Monday 15 April 2019

ಸಮುದಾಯ ಕರ್ನಾಟಕ-ಮತದಾರರಲ್ಲಿ ಒಂದು ಮನವಿ

ಭಾರತವಿಂದು ನಿರ್ಣಾಯಕ ಘಟ್ಟ ತಲುಪಿದೆ. ಇನ್ನೊಂದು ಮಹಾಚುನಾವಣೆಗೆ ಸಜ್ಜಾಗಿದೆ. ಈ ಚುನಾವಣೆ ಕೇವಲ ಮುಂದಿನ ಐದು ವರ್ಷದ ಭವಿಷ್ಯವನ್ನಲ್ಲ; ಮತದಾನದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಭವಿಷ್ಯದಲ್ಲಿ ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯೇ ಅರ್ಥ ಕಳೆದುಕೊಳ್ಳುವ ಸಾಧ್ಯತೆ ಇದೆ. ಎಲ್ಲರೂ ಮತದಾನ ಮಾಡುವಂತೆಜಾಗೃತಿ ಮೂಡಿಸುವ ಧನಾತ್ಮಕ ಕೆಲಸ ತಡವಾಗಿ ಯಾದರೂ ನಡೆಯುತ್ತಿದೆ. ಆದರೆ ಕಡ್ಡಾಯ ಮತದಾನ ಮಾಡಬೇಕು ಎನ್ನುವುದು ಎಷ್ಟು ಮುಖ್ಯವೋ, ಯಾರಿಗೆ ಮತದಾನ ಮಾಡಬೇಕು ಎನ್ನುವುದು ಕೂಡ ಅಷ್ಟೇ ಮುಖ್ಯವಾದುದು ಎಂದು ಸಮುದಾಯ ಕರ್ನಾಟಕ ಭಾವಿಸುತ್ತದೆ.
ಸ್ವಾತಂತ್ರ್ಯ ಬಂದು ಏಳು ದಶಕಗಳು ಆಗುತ್ತಿದ್ದರೂ ಅನ್ನ-ನೀರು-ಸೂರು-ಅಕ್ಷರ ಎಲ್ಲ ಜನರನ್ನೂ ತಲುಪಲಾರದ ದೌರ್ಬಲ್ಯ ನಮ್ಮದಾಗಿದೆ. ಪ್ರಜಾಪ್ರಭುತ್ವದ ಅಡಿಗಲ್ಲಾದ ಪ್ರಜೆಗಳ ಭೌತಿಕ ಅಗತ್ಯತೆಯನ್ನು ಪೂರೈಸುವ ಕುರಿತು ಇಂದು ಚರ್ಚಿಸುವ ಬದಲು ದೇವರು-ಧರ್ಮ-ಜಾತಿಯಂಥ ಭಾವನಾತ್ಮಕ ಸಂಗತಿಯ ಕುರಿತು ಒತ್ತು ಕೊಟ್ಟು ಮತದಾರರ ದಿಕ್ಕು ತಪ್ಪಿಸುವ ಕೆಲಸ ನಡೆಸಲಾಗುತ್ತಿದೆ. ಕಳೆದ ಚುನಾವಣೆಗಳಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿನ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳಲು ಹಲವು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಅನ್ಯ ಮಾರ್ಗ ಹಿಡಿದುದೇಶದ ಭವಿಷ್ಯದ ಕುರಿತ ಚರ್ಚೆಯ ದಿಕ್ಕನ್ನೇ ಬದಲಿಸುತ್ತಿದ್ದಾರೆ. ದೇಶದ ಜನತೆಯ ಆಶಯದ ಭಾಗವಾಗಿ ರೂಪಿತವಾದ ನಮ್ಮ ಸಂವಿಧಾನ ಜಾತಿ, ಮತ, ಪ್ರದೇಶ, ಬಣ್ಣ, ಲಿಂಗ, ಭಾಷೆ ಇತ್ಯಾದಿ ಯಾವ ತಾರತಮ್ಯವಿಲ್ಲದೆ ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಕಳೆದ ಐದು ವರ್ಷಗಳಿಂದ ನಡೆದ ಬೆಳವಣಿಗೆ ನೋಡಿದರೆ ಆಳುವ ವರ್ಗ ಸಂವಿಧಾನವನ್ನೇ ಅಮಾನ್ಯ ಮಾಡುವ ಕಡೆಗೆ ಹೆಜ್ಜೆ ಹಾಕುತ್ತಿದೆ. ಸಾಮಾಜಿಕ ನ್ಯಾಯ, ರೂಲ್ ಆಫ್ ಲಾ, ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆ, ಕಲ್ಯಾಣ ರಾಜ್ಯದ ಕಲ್ಪನೆ, ಮಾನವ ಹಕ್ಕುಗಳು, ಜಾತ್ಯತೀತತೆ ಮತ್ತು ಧರ್ಮ ನಿರಪೇಕ್ಷತೆ ಹೀಗೆ ಒಟ್ಟಾರೆಯಾಗಿ ಭಾರತದ ಬಹುತ್ವದ ಮೇಲೆ ಅಕ್ಷರಶಃ ಮಾರಣಾಂತಿಕ ಹಲ್ಲೆ ನಡೆಯುತ್ತಿದೆ.
