ಗೆಳೆಯರೆ,
ಇದು ನಮ್ಮ ಕಾಲದ ಕರೆಯಾಗಿದೆ. ನಾವು ಬರಹಗಾರರು, ಕಲಾವಿದರು, ಮಾಧ್ಯಮಗಳಲ್ಲಿ ಕೆಲಸಮಾಡುವವರು, ಕ್ರಿಯಾಶೀಲರು ಎಲ್ಲರೂ ಒಂದುಗೂಡಲೇಬೇಕಾದ ಕಾಲವು ಬಂದಿದೆ. ಏಕೆಂದರೆ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ, ಅದರ ಮೌಲ್ಯಗಳನ್ನು ನಾಶಪಡಿಸಿ ಫ್ಯಾಸಿಸ್ಟ್ ವ್ಯವಸ್ಥೆಯೊಂದನ್ನು ತರಲು ಹೊರಟಿರುವ ಮತ್ತು ಈ ಕೆಲಸಕ್ಕೆ ಅನುವಾಗುವಂತೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅನೇಕ ಪ್ರಕಾರದ ಹಿಂಸೆಗಳ ಮೂಲಕ ಹತ್ತಿಕ್ಕುವ ಉದ್ದೇಶವುಳ್ಳ ರಾಜಕೀಯ ಶಕ್ತಿಗಳು, ಪಕ್ಷಗಳು ಹಾಗೂ ಸಂಸ್ಥೆಗಳು ಇಂದು ಪ್ರಬಲಗೊಳ್ಳುತ್ತಿವೆ. ನಿಜಕ್ಕೂ ಇದು ತಲ್ಲಣಗೊಳಿಸುವಂತಿದೆ. ದಾಬೋಲ್ಕರ್, ಪಾನ್ಸರೆ ಮತ್ತು ಕಲಬುