ದೇನೆಂದರೆ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಕೊಡುವುದು ರಾಜ್ಯದ ಜವಾಬ್ದಾರಿಯಲ್ಲ; ಅದು ಪಾಲಕರು ಮತ್ತು ಮಕ್ಕಳಿಗೆ ಬಿಟ್ಟ ವಿಷಯ ಎಂದು. ಇದರಿಂದ ದೇಶದ ಪ್ರಜ್ಞಾವಂತರು ಬೆಚ್ಚಿಬೀಳುವಂತಾಗಿದೆ.
ಮಾತ್ರವಲ್ಲ, ಇಂದು ಸೆಕ್ಯುಲರ್ ಶಬ್ದವನ್ನು ತೆಗೆದು “ಹಿಂದು” ಶಬ್ದವನ್ನು ಸೇರಿಸಲು ಸಂವಿಧಾನ ತಿದ್ದುಪಡಿಗೆ ಆಳುವವರು ಹೊರಟಿದ್ದಾರೆ. ಹಿಂದು ಧರ್ಮದ ಹೆಸರಿನಲ್ಲಿ ಮೇಲ್ಜಾತಿಯ ಹಿತಾಸಕ್ತಿಯನ್ನು ಕಾಪಾಡುವ ಹುನ್ನಾರವನ್ನು ತಡೆಯಬೇಕಿದೆ. ಕೇವಲ ಒಂದು ಧರ್ಮಾಧಾರಿತವಾಗಿ ಯಾವ ದೇಶವೂ ಉಳಿದಿಲ್ಲ. ಅಲ್ಲದೇ ಹಿಂದು ಧರ್ಮ ಎಂಬುದು ಭಾರತೀಯರೆಲ್ಲರ ಧರ್ಮವಲ್ಲ. ಯುವಜನರು ಭಾರತದ ಇತಿಹಾಸ, ಭಾಷೆಗಳು, ಸಮುದಾಯಗಳನ್ನು ಅರಿಯಬೇಕು, ಎಲ್ಲಾ ವಿಷಯಗಳ ಜ್ಞಾನವನ್ನು ಪಡೆದುಕೊಳ್ಳಬೇಕು. ಸಂವಿಧಾನದ ಸವಲತ್ತುಗಳು ಸಿಗದ ಹಾಗೆ ಮಾಡುವ ಶಕ್ತಿಗಳ ವಿರುದ್ಧ ಸಾಮೂಹಿಕವಾಗಿ ಹೋರಾಡಬೇಕು. ಇಲ್ಲದಿದ್ದರೆ ಯುವಜನರಿಗೆ ಭವಿಷ್ಯವಿಲ್ಲ ಎಂದು ಪ್ರೊ. ಪುರುಷೋತ್ತಮ ಬಿಳಿಮಲೆಯವರು ಹೇಳಿದರು.
ಸಂದಿಗ್ಧ ಸಮಸ್ಯೆಗಳ ಪರಿಹಾರಕ್ಕೆ ಸಂವಿಧಾನದಲ್ಲಿ ಉತ್ತರವಿದೆ: ನ್ಯಾಯಮೂರ್ತಿ ನಾಗಮೋಹನ ದಾಸ್
ದೇಶ ಹಿಂದೆಂದಿಗಿಂತ ಹೆಚ್ಚು ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸುತ್ತಿದೆ. ಕಷ್ಟಕರ ವಿಷಯಗಳು ನಮ್ಮೆದುರು ಬಂದಾಗ ಅದರ ಪರಿಹಾರಕ್ಕೆ ಅನ್ವಯಿಸಬೇಕಾದುದು ಸಂವಿಧಾನವನ್ನು. ನ್ಯಾಯಾಧೀಶರಾದವರು ತಾವು ನೀಡುವ ತೀರ್ಪನ್ನು ಒಮ್ಮೆ ತಾವೇ ವಿಮರ್ಶಿಸಿ ನೋಡಬೇಕು. ಅದು ಪ್ರಜಾಪ್ರಭುತ್ವದ ಪರವಾಗಿದೆಯೇ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯವನ್ನು ಒಳಗೊಂಡಿದೆಯೇ ಎಂದು ತುಲನೆ ಮಾಡಲು ಸಂವಿಧಾನವೊಂದೇ ತಳಹದಿ.
ರಾಜ್ಯಾದ್ಯಂತ ನಡೆಯುತ್ತಿರುವ ಸಂವಿಧಾನ ಅಭಿಯಾನದ ಗುಂಟ ಎಲ್ಲಿಯೂ ಅಸಮಾಧಾನ ಅತೃಪ್ತಿ ಆಗಿಲ್ಲ. ಏಕೆಂದರೆ ನಾವು ಹೋದಲ್ಲೆಲ್ಲ ನಡೆಸಿದ ಸಂವಾದ, ಚರ್ಚೆ, ಮಾತುಕತೆ ಎಲ್ಲವೂ ಸಂವಿಧಾನಾತ್ಮಕವಾಗಿತ್ತು. ಈ ಚಳುವಳಿ ಮುಂದಕ್ಕೆ ಹೋಗಬೇಕು ಮತ್ತು ಜನ ವಿಭಾಗಕ್ಕೆಲ್ಲ ತಲುಪಬೇಕು. ರೈತರ ಭೂಮಿ ಪ್ರಶ್ನೆ, ಕಾರ್ಮಿಕರು, ವಿದ್ಯಾರ್ಥಿ ಯುವಜನರ ಸಮಸ್ಯೆ ಬಗೆಹರಿಸಲು ಜನಪರ ಹೋರಾಟಕ್ಕೆ ಸಂವಿಧಾನ ಅವಕಾಶ ಕಲ್ಪಿಸಿದೆ. ಹಾಗಾಗಿ ಸೈದ್ಧಾಂತಿಕ ಸಂಘರ್ಷವನ್ನು ಅಂತರಂಗದಲ್ಲಿ ಪ್ರಾರಂಭಿಸಬೇಕಿದೆ. ಇದಕ್ಕಾಗಿ ನಮ್ಮ ಆದ್ಯತೆ ಮತ್ತು ವಿವೇಕವನ್ನು ಬಳಸಬೇಕು.
ದೇಶದಲ್ಲಿ ಸಂವಿಧಾನವನ್ನು ಕಳೆದುಕೊಂಡರೆ ಇಲ್ಲಿ ಅರಾಜಕತೆ  ಉಂಟಾಗುತ್ತದೆ. ಅಂತರ್ ಯುದ್ಧ ನಡೆಯುತ್ತದೆ. ಪ್ರಜಾಪ್ರಭುತ್ವ, ಜಾತ್ಯತೀತತೆ, ಸಾಮಾಜಿಕ ನ್ಯಾಯಗಳು ಇರಲ್ಲ, ಕೋಮುವಾದ ಮೂಲಭೂತವಾದ ರಾರಾಜಿಸುತ್ತದೆ. ಗಳಿಸಿದ ಹಕ್ಕು ಕಸಿದುಕೊಂಡಾಗ, ಬಾಯಿಗೆ ಬೀಗ ಹಾಕಿ ಗುಲಾಮರಂತೆ ಬಾಳಬೇಕಾಗುತ್ತದೆ. ಹಾಗಾಗಿ ಸಂವಿಧಾನವನ್ನು ಅರ್ಥೈಸಿ, ಅಳವಡಿಸಿಕೊಳ್ಳೋಣ. ಮೈಗೂಡಿಸಿಕೊಳ್ಳೋಣ. ಕುಟುಂಬದವರಿಗೂ, ಸುತ್ತಮುತ್ತಲಿನವರಿಗೂ ಇದರ ಆಶಯಗಳನ್ನು ಮನವರಿಕೆ ಮಾಡಿಕೊಡುವದು ಆದ್ಯತೆಯ ಕೆಲಸವಾಗಲಿ. ಸಂವಿಧಾನ; ಹೊಸತಲೆಮಾರು ವಿಷಯದ ಮೇಲೆ ಸಹಯಾನ ಸಾಹಿತ್ಯೋತ್ಸವ ಅರ್ಥಪೂರ್ಣವಾಗಿ ನಡೆದು ಡಾ. ಆರ್.ವಿ. ಭಂಡಾರಿಯವರ ವೈಚಾರಿಕತೆಯ ಮೂಲ ಆಶಯಗಳನ್ನು ಈಡೇರಿಸುತ್ತಿದೆ ಎಂದು ನ್ಯಾಯಮೂರ್ತಿ ನಾಗಮೋಹನ ದಾಸ್ ಹೇಳಿದರು.
ತಮ್ಮ ಕವಿತೆಯ ವಾಚನ ಮಾಡುವದರೊಂದಿಗೆ ಕವಿ ಕೆ.ಎನ್. ಮುಸ್ತಾಫಾ ಸಮಾರೋಪ ಸಮಾರಂಭವನ್ನು ನಿರ್ವಹಿಸಿದರು.
ನಂತರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಸಮುದಾಯ ಕರ್ನಾಟಕ, ಚಿಂತನ ಉತ್ತರ ಕನ್ನಡದ ಸಹಕಾರದಿಂದ ನಡೆದ “ವಾಲಿ ಸಗ್ರೀವರ ಕಾಳಗ” ತಾಳಮದ್ದಲೆಯಲ್ಲಿ, ಕೃಷ್ಣ ಭಂಡಾರಿ ಗುಣವಂತೆ ಭಾಗವತರಾಗಿ, ಮಂಜುನಾಥ ಭಂಡಾರಿ ಕರ್ಕಿ ಮದ್ದಲೆ ವಾದಕರಾಗಿ ಡಾ. ಕೇಶವ ಶರ್ಮ, ಡಾ. ಪುರುಷೋತ್ತಮ ಬಿಳಿಮಲೆ, ಡಾ. ಶ್ರೀಪಾದ ಭಟ್, ಗಣೇಶ್ ನಾಯ್ಕ ಮುಗ್ವಾ, ಗಣೇಶ ಭಂಡಾರಿಯವರು ಪ್ರಸಂಗದ ಅರ್ಥಧಾರಿಗಳಾಗಿದ್ದರು. ವೈಚಾರಿಕ ಸ್ಪರ್ಷದೊಂದಿಗೆ ಆ ಕಾಲದ ಒಳನೋಟವನ್ನು ಅದ್ಭುತವಾಗಿ ಅರ್ಥೈಸುವುದರೊಂದಿಗೆ ತಾಳಮದ್ದಲೆ ಯಶಸ್ವಿಯಾಯಿತು.




Tuesday 18 December 2018

ಸಹಯಾನ ಸಾಹಿತ್ಯೋತ್ಸವ-ಭಾರತ ಸಂವಿಧಾನ : ಹೊಸ ತಲೆಮಾರು



ಸರ್ವಾಧ್ಯಕ್ಷರು 
ಸಹಯಾನ ಸಾಹಿತ್ಯೋತ್ಸವ- 30 ಡಿಸೆಂಬರ್, 2018, ರವಿವಾರ

                   ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ಅವರಿಗೆ ಸರ್ವಾಧ್ಯಕ್ಷ ಗೌರವ
ಡಿಸೆಂಬರ್ 30, 2018 ರಂದು ರವಿವಾರ ರಾಜ್ಯ ಮಟ್ಟದ ಸಹಯಾನ ಸಾಹಿತ್ಯೋತ್ಸವವನ್ನು ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. “ಭಾರತ ಸಂವಿಧಾನ: ಹೊಸ ತಲೆಮಾರು” ಎನ್ನುವ ವಿಷಯದ ಮೇಲೆ 8 ನೇ ರಾಜ್ಯ ಮಟ್ಟದ ಸಾಹಿತ್ಯೋತ್ಸವ ನಡೆಯುತ್ತಿದ್ದು ಸರ್ವಾಧ್ಯಕ್ಷತೆಯನ್ನು ಖ್ಯಾತ ಸಂಸ್ಕøತಿ ಚಿಂತಕರೂ ಸಂವಿಧಾನ ತಜ್ಞರೂ ಆದ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಎಚ್. ಎನ್. ನಾಗಮೋಹನದಾಸ್ ವಹಿಸಲಿದ್ದಾರೆ.

ಸರ್ವಾಧ್ಯಕ್ಷತೆ ವಹಿಸಿಕೊಳ್ಳುತ್ತಿರುವ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ಅವರು ಮೂಲತಃ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಹಿನ್ನೆಲೆಯಿಂದ ಬಂದವರು. ಕರ್ನಾಟಕದಲ್ಲಿ ನಡೆದ ಹಲವು ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿರುವ ಅವರು ಹುಟ್ಟಿದ್ದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಹೆಬ್ಬಣ್ಣಿ ಗ್ರಾಮದಲ್ಲಿ 1952ರ ಫೆಬ್ರುವರಿ 12ರಂದು. ತಂದೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎನ್.ನಾಗಪ್ಪ. ತಾಯಿ ಪಾರ್ವತಮ್ಮ.
ಪ್ರಾಥಮಿಕ ಮತ್ತು ಪೌಢ ಶಿಕ್ಷಣವನ್ನು ಕನ್ನಡ ಶಾಲೆಯಲ್ಲಿ ಕಲಿತ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು. ಅಖಿಲ ಭಾರತ ವಕೀಲರ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಯಂಗ್ ಅಡ್ವೊಕೇಟ್ಸ ಫೋರಂನ ಸಂಸ್ಥಾಪಕರು ಇವರು. ಮತ್ತು ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯಲ್ಲಿ ಸದಸ್ಯರಾಗಿ ಸಕ್ರಿಯ ಪಾತ್ರವಹಿಸಿದ್ದಾರೆ.  2004ರ ಅಕ್ಟೋಬರ್‍ನಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕ. 2014ರಿಂದ ದೆಹಲಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ವಕೀಲರಾಗಿ ನೇಮಕ. ಬಾಬಾಬುಡನ್ ಗಿರಿ ಆಯೋಗ, ಲಿಂಗಾಯತ ಸ್ವತಂತ್ರ ಧರ್ಮದ ಕುರಿತ ಆಯೋಗ…ಹೀಗೆ ರಾಜ್ಯ ಸರಕಾರದ ಹಲವು ಆಯೋಗಗಳ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ ಖ್ಯಾತಿ ಇವರದು. ಒಳ್ಳೆಯ ವಾಗ್ಮಿಗಳೂ, ಬರಹಗಾರರೂ ಆಗಿರುವ ಇವರ ಪುಸ್ತಕಗಳು: 
1. ಸಮಾಜವಾದ; 2. ಕರ್ನಾಟಕದಲ್ಲಿ ನ್ಯಾಯಾಂಗ, 3. ಅಸ್ಪøಶ್ಯತೆ, ಸಮಾಜ ಮತ್ತು ಕಾನೂನು; 4. ಅರಿವು ಬೆಳಕು; 5. ಮಹಿಳಾ ಅಸಮಾನತೆ; 6. ಛಾಲೆಂಜಸ್ ಆ್ಯಂಡ್ ಪ್ರಾಬ್ಲೆಮ್ಸ ಬಿಫೋರ್ ಯಂಗ್ ಲಾಯರ್ಸ್; 7. ಚಾಲೆಂಜಸ್ ಟು ದ ಕಾನ್ಸ್ಟಿಟ್ಯೂಷನ್; 8. ಜಾಗತಿಕ ಧುರೀಣ ಡಾ. ಅಂಬೇಡ್ಕರ್;
9. ಡಾ. ಅಂಬೇಡ್ಕರ್ ಮತ್ತು ಕಾರ್ಮಿಕ ಕಾನೂನು, 10. ಮಾಧ್ಯಮ ದಿಕ್ಕು ಎತ್ತ, ಇತ್ಯಾದಿ. ಅವರು ಇತ್ತೀಚೆಗೆ ಬರೆದು ಪ್ರಕಟಿಸಿದ “ಸಂವಿಧಾನ ಓದು” ಪುಸ್ತಕವು 50,000 ಪ್ರತಿಗಳ ದಾಖಲೆಯ ಮಾರಾಟ ಕಂಡಿದೆ. ರಾಜ್ಯದಾದ್ಯಂತ ಓಡಾಡಿ ಸಂವಿಧಾನದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ.

____________________________________________________________

ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್  ಅವರು ಇತ್ತೀಚೆಗೆ ಬರೆದು ಪ್ರಕಟಿಸಿದ “ಸಂವಿಧಾನ ಓದು” ಪುಸ್ತಕವು 50,000 ಪ್ರತಿಗಳ ದಾಖಲೆಯ ಮಾರಾಟ ಕಂಡಿದೆ. ರಾಜ್ಯದಾದ್ಯಂತ ಓಡಾಡಿ ಸಂವಿಧಾನದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ.
__________________________________________________

9 ವರ್ಷದ ಹಿಂದೆ ಅವರೇ ಸಹಯಾನವನ್ನು ಕೂಡ ಉದ್ಘಾಟಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಹತ್ತು ವರ್ಷದ ನಂತರ ಮತ್ತೆ ಸಹಯಾನಕ್ಕೆ ಬರುತ್ತಿರುವುದು ಹೆಮ್ಮೆಯ ಸಂಗತಿ. ಇವರೊಂದಿಗೆ, ಸಾಹಿತ್ಯೋತ್ಸವದ ಉದ್ಘಾಟಕರಾಗಿ ಪದ್ಮಶ್ರೀ ಗಣೇಶ ದೇವಿಯವರು ಮತ್ತು ಸಮಾರೋಪ ಮಾತುಗಳನ್ನಾಡಲು ದೆಹಲಿಯ ಜೆ ಎನ್ ಯು ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆಯವರು ಆಗಮಿಸುತ್ತಿದ್ದು ನಾಡಿನ ಸುಮಾರು 200 ಜನ ಚಿಂತಕರು ಪಾಲ್ಗೊಳ್ಳಲಿದ್ದಾರೆ.



Sunday 4 November 2018

ಪ್ರಜಾವಾಣಿಯಲ್ಲಿ ಸಮುದಾಯ ರಾಯಚೂರಿನ ತೀನ್ ಕಂದೀಲು

ಕರ್ನಾಟಕದಲ್ಲಿ ರಂಗಭೂಮಿಗೆ ಸಂಬಂಧಪಟ್ಟ ಅನೇಕ ಸಂಸ್ಥೆಗಳು, ಶಾಲೆಗಳು, ತರಬೇತಿ ಕೇಂದ್ರಗಳು ಮತ್ತು ಸಮುದಾಯಗಳು ರಂಗ ಚಟುವಟಿಕೆಗಳನ್ನು ನಡೆಸುತ್ತಿರುವುದು ಗಮನಾರ್ಹ. ಇಂತಹ ಸಂಸ್ಥೆಗಳಂತೆ ರಾಯಚೂರು ಸಮುದಾಯವು ಕೂಡ ತನ್ನ ಕ್ರಿಯಾಶೀಲತೆಯನ್ನು ಕಾಯ್ದುಕೊಂಡು ಬಂದಿದೆ ಎನ್ನುವುದಕ್ಕೆ ಮೊನ್ನೆ ರಾಯಚೂರಿನ ಜಂಬಲದಿನ್ನಿ ರಂಗಮಂದಿರದಲ್ಲಿ ಸಮುದಾಯ ಅಭಿನಯಿಸಿದ ನಾಟಕಕ್ಕೆ ಕಿಕ್ಕಿರಿದು ಸೇರಿದ ಪ್ರೇಕ್ಷಕರೆ ಸಾಕ್ಷಿಯಾಗಿತ್ತು.

ಒಂದು ಕಾಲದಲ್ಲಿ ರಾಯಚೂರು ಸಮುದಾಯ ತನ್ನ ಗೌರವ ಘನತೆ ಕಾಯ್ದುಕೊಂಡಿತ್ತು. ಆದರೆ ಇಂದು ನಾಟಕದ ಬಗ್ಗೆ ನಮ್ಮ ಭಾಗದ ಜನರ ಧೋರಣೆಗಳು ಬದಲಾದಾಗ ಇನ್ನು ನಮ್ಮ ಭಾಗದಲ್ಲಿ ರಂಗಭೂಮಿ ಬೆಳೆಯುವುದಕ್ಕೆ ಸಾಧ್ಯವಾಗಬಹುದು. ನಾಟಕ ಎಂದರೆ ಮೂಗು ಮುರಿಯುವ ಜನ ನಮ್ಮವರು.

'ಅಯ್ಯ ನಾಟಕ ಮಾಡ್ತಳಂತ? ಮನ್ಯಗೇನು ಯಾರು ಹೇಳವ್ರು ಇಲ್ಲ ಕೇಳವ್ರು ಇಲ್ಲ ಆ ಪೋರಿಗೆ? ನಾಟಕದಾಗ ಗಂಡ್ಸ್ರ ಕೈ ಮುಟ್ಟದು ಮೈ ಮುಟ್ಟದು ಮಾಡ್ತಾಳ ಎನಾ ಯವ್ವ ಅಸಂಯ?’ ಅನ್ನುವಂತ ಮನಸ್ಸುಗಳು ಬದಲಾದಾಗ ರಂಗಭೂಮಿ ಮತ್ತು ರಂಗ ಸಮುದಾಯಗಳು ಬೆಳೆಯಲು ಸಾಧ್ಯವಾಗಬಹುದು. ಕೆಲವೊಬ್ಬರನ್ನು ಬಿಟ್ಟರೆ ಯಾರೂ ವೃತ್ತಿಪರ ಕಲಾವಿದರಲ್ಲ, ಆದರೂ ಆ ವಿದ್ಯಾರ್ಥಿಗಳನ್ನು ಕರೆದುಕೊಂಡು ಒಂದು ಟೀಮ್ ಕಟ್ಟಿ ಒಂದು ಹೊಸ ಪ್ರಯೋಗಗಳ ಮೂಲಕ ರಾಯಚೂರು ಸಮುದಾಯವು ಕ್ರಿಯಾಶೀಲವಾಗಿದೆ. ಯಶಸ್ಸಿನ ಎಲ್ಲಾ ಶ್ರೇಯಸ್ಸು ಈ ನಾಟಕ ನಿರ್ದೇಶಕರಾದ ಪ್ರವೀಣ್ ರೆಡ್ಡಿ ಗುಂಜಳಿಯವರಿಗೆ ಸಲ್ಲಬೇಕು.

ಈ ನಾಟಕದ ತಲೆ ಬರಹ ‘ತೀನ್ ಕಂದೀಲು’ ಈ ಪದ ಮೇಲ್ನೋಟಕ್ಕೆ ಇದರಲ್ಲಿ ಏನೋ ವಿಭಿನ್ನವಾದ ಒಳ ಅರಿವು, ವಿಷಯ ವಸ್ತು, ಅಥವಾ ಇತಿಹಾಸನೇನೋ ಹೇಳಲು ಹೊರಟಿರಬೇಕು ಎಂದು ಪ್ರೇಕ್ಷಕರಿಗೆ ಕುತೂಹಲ ಕೆರಳಿಸುತ್ತದೆ. ಇಲ್ಲಿ ‘ತೀನ್ ಕಂದೀಲು’ ಎನ್ನುವ ನಾಟಕದ ತಲೆಬರಹ ರಾಯಚೂರಿನಲ್ಲಿರುವ, ಬಡವರ, ಕೂಲಿ ಕಾರ್ಮಿಕರ, ವ್ಯಾಪಾರಸ್ಥರ, ಹೊಟ್ಟೆ ತುಂಬಿಸುವ ಒಂದು ಪ್ರದೇಶದ ಹೆಸರು. ಒಟ್ಟಿನಲ್ಲಿ ಇದು ರಾಯಚೂರಿನ ಹೃದಯ ಭಾಗ ಎಂದರೆ ತಪ್ಪಾಗಲಾರದು.

ನಾಟಕಕಾರರು ಇದೇ ಪ್ರದೇಶದಲ್ಲಿ ತುಂಬ ಒಡನಾಟ ಇರುವುದರಿಂದ ಅಲ್ಲಿನ ಬಡವರ ಬದುಕು, ಅವರ ಸ್ಥಿತಿಗತಿಗಳು, ಜಾತಿ, ಧರ್ಮ, ಹಿಂಸೆ, ಕೊಲೆ, ಅತ್ಯಾಚಾರ, ಮೋಸ, ವಂಚನೆ ಮರ್ಯಾದೆಗೇಡು ಹತ್ಯೆ ಹೀಗೆ ಎಷ್ಟೋ ವರ್ಷಗಳ ಕಾಲದ ಧರ್ಮಸಂಕಟವನ್ನು ಹೇಳಿಕೊಳ್ಳಲಾಗದೆ ನಿಜಾಮರ ಕೋಟೆಗಳಲ್ಲಿ ಕಳೆದುಹೋದದ್ದು ಈಗ ಇತಿಹಾಸ.

ಕಳೆದು ಹೋದ ಜೀವಗಳಿಗೆ ರಮೇಶ ಅರೋಲಿಯವರು ಪಾತ್ರದ ರೂಪ ಕೊಟ್ಟು ಪ್ರೇಕ್ಷಕರ ಮನಸ್ಸು ಗೆದ್ದಿರುವುದು, ವಾಸ್ತವ ಬದುಕಿನ ಒಂದು ರೋಚಕವಾದ ಸಂಗತಿ. ನಾಟಕ ಆರಂಭವಾಗುವುದೇ ಗಾರೆ ಕೆಲಸಗಾರರು ಕೆಬ್ಬ್ಣಬುಟ್ಟಿ ಹಿಡಿದುಕೊಂಡು ಕೆಲ್ಸ ಮಾಡುವುದು, ನಂತರ ಅನೇಕ ಸಣ್ಣ ಪುಟ್ಟ ವ್ಯಾಪಾರಸ್ಥರು,(ತಳ್ಳುವ ಬಂಡಿ) ಚಹಾ ಹೋಟೆಲ್ ನಂತರ ಮೂರು ದಾರಿ ಕೂಡುವ(ಸರ್ಕಲ್)ನಲ್ಲಿ ಮೂರು ವಿವಿಧ ಬಣ್ಣದಿಂದ ಕೂಡಿರುವ ಕಂದೀಲಿನ ಬೆಳಕಿನ ಕಂಬ ಹೀಗೆ ಅನೇಕ ರಂಗ ಪರಿಕರಗಳು ರಂಗದ ಮೇಲೆ ಪ್ರವೇಶ ಮಾಡಿಸಿರುವುದು ನಿರ್ದೇಶಕರ ಸೂಕ್ಷ್ಮತೆ ತೋರುತ್ತದೆ.

ಈ ನಾಟಕದ ಕೇಂದ್ರ ಬಿಂದು ದಲಿತ ಹುಡುಗ ಹುಸೇನಿ ಮತ್ತು ಮೇಲ್ಜಾತಿಯ ಹುಡುಗಿ ಶಾಂತಿ ಯುವ ಪ್ರೇಮಿಗಳಾದರೂ ಇಡೀ ನಾಟಕಕ್ಕೆ ನಾಯಕನಾಗಿ ನಿಲ್ಲುವುದು ಯಲ್ಲಯ್ಯ ಅಜ್ಜ. ಯುವ ಪ್ರೇಮಿಗಳನ್ನು ಒಂದು ಮಾಡುವ ಒದ್ದಾಟದ ಜೊತೆಗೆ ಪ್ರಸ್ತುತ ದೇಶದಲ್ಲಿ ನಡೆಯುವ ಘಟನೆಗಳು ನಾಟಕದುದ್ದಕೂ ಟೀಕೆಗೆ ಗುರಿಯಾಗುತ್ತಾ ಹೋಗುತ್ತವೆ.

‘ಈ ದೇಶದಲ್ಲಿ ಬಡವರ, ದಲಿತರ, ಪರ ಮಾತಾಡಬೇಡಿ. ನೀವು ಕೂಡ ನಗರ ನಕ್ಸಲೈಟ್ ಎಂಬ ಪಟ್ಟ ಕಟ್ಟಿ ಜೈಲಿಗೆ ಕಳಿಸುತ್ತಾರೆ. ಕಾಯುವವರೇ ಕೊಲ್ಲಲು ಬಂದಾಗ ಯಾರ ಮುಂದ ದೂರು ಕೊಡತೀರಿ’ ಎಂದು ಪರೋಕ್ಷವಾಗಿ ರಾಜಕೀಯ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುವುದು. ಹೀಗೆ ಇಂತಹ ಅನೇಕ ಪ್ರಶ್ನೆಗಳು ನಾಟಕದುದ್ದಕೂ ಎತ್ತುತ್ತ ಹೋಗುತ್ತಾನೆ ಯಲ್ಲಯ್ಯ. ಯುವ ಪ್ರೇಮಿಗಳ ಪ್ರೀತಿಯನ್ನು (ಶಾಂತಿ ಮತ್ತು ಹುಸೇನ) ಒಂದು ಮಾಡಲು ಯಲ್ಲಯ್ಯ ಎಷ್ಟೇ ಪ್ರಯತ್ನಪಟ್ಟರೂ ಮತ್ತು ಇಲ್ಲಿ ಶಾಂತಿ ಎಷ್ಟೇ ಗಟ್ಟಿಗಿತ್ತಿ ಹುಡುಗಿಯಾಗಿದ್ದರೂ ಮನೆಯಲ್ಲಿ ಪ್ರತಿರೋಧ ಒಡ್ಡಿದಾಗ ಜಾತಿವಾದಿಗಳ ಗುಂಪು ಕೊನೆಗೆ ಶಾಂತಿಯ ಹತ್ಯೆ ಮಾಡುತ್ತದೆ.

ನಾಟಕದಲ್ಲಿ ಅನೇಕ ರೂಪಕಗಳು ಬಳಸಿರುವುದು ವಿಶೇಷ. ಧರ್ಮ ವಿರೋಧಿಗಳು ಹುಸೇನಿಗೆ ಹೊಡೆಯುವಂತಹ ಸಂದರ್ಭದಲ್ಲಿ ಕೋಲಿನ ನಾದದ ಜೊತೆಗೆ ಆ ಕೆಂಪಾದ ಫೋಕಸ್ ಲೈಟಿನಲ್ಲಿ ಪಾತ್ರಗಳು ಸುತ್ತಲೂ ತಿರುಗುವುದು ವಿಶೇಷ ಅನಿಸುತ್ತದೆ. ಇನ್ನೊಂದು ವಿಶೇಷವೆಂದರೆ ಈ ಯಲ್ಲಯ್ಯನ ಪಾತ್ರವೇ ನಾಟಕದುದ್ದಕೂ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡಿದ್ದು. ಈ ನಾಟಕಕ್ಕೆ ಅನೇಕ ಪಾತ್ರಗಳು ಜೊತೆಯಾಗಿವೆ. ಯಲ್ಲಯ್ಯ ಮುದುಕನ ಪಾತ್ರದಲ್ಲಿ ಲಕ್ಷ್ಮಣ ಮಂಡಲಗೇರಾ ಅವರ ಅಭಿನಯ ಮೆಚ್ಚುವಂತಹದ್ದು. ಈ ನಾಟಕದಲ್ಲಿ ಯುವತಿಯ ಹತ್ಯೆಯನ್ನು ತಡೆಯದೆ ದೇಶದ ಆರಕ್ಷಕರು ಹೇಗೆ ಕರ್ತವ್ಯ ನಿರ್ವಹಣೆ ಮಾಡುತ್ತಾರೆ ಎನ್ನುವುದು ಗೊತ್ತಾಗುತ್ತದೆ.

ನಾಟಕಕ್ಕೆ ಬೆಳಕಿನ ವಿನ್ಯಾಸ ಕಡಿಮೆ ಇತ್ತು. ಹಿನ್ನೆಲೆ ಗಾಯನ ನಾಟಕಕ್ಕೆ ಅನುಕೂಲವಾಗುವ ರೀತಿಯಲ್ಲಿ ಇತ್ತು. ಕೆಲವೊಂದು ಪಾತ್ರಗಳು ಬಂದಾಗ ಅನವಶ್ಯಕವಾಗಿ ಚೀರುವಂತೆ ಕಂಡು ಬಂದಿತು. ಅದರ ಜೊತೆಗೆ ಪ್ರೇಕ್ಷಕ ವರ್ಗವೂ ಚೀರಿದಾಗ ಕೆಲ ರಂಗಪ್ರಿಯರಿಗೆ ಮತ್ತು ಶಾಂತತೆಯಿಂದ ಕುಳಿತು ನೋಡುವವರಿಗೆ ಇರಿಸುಮುರಿಸು ಆದುದೂ ಉಂಟು. ಈ ಮೈಸೂರು ಮತ್ತು ಧಾರವಾಡ ರಂಗಪ್ರೇಕ್ಷಕರು ನಾಟಕ ನೋಡುವ ವಿಧಾನ ಬೇರೆ ರೀತಿಯಾಗಿರುತ್ತದೆ.

ಯಾವತ್ತೂ ನಟರಿಗೆ ತೊಂದರೆ ಕೊಡುವ ಕೆಲಸ ಮಾಡುವುದಿಲ್ಲ. ಏನಾದರೂ ನಟರ ಬಾಯಿಯಿಂದ ಹಾಸ್ಯ ಅಥವಾ ಗಂಭೀರ ಮಾತುಗಳು ಬಂದರೆ ಅದಕ್ಕೆ ಒಂದಿಷ್ಟು ಚಪ್ಪಾಳೆ ಕೊಟ್ಟು ಹುರಿದುಂಬಿಸುತ್ತಾರೆ. ಆದರೆ ನಮ್ಮ ರಾಯಚೂರಿನ ಯುವ ಪ್ರೇಕ್ಷಕರು ನಾಟಕವನ್ನು ನೋಡುವ ದೃಷ್ಟಿಕೋನ ಬದಲಾಯಿಸಿಕೊಂಡರೆ ರಾಯಚೂರಿನಲ್ಲೂ ರಂಗಸಂಸ್ಥೆಗಳನ್ನು ಕಟ್ಟುವುದರಲ್ಲಿ ಸಂಶಯವಿಲ್ಲ. ಅದೇ ಇಲ್ಲಿನ ರಂಗಪ್ರಿಯರ ಆಶಯ.

ಮಲ್ಲಮ್ಮ ಯಾಟಗಲ್

Monday 2 October 2017

ಸಂವಾದದ ಹಿರಿಮೆಯನ್ನು ಎತ್ತಿಹಿಡಿದ ಸಮುದಾಯದ ಸೂರ್ಯನ ನೆರಳು




   ಪ್ರತಿ ತಿಂಗಳ ಮೊದಲ ಭಾನುವಾರದಂದು ನಡೆಯುವ ತಿಂಗಳ ಕಥಾ ಓದು ಕಾರ್ಯಕ್ರಮ ಮತ್ತು ಸಂವಾದದ ಹಿರಿಮೆಯನ್ನು ಎತ್ತಿ ಹಿಡಿಯುವ ಸೂರ್ಯನ ನೆರಳು ನಾಟಕಗಳನ್ನು ಒಟ್ಟಿಗೆ ಗಾಂಧಿ ಜಯಂತಿಯಂದು ಹಮ್ಮಿಕೊಳ್ಳುವ ಮೂಲಕ ಕುಂದಾಪುರ ಸಮುದಾಯವು ಗಾಂಧಿಯನ್ನು ಮತ್ತೊಮ್ಮೆ ಚರ್ಚೆಯ ತೆಕ್ಕೆಗೆ ತೆಗೆದುಕೊಂಡಿತು.
   ಬೋಳುವಾರರ ಪಾಪು ಗಾಂಧಿ ಬಾಪೂ ಗಾಂಧಿ ಆದ ಕತೆಯಲ್ಲಿನ ಗಾಂಧಿಯ ಬದುಕಿನ ಮೂರು ಮುಖ್ಯ ಕಾಲಘಟ್ಟವನ್ನು ಪ್ರತಿನಿಧಿಸುವ ಕತೆಗಳನ್ನು ಡಾ. ರಶ್ಮಿ ಕುಂದಾಪುರ ರವರು ಫ್ಲಿಫ್ ಚಾರ್ಟಗಳ ನೆರವಿನಿಂದ ಸೊಗಸಾಗಿ ವಾಚಿಸಿದರು. ವೈದ್ಯ ವೃತ್ತಿಯಲ್ಲಿರುವವರು ಕೆಲವು ಸೂಕ್ಷ್ಮ ವಿಷಯಗಳನ್ನು ಜನರಿಗೆ ಮನದಟ್ಟು ಮಾಡುವಾಗ ಫ್ಲಿಫ್ ಚಾರ್ಟುಗಳನ್ನು ಬಳಸುತ್ತೇವೆ. ಸದ್ಯಕ್ಕೆ, ಗಾಂಧಿಯೂ ಸೂಕ್ಷ್ಮ ಸಂಗತಿಯೇ ಎನ್ನುತ್ತಾ ಆರಂಭಿಸಿದ ಡಾ. ರಶ್ಮಿಯವರು ಕತೆಯ ನಂತರವೂ ಗಾಂಧಿಯ ಈ ಕತೆಯನ್ನು ಓದಲು ಆರಂಭಿಸಿದ ಮೇಲೆ ತನ್ನ ಬದುಕು ಭಾವಗಳ ಮರುಸಂಘಟನೆಗೆ ಹೇಗೆ ಕಾರಣವಾಯಿತು ಎಂಬುದನ್ನೂ ಹಂಚಿಕೊಂಡರು. ಕಥಾ ಓದಿಗೆ ಡಾ. ಹಯವದನ ಮೂಡುಸಗ್ರಿ, ರಾಘವೇಂದ್ರ ಬೈಂದೂರು ಇನ್ನಿತರರು ಪ್ರತಿಕ್ರಿಯಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೋಟೇಶ್ವರ ಘಟಕದ ಅಧ್ಯಕ್ಷರಾದ ಅಶೋಕ ತೆಕ್ಕಟ್ಟೆ ಡಾ. ರಶ್ಮಿಯವರಿಗೆ ಹೂ ನೀಡಿ ಗೌರವಿಸಿದರು.
   ಕಥಾ ಓದಿನ ನಂತರ ವಾಸುದೇವ ಗಂಗೇರ ನಿರ್ದೇಶನದಲ್ಲಿ ಸಮುದಾಯದ ಕಲಾವಿದರು `ಸೂರ್ಯನ ನೆರಳು’ ನಾಟಕವನ್ನು ಪ್ರದರ್ಶಿಸಲಾಯಿತು. ಉದಯ ಗಾಂವಕಾರ ರಚಿಸಿದ ಈ ಪುಟ್ಟ ನಾಟಕ ಸಂವಾದದ ಸಂಸ್ಕøತಿಯು ಭಾರತದ ಜ್ಞಾನಪರಂಪರೆಯನ್ನು ಹೇಗೆ ಬೆಳೆಸಿತು ಎಂಬ ಸಂಗತಿಗಳನ್ನು ಮನದಟ್ಟು ಮಾಡಿಸುತ್ತಲೇ ಈ ನೆಲದ ಮೂಲನೆಲೆಯಾದ ಮಾತುಕತೆ ಮತ್ತು ವಿಭಿನ್ನ ಅಭಿಪ್ರಾಯಗಳನ್ನು ಗೌರವಿಸುವ ಪರಂಪರೆಯಿಂದ ನಾವು ದೂರಸರಿಯುತ್ತಿರುವ ಆತಂಕವನ್ನು ಪ್ರೇಕ್ಷರೆದುರು ಹಿಡಿಯಿತು. ಉಸಿರಾಟ, ಆಹಾರ ಸೇವನೆ, ನಿದ್ದೆ, ಮೈಥುನಗಳು ಮಾತ್ರವೇ ಜೀವಂತಿಕೆಯ ಚಿಹ್ನೆಗಳಲ್ಲ್ಲ; ಪ್ರಶ್ನಿಸುವ ಚೈತನ್ಯ ಕೂಡಾ ಜೀವಂತಿಕೆಯ ಲಕ್ಷಣ. ನಾವು ಪ್ರಶ್ನಿಸುತ್ತಿದ್ದೇವೆಂದರೆ ಯೋಚಿಸುತ್ತಿದ್ದೇವೆಂದು ಅರ್ಥ. ಸ್ವತಂತ್ರವಾಗಿ ಯೋಚಿಸುವವರು ಸ್ವತಂತ್ರ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯಗಳಿರುವುದು ಪ್ರತಿಯೊಬ್ಬರಿಗೂ ತಮ್ಮದೇ ಆಸೆ, ಆಮಶಂಕೆ, ಜ್ವರ, ನೆಗಡಿ ಕೆಮ್ಮು ಇರುವಷ್ಟು ಸ್ವಾಭಾವಿಕ ಎಂಬುದನ್ನು ಚರಿತ್ರೆಯ ಪುಟಗಳಿಂದ ಪಡೆದ ಪುಟ್ಟ ಪುಟ್ಟ ಸಂವಾದದ ತುಣುಕುಗಳನ್ನು ಪೋಣಿಸಿ ನಿರೂಪಿಸಲಾಯಿತು.
   ಸೂರ್ಯನ ನೆರಳು ನಾಟಕವು ಗಾಂಧಿಯ ಸಾವಿನ ನಂತರದ ಪ್ರಶ್ನೆಗಳನ್ನು ಎದುರಿಸುತ್ತದೆ. ಈ ನೆಲದಲ್ಲಿ ಒಡಮೂಡಿದ ವಿವೇಕದಲ್ಲಿ ನೂರಾರು, ಸಾವಿರಾರು ಸಂವಾದಗಳ ತಿಳಿವಿನ ಎಳೆಗಳು ಜೋಡಿಸಿಕೊಂಡಿವೆ. ಆಧುನಿಕ ಕಾಲದ ಗಾಂಧಿ-ಅಂಬೇಡ್ಕರ್, ಗಾಂಧಿ-ಎಮ್ ಎನ್ ರಾಯ್ ರ ನಡುವೆ ಇದ್ದಿರುವ ವ್ಯತ್ಯಾಸಗಳೇ ಉಪನಿಷತ್ತುಗಳಲ್ಲಿ ಬರುವ ಉದ್ಧಾಲಕ ಮತ್ತು ಯಾಜ್ಞವಲ್ಕ್ಯರ ನಡುವೆ ನಡೆದಿದ್ದವು. ಚಾರ್ವಾಕ, ಬುದ್ಧ, ಬಸವ ಮುಂತಾದವರೆಲ್ಲರೂ ಆಯಾ ಕಾಲದ ಯಥಾಸ್ಥಿತಿವಾದಿಗಳಿಗೆ ಪ್ರಶ್ನೆಗಳನ್ನೆಸದಿದ್ದರು. ಗಾಂಧಿಯಿಂದ ಅಂಬೇಡ್ಕರ್ ಎಷ್ಟನ್ನು ಪಡೆದುಕೊಂಡಿದ್ದರೋ ಅಷ್ಟನ್ನು ಅಂಬೇಡ್ಕರರಿಂದ ಗಾಂಧಿಯೂ ಪಡೆದುಕೊಂಡಿದ್ದರು. ವೈಚಾರಿಕ ವಿಕಾಸಕ್ಕೆ ಸಂವಾದದ ಜರೂರು ಇದೆ ಎನ್ನುವುದನ್ನು ಈ ನಾಟಕ ಮತ್ತೆ ಮತ್ತೆ ಹೇಳುತ್ತದೆ.
 ನಾಟಕದುದ್ದಕ್ಕೂ ವಿಭಿನ್ನ ಯೋಚನೆ, ಸಿದ್ಧಾಂತಗಳನ್ನು ಮುಖಾಮುಖಿಯಾಗಿಸುತ್ತಲೇ ಯಾವುದನ್ನೂ ಕಡೆಯದೆ, ಯಾವುದನ್ನೂ ಹಿರಿದೆಂದು ಎತ್ತಿಹಿಡಿಯದೆ ನಮ್ಮ ನಡುವೆ ಮಾತುಕತೆ ಅಗತ್ಯ ಎಂಬುದಷ್ಟನ್ನೇ ಈ ನಾಟಕ ಸೂಚಿಸುತ್ತದೆ. ಗಾಂಧಿಯ ಸಾವಿನಿಂದ ಆರಂಭವಾಗುವ ನಾಟಕ ಸಮಯರೇಖೆಯ ಹಿಂದಕ್ಕೂ ಮುಂದಕ್ಕೂ ಚಲಿಸುತ್ತಾ ಕಾಲಾತೀತವಾಗುತ್ತದೆ. ಆಗಾಗ ನಟರು ವರ್ತಮಾನಕ್ಕೆ, ದೈನಿಕದ ಕಡು ವಾಸ್ತವಕ್ಕೆ ಹಿಂದಿರುಗುತ್ತಾರೆ. ಈ ನೆಲದ ಇತಿಹಾಸವನ್ನು ಮತ್ತೆ ಮತ್ತೆ ಮುಟ್ಟಿನೋಡುತ್ತಾರೆ.  ಕೆಲವೊಮ್ಮೆ ಹಠಾತ್ತನೆ ನಾಟಕದಿಂದ ಹೊರಬಂದು ಪ್ರೇಕ್ಷಕರಾಗಿಬಿಡುತ್ತಾರೆ. ಶಿವಾನಂದ, ಸಚಿನ್, ಪ್ರಾರ್ಥನಾ, ಸ್ಮಿತಾ, ಅಜಾದ್, ಅನುಷಾ, ಹಿತೇಶ್, ಲಂಕೇಶ್, ನಾಗಶ್ರೀ, ರಶ್ಮಿ, ರಮ್ಯಾ, ಸಂದೇಶ, ಸಂಧ್ಯಾ ನಾಯಕ, ಸುಕನ್ಯಾ ನಾಟಕದುದ್ದಕ್ಕೂ ಲವಲವಿಕೆಯ ಅಭಿನಯ ನೀಡಿದರು.  ಈ ನಾಟಕಕ್ಕೆ ಮೂರು ದಿನಗಳಲ್ಲಿ  ಧ್ವನಿ, ಚಲನೆ ಮತ್ತು ಉಸಿರನ್ನು ನೀಡಿ ಜೀವಂತವಾಗಿಸಿದ ನಿರ್ದೇಶಕ ವಾಸುದೇವ ಗಂಗೇರ ಅವರ ಶ್ರಮ ಮತ್ತು ಸೃಜನಶೀಲತೆ ಪ್ರಶಂಸೆಗೆ ಪಾತ್ರವಾಯಿತು. ನಾಟಕದ ವಿನ್ಯಾಸ, ಸಂಗೀತ ನಿರ್ವಹಣೆಯಲ್ಲಿ ಸಹಕರಿಸಿದ ಚಿನ್ನಾ ವಾಸುದೇವ್, ಸದಾನಂದ ಬೈಂದೂರು, ವಿಕ್ರಂ, ಬಾಲಕೃಷ್ಣ ಎಮ್, ಶಂಕರ ಆನಗಳ್ಳಿ ಇವರೆಲ್ಲರ ಶ್ರಮವೂ ನಾಟಕದಲ್ಲಿ ಪ್ರತಿಫಲಿತವಾಗಿತ್ತು.
    ನಾಟಕದ ನಂತರದ ಸಂವಾದದಲ್ಲಿ ಢಾ. ದಿನೇಶ ಹೆಗ್ಡೆ, ಸುಧಾ ಆಡುಕಳ ಮುಂತಾದವರು ಪ್ರತಿಕ್ರಿಯೆ ನೀಡಿದರು. ರಿಸರ್ವೇಷನ್ ಸಿನೇಮಾ ಖ್ಯಾತಿಯ ಶ್ರೀ ಯಾಕೂಬ್ ಖಾದರ್ ಗುಲ್ವಾಡಿ, ಕಿನಾರೆ ಮತ್ತು ಕನ್ನಡ ಶಾಲೆ ಸಿನೆಮಾ ತಂಡದ ಸದಸ್ಯರು ನಾಟಕವನ್ನು ವೀಕ್ಷಿಸಿದರು. ಕೊನೆಯಲ್ಲಿ ಜಿ.ವಿ.ಕಾರಂತರು ಎಲ್ಲರಿಗೂ ವಂದನೆಗಳನ್ನು ತಿಳಿಸಿದರು.

Sunday 1 October 2017

ಗಾಂಧಿ ಜಯಂತಿಯಂದು ನೆನಪಾಗುವ ಸಂಗತಿಗಳಿಗೆ ಪ್ರತಿಕ್ರಿಯಿಸುವ ತುರ್ತಿನಲ್ಲಿ...



ಸೂರ್ಯನ ನೆರಳು

ನಿರ್ದೇಶನ: ವಾಸುದೇವ ಗಂಗೇರ
ರಚನೆ: ಉದಯ ಗಾಂವಕಾರ
ಸಂಗೀತ ನಿರ್ವಹಣೆ: ಸದಾನಂದ ಬೈಂದೂರು, ವಿಕ್ರಂ 
ವಸ್ತ್ರ ವಿನ್ಯಾಸ: ಚಿನ್ನಾ ವಾಸುದೇವ್
ರಂಗ ವಿನ್ಯಾಸ: ಬಾಲಕೃಷ್ಣ ಎಂ
ನಿರ್ವಹಣೆ: ಜಿ.ವಿ.ಕಾರಂತ, ಶಂಕರ ಆನಗಳ್ಳಿ
ಅನುಷಾ
ಅಜಾದ್ ಬೈಂದೂರು
ಹಿತೇಶ್
ಲಂಕೇಶ್
ನಾಗಶ್ರೀ
ಪಾರ್ಥನಾ ಗಾಂವಕಾರ
ರಶ್ಮಿ
ರಮ್ಯಾ
ಸಚಿನ್
ಸ್ಮಿತಾ
ಸಂದೇಶ
ಸಂಧ್ಯಾ ನಾಯಕ
ಶಿವಾನಂದ
ಸುಕನ್ಯಾ


ಅಕ್ಟೋಬರ್ 2, 2017: ಸಂಜೆ 4.00 ಕ್ಕೆ
ಎಚ್ ಎಮ್ ಎಮ್ ಶಾಲೆಯ ಹಳೆಯ ಕಟ್ಟಡ, ಕುಂದೇಶ್ವರ ರಸ್ತೆ, ಕುಂದಾಪುರ

  ಮನುಷ್ಯನ ಚರಿತ್ರೆಯನ್ನು ವಿಚಾರಗಳ ಸಾಹಸ ಎಂದು ಕರೆಯಲಾಗುತ್ತದೆ.  ಪ್ರಶ್ನೆ ಹುಟ್ಟಿಕೊಂಡ ಮರುಗಳಿಗೆಯಲ್ಲೇ ಮನುಷ್ಯ ಹುಟ್ಟಿಕೊಂಡ. ಉಸಿರಾಟ, ಆಹಾರ ಸೇವನೆ, ನಿದ್ದೆ, ಮೈಥುನಗಳು ಮಾತ್ರವೇ ಜೀವಂತಿಕೆಯ ಚಿಹ್ನೆಗಳಲ್ಲ್ಲ; ಪ್ರಶ್ನಿಸುವ ಚೈತನ್ಯ ಕೂಡಾ ಜೀವಂತಿಕೆಯ ಲಕ್ಷಣ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳಬೇಕೆಂದರೆ, ಮನುಷ್ಯನ ಮಟ್ಟಿಗಂತೂ ಜೀವಂತಿಕೆಯ ಲಕ್ಷಣ ಇದೊಂದೆ! ನಾವು ಪ್ರಶ್ನಿಸುತ್ತಿದ್ದೇವೆಂದರೆ ಯೋಚಿಸುತ್ತಿದ್ದೇವೆಂದು ಅರ್ಥ. ಸ್ವತಂತ್ರವಾಗಿ ಯೋಚಿಸುವವರು ಸ್ವತಂತ್ರ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯಗಳಿರುವುದು ಪ್ರತಿಯೊಬ್ಬರಿಗೂ ತಮ್ಮದೇ ಆಸೆ, ಆಮಶಂಕೆ, ಜ್ವರ, ನೆಗಡಿ ಕೆಮ್ಮು ಇರುವಷ್ಟು ಸ್ವಾಭಾವಿಕ. ಸಂವಾದ ಸಂಸ್ಕøತಿಯಿಂದಲೇ ಮನುಷ್ಯ ಸಮಾಜವು ಇಲ್ಲಿಯವರೆಗೂ ಬರೆಲು ಸಾಧ್ಯವಾಗಿದೆ. ದೂರದ ಗಮ್ಯಕ್ಕೂ ಇದೇ ದಾರಿ. ಬುದ್ಧ, ಬಸವ,  ಗಾಂಧಿ, ಅಂಬೇಡ್ಕರ್ ರನ್ನೂ ಒಳಗೊಂಡಂತೆ ಮಾನವ ಇತಿಹಾಸದಲ್ಲಿ ಮಿಂಚಿ ಮರೆಯಾದ ಮಹಾ ಚೇತನಗಳೆಲ್ಲ ಸಂವಾಧದ ಸಮುದ್ರ-ಮಥನದಿಂದ ಉದ್ಭವಿಸಿದವರೇ! ಇಲ್ಲಿ ಯಾರೂ ಗೆಲ್ಲುವುದಿಲ್ಲ, ಯಾರೂ ಸೋಲುವುದಿಲ್ಲ. ಒಬ್ಬರು ಇನ್ನಬ್ಬರನ್ನುಆವಿರ್ಭವಿಸಿಕೊಂಡು ಹೊಸ ಹುಟ್ಟನ್ನು ಪಡೆಯುತ್ತಾರೆ.  ಸೂರ್ಯನಿಗಿಂತ ಪಖರವಾದ ಬೆಳಕಿನ ಹಿನ್ನೆಯಲ್ಲಿ ಮಾತ್ರ ಸೂರ್ಯನ ನೆರಳು ಸಾಧ್ಯ.
ಗಾಂಧಿ ತನ್ನ ಜೀವಿತದ ಪ್ರತಿ ಘಟ್ಟದಲ್ಲೂ ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಅನೇಕ ಪ್ರಶ್ನೆಗಳನ್ನು ಎದುರಿಸುತ್ತಾರೆ. ಅವರ ಸಾವೂ ಅವರು ಕೇಳಿದ ಪ್ರಶ್ನೆಯೇ!
ಸೂರ್ಯನ ನೆರಳು ನಾಟಕವು ಗಾಂಧಿಯ ಸಾವಿನ ನಂತರದ ಪ್ರಶ್ನೆಗಳನ್ನು ಎದುರಿಸುತ್ತದೆ. ಈ ನೆಲದಲ್ಲಿ ಒಡಮೂಡಿದ ವಿವೇಕದಲ್ಲಿ ನೂರಾರು, ಸಾವಿರಾರು ಸಂವಾದಗಳ ತಿಳಿವಿನ ಎಳೆಗಳು ಜೋಡಿಸಿಕೊಂಡಿವೆ. ಆಧುನಿಕ ಕಾಲದ ಗಾಂಧಿ-ಅಂಬೇಡ್ಕರ್, ಗಾಂಧಿ-ಎಮ್ ಎನ್ ರಾಯ್ ರ ನಡುವೆ ಇದ್ದಿರುವ ವ್ಯತ್ಯಾಸಗಳೇ ಉಪನಿಷತ್ತುಗಳಲ್ಲಿ ಬರುವ ಉದ್ಧಾಲಕ ಮತ್ತು ಯಾಜ್ಞವಲ್ಕ್ಯರ ನಡುವೆಯೂ ಇದ್ದವು. ಚಾರ್ವಾಕ, ಬುದ್ಧ, ಬಸವ ಮುಂತಾದವರೆಲ್ಲರೂ ಆಯಾ ಕಾಲದ ಯಥಾಸ್ಥಿತಿವಾದಿಗಳನ್ನು ಪ್ರಶ್ನೆಗಳ ಮೂಲಕ ಎದುರಿಸಿದ್ದರು. ಗಾಂಧಿಯಿಂದ ಅಂಬೇಡ್ಕರ್ ಎಷ್ಟನ್ನು ಪಡೆದುಕೊಂಡಿದ್ದರೋ ಅಷ್ಟನ್ನು ಅಂಬೇಡ್ಕರರಿಂದ ಗಾಂಧಿಯೂ ಪಡೆದುಕೊಂಡಿದ್ದರು. ವೈಚಾರಿಕ ವಿಕಾಸಕ್ಕೆ ಸಂವಾದದ ಜರೂರು ಇದೆ ಎನ್ನುವುದನ್ನು ಈ ನಾಟಕ ಮತ್ತೆ ಮತ್ತೆ ಹೇಳುತ್ತದೆ.
 ನಾಟಕದುದ್ದಕ್ಕೂ ವಿಭಿನ್ನ ಯೋಚನೆ, ಸಿದ್ಧಾಂತಗಳನ್ನು ಮುಖಾಮುಖಿಯಾಗಿಸುತ್ತಲೇ ಯಾವುದನ್ನೂ ಕಡೆಯದೆ, ಯಾವುದನ್ನೂ ಹಿರಿದೆಂದು ಎತ್ತಿಹಿಡಿಯದೆ ನಮ್ಮ ನಡುವೆ ಮಾತುಕತೆ ಅಗತ್ಯ ಎಂಬುದಷ್ಟನ್ನೇ ಈ ನಾಟಕ ಸೂಚಿಸುತ್ತದೆ. ಗಾಂಧಿಯ ಸಾವಿನಿಂದ ಆರಂಭವಾಗುವ ನಾಟಕ ಸಮಯರೇಖೆಯ ಹಿಂದಕ್ಕೂ ಮುಂದಕ್ಕೂ ಚಲಿಸುತ್ತಾ ಕಾಲಾತೀತವಾಗುತ್ತದೆ. ಆಗಾಗ ನಟರು ವರ್ತಮಾನಕ್ಕೆ, ದೈನಿಕದ ಕಡು ವಾಸ್ತವಕ್ಕೆ ಹಿಂದಿರುಗುತ್ತಾರೆ. ಈ ನೆಲದ ಇತಿಹಾಸವನ್ನು ಮತ್ತೆ ಮತ್ತೆ ಮುಟ್ಟಿನೋಡುತ್ತಾರೆ.  ಕೆಲವೊಮ್ಮೆ ಹಠಾತ್ತನೆ ನಾಟಕದಿಂದ ಹೊರಬಂದು ಪ್ರೇಕ್ಷಕರಾಗಿಬಿಡುತ್ತಾರೆ. ಗಾಂಧಿ ಜಯಂತಿಯ ಸಮಯದಲ್ಲಿ ಬೇಡವೆಂದರೂ ನೆನಪಾಗಬಹುದಾದ ಸಂಗತಿಗಳಿಗೆ ಪ್ರತಿಕ್ರಿಯಿಸುವ ತುರ್ತಿನಲ್ಲಿ ಈ ನಾಟಕ ಹುಟ್ಟಿಕೊಂಡಿದೆಯೆಂಬುದನ್ನು ಒಪ್ಪುತ್ತಲೇ ನಾಟಕವನ್ನು ನೋಡಲು ನಿಮ್ಮನ್ನು ಪ್ರೀತಿಯಿಂದ ಒತ್ತಾಯಿಸುತ್ತದೆ ಸಮುದಾಯ.

Tuesday 29 August 2017

ವಿದ್ಯಾರ್ಥಿಗಳ ಮನಸೂರೆಗೊಂಡ ಸಮುದಾಯದ ಕಾವ್ಯರಂಗ














ಯುವಕ-ಯುವತಿಯರ ದೇಹಭಾಷೆಗೆ ಕಾವ್ಯದ ಸಾಹಚರ್ಯವನ್ನು ಒದಗಿಸುವ ಉದ್ಧೇಶದಿಂದ ಸಮುದಾಯ ಕರ್ನಾಟಕ ರೆಪರ್ಟರಿ ರೂಪಿಸಿದ ಕಾವ್ಯರಂಗ ಪ್ರಯೋಗ ಕುಂದಾಪುರದ ಆಸುಪಾಸಿನ ಐದು ಕಾಲೇಜುಗಳಲ್ಲಿ  ಪ್ರದರ್ಶನ ಗೊಂಡು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಯಿತು. ಕುಂದಾಪುರ ಸಮುದಾಯದ ಸಂಯೋಜನೆಯಲ್ಲಿ ಎರಡು ದಿನಗಳಲ್ಲಿ ಸುಮಾರು ಮೂರುಸಾವಿರ ವಿದ್ಯಾರ್ಥಿಗಳನ್ನು ತಲುಪಿದ ಈ ಪ್ರಯೋಗವು ಕನ್ನಡದ ನಾಡು-ನುಡಿ ರೂಢಿಸಿಕೊಂಡುಬಂದ ಸಾಮರಸ್ಯ, ಸಹಬಾಳ್ವೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಕಥನ-ಕಾವ್ಯಗಳನ್ನು ವಿದ್ಯಾರ್ಥಿಗಳಿಗೆ ರಂಗದ ಸಶಕ್ತ ಭಾಷೆಯ ಮೂಲಕ ತಲುಪಿಸುವಲ್ಲಿ ಯಶಸ್ವಿಯಾಯಿತು. ಕವಿರಾಜ ಮಾರ್ಗಕಾರ ನೃಪತುಂಗನಿಂದ ನಾವು ಹುಡುಗಿಯರೇ ಹೀಗೆ ಎಂದ ಪ್ರತಿಭಾ ನಂದಕುಮಾರರವರೆಗೆ, ಭಾರತವನ್ನು ಕನ್ನಡದ ಕಣ್ಣಿನಲ್ಲಿ ಕಂಡ ಪಂಪನಿಂದ ರಾಮಾಯಣವನ್ನು ವೈಚಾರಿಕ ನೆಲೆಯಲ್ಲಿ ಮರುಲೇಖಿಸಿದ ಕುವೆಂಪುವರೆಗೆ, ಮಣ್ಣಿನ ಸಂಗಾತವನ್ನು ಹಪಹಪಿಸಿದ ಕಾರಂತರ ಚೋಮನಿಂದ ವ್ಯವಸ್ಥೆಯ ಕ್ರೌರ್ಯವನ್ನು ವ್ಯಂಗ್ಯದಲ್ಲಿ ತೆರೆದಿಡುವ ದೇವನೂರರ ಸಾಕವ್ವನವರೆಗೆ, ವಚನಕಾರರಿಂದ ತತ್ವಪದಕಾರರವರೆಗೆ ಹೀಗೆ ಕನ್ನಡ ಪರಂಪರೆಯ ಪ್ರಾತಿನಿಧಿಕ ಕೃತಿಗಳ ತುಣುಕುಗಳನ್ನು ಸಂಬಂಧ ಪರಿಕಲ್ಪನೆಯಲ್ಲಿ ಜೋಡಿಸಿ ರಂಗ ನಿರ್ದೇಶಕ ಡಾ ಶ್ರೀಪಾದ ಭಟ್ ನಿರ್ದೇಶಿಸಿದ ಈ ಪ್ರಯೋಗಕ್ಕೆ ಜೀವತುಂಬಿದವರು ಧಾರವಾಡ ಸಮುದಾಯದ ನಟ-ನಟಿಯರು.

 ಬೈಂದೂರು ಪದವಿಪೂರ್ವ ಕಾಲೇಜು, ಬಸ್ರೂರಿನ ಶಾರದಾ ಕಾಲೇಜು, ಬ್ರಹ್ಮಾವರದ ಎಸ್ ಎಮ್ ಎಸ್ ಕಾಲೇಜು, ಕುಂದಾಪುರದ ಡಾ. ಬಿ. ಬಿ .ಹೆಗ್ಡೆ ಕಾಲೇಜು ಮತ್ತು ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ನಡೆದ ಈ ಪ್ರಯೋಗಗಳ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನೂ ಏರ್ಪಡಿಸಲಾಯಿತು. ಯುವಕ-ಯುವತಿಯರು ಮತ್ತೆ ಪುಸ್ತಕಗಳಿಗೆ, ಕಾವ್ಯದ ಕಂಪಿಗೆ ಮರು ಪ್ರಯಾಣ ನಡೆಸಲು ಈ ಪ್ರದರ್ಶನ ಸ್ಪೂರ್ತಿಯಾಗುತ್ತದೆ ಎಂಬ ಭರವಸೆಯನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದರು. ಈ ಪ್ರದರ್ಶನಕ್ಕೆ ಬೆಂಬಲ ನೀಡಿದ ವಿವಿಧ ಕಾಲೇಜುಗಳ ಆಡಳಿತ ವೃಂದ, ಕುಂದಾಪುರದ ರೋಟರಿ ಸಂಸ್ಥೆಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಕೋಟೇಶ್ವರ ಹೋಬಳಿ ಘಟಕ ಮತ್ತು ಉಡುಪಿ ಜಿಲ್ಲೆಯ ಪ್ರೌಢಶಾಲಾ ಕನ್ನಡ ಶಿಕ್ಷಕರ ಸಂಘ ಮತ್ತು ಸಾವಿರ ಸಾವಿರ ಸಂಖ್ಯೆಯ ಸಹೃದಯರಿಗೆ ಕೃತಜ್ಙತೆಗಳು