ದಲಿತರ ಮೇಲಿನ ದೌರ್ಜನ್ಯ ಹೆಚ್ಚಿದೆ. ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಏರಿಕೆಯಾಗಿದೆ. ಅಲ್ಪ ಸಂಖ್ಯಾತರ ಮೇಲಿನ ದಾಳಿ ಗರಿಷ್ಟ ಮಟ್ಟಕ್ಕೆ ಮುಟ್ಟಿದೆ. ವಿದ್ಯಾರ್ಥಿ ಯುವಜನರಿಗೆ ಉಚಿತ ಶಿಕ್ಷಣ-ಉದ್ಯೋಗ ಕೊಡುವ ಬದಲು ಧರ್ಮಾಧಾರಿತ ಹಿಂಸೆಗೆ ಅವರನ್ನು ಪ್ರಚೋದಿಸಲಾಗುತ್ತದೆ. ಬುದ್ಧ ನಡೆದಾಡಿದ ನೆಲದಲ್ಲಿ ಯುದ್ದೋನ್ಮಾದವನ್ನು ಸೃಷ್ಟಿಸಲಾಗುತ್ತಿದೆ. ಭಾರತದ ಹೆಮ್ಮೆಯ ಸೈನ್ಯವನ್ನೇ ರಾಜಕೀಯಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ದ್ವೇಷದ ರಾಜಕೀಯವು ದೇಶವನ್ನು ಒಡೆಯುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಶಾಂತಿ ಕದಡಿದೆ. ಪ್ರಗತಿ ಕುಂಠಿತವಾಗಿದೆ. ಹಿಂಸೆ ಹೆಚ್ಚುತ್ತಿದೆ. ಜನರನ್ನು ಭಯ ಮತ್ತು ಅಭದ್ರತೆ ಕಾಡುತ್ತಿದೆ.
ಕೋಮುವಾದ ಮತ್ತು ಧಾರ್ಮಿಕ ಮೂಲಭೂತವಾದವನ್ನು ಪ್ರಶ್ನಿಸುವವರ ಮೇಲೆ ಧಾಳಿ ಮಾಡುವ ಮೂಲಕ ಭೀತಿಯ ವಾತಾವರಣ ಹುಟ್ಟುಹಾಕಲಾಗುತ್ತಿದೆ. ತಮ್ಮ ಆಣತಿಯನ್ನು ಪಾಲಿಸದ ಪನ್ಸಾರೆ, ದಾಭೋಲ್ಕರ್, ಕಲಬುರ್ಗಿ, ಗೌರಿ...ಹೀಗೆ ಹಲವರನ್ನು ಸಾಯಿಸಲಾಗಿದೆ. ಬರಹಗಾರರು, ಕಲಾವಿದರು, ಸಂಗೀತಗಾರರು, ಅಧ್ಯಾಪಕರು, ಪತ್ರಕರ್ತರನ್ನೂ ಒಳಗೊಂಡು  ಸಾಂಸ್ಕøತಿಕ ವಲಯದ ಪ್ರಜ್ಞಾವಂತರು ನಾಡಿನ ಬಹುತ್ವವನ್ನು ಬೆಂಬಲಿಸಿ ಮಾತನಾಡಿದಾಗ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಲಾಗುತ್ತಿದೆ. ಪ್ರತಿರೋಧದ ದನಿಯನ್ನೇ ಅಡಗಿಸುವ ಮೂಲಕ ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳುವ ಹುನ್ನಾರ ನಡೆದಿದೆ. ಆರ್ಥಿಕ, ಸಾಂಸ್ಕøತಿಕ, ಸಾಮಾಜಿಕ ತುರ್ತು ಪರಿಸ್ಥಿತಿಯನ್ನು ಅಘೋಷಿತವಾಗಿ ಜಾರಿಗೊಳಿಸಲಾಗುತ್ತಿದೆ.
ಅಂತರ್‍ಧರ್ಮೀಯರ ಮದುವೆ, ಸ್ನೇಹಕೂಟ, ಭಿನ್ನ ಉಡುಪು, ಭಿನ್ನ ಆಹಾರ, ಭಿನ್ನ ನಂಬಿಕೆಯ ಮೇಲೆ ನೈತಿಕ ಪೋಲಿಸ್ ಗಿರಿ, ಗೋರಕ್ಷಣೆ ಮತ್ತು ಮರ್ಯಾದಾ ಹತ್ಯೆಯ ಹೆಸರಿನಲ್ಲಿ ಕಾನೂನು ಬಾಹಿರ ದಾಳಿ ಮುಂದುವರೆದಿದೆ.
ಸಂವಿಧಾನದ ಹೆಸರಿನಲ್ಲಿ ಪ್ರತಿಜ್ಞೆ ಮಾಡಿ ಅಧಿಕಾರಕ್ಕೆ ಬಂದ ಜನಪ್ರತಿನಿಧಿಗಳು ಸಂವಿಧಾನ ಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ. ಸಂವಿಧಾನಕ್ಕೆ ಅವಮಾನ ಮಾಡಲಾಗುತ್ತಿದೆ. ಜನಪ್ರತಿನಿಧಿಗಳೇ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕೊಲೆ ಸುಲಿಗೆಯಂಥ ಕ್ರಿಮಿನಲ್ ಕೆಲಸದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಂತವರನ್ನು ಶಿಕ್ಷಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.
ಇಂತಹ ಪರಿಸ್ಥಿತಿ ಬದಲಾಗಬೇಕಿದೆ. ಸಂವಿಧಾನದತ್ತ ಹಕ್ಕುಗಳು ನಿರಂತರವಾಗಿರಬೇಕಾದರೆ ಈ ನಾಡಿನ ಜೀವವಾದ ಸಹಿಷ್ಣುತೆ, ಸೋದರತೆ, ಸೌಹಾರ್ದತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸಬೇಕಿದೆ. ಏಕ ಸಂಸ್ಕøತಿ, ಏಕ ಭಾಷೆ, ಏಕ ಧರ್ಮವನ್ನು ಪ್ರತಿಪಾದಿಸುವವರನ್ನು ಸೋಲಿಸಬೇಕಾಗಿದೆ. ಸಂವಿಧಾನವನ್ನು ಬದಲಾಯಿಸಿ ಮನುಸ್ಮೃತಿಯನ್ನು ಜಾರಿಗೆ ತರಬೇಕೆಂದು ಬಯಸುವವರನ್ನು ತಿರಸ್ಕರಿಸಬೇಕಿದೆ. ಅದಕ್ಕಾಗಿ ಈ ಚುನಾವಣೆಯಲ್ಲಿ ಕೋಮುವಾದ, ಜಾಗತೀಕರಣ ಮತ್ತು ಜಾತಿವಾದಿ ವ್ಯಕ್ತಿಗಳನ್ನು, ಪಕ್ಷಗಳನ್ನು ಸೋಲಿಸುವ ಮೂಲಕ ಬಹುತ್ವ ಮತ್ತು ಸಮಾನ ಭಾರತವನ್ನು ಕಟ್ಟಲು ಮತದಾರರು ಮುಂದಾಗಬೇಕೆಂದು ಸಮುದಾಯ ಕರ್ನಾಟಕ ಕಳಕಳಿಯ ಮನವಿ ಮಾಡುತ್ತದೆ. ಆ ಮೂಲಕ ಭಾರತದ ಸಂವಿಧಾನವನ್ನು ಗೆಲ್ಲಿಸಬೇಕಾಗಿದೆ. ಸದ್ಯದ ಸಾಂಸ್ಕೃತಿಕ  ಬಿಕ್ಕಟ್ಟಿನಿಂದ ದೇಶವನ್ನು ರಕ್ಷಿಸುವ ಕಡೆಗೆ ಮತದಾರರು ಮುಂದಾಗಬೇಕೆಂದು, ಜನತೆಯಲ್ಲಿ ಈ ತಿಳುವಳಿಕೆಯನ್ನು ವಿಸ್ತರಿಸಬೇಕೆಂದು ವಿನಂತಿ ಮಾಡುತ್ತದೆ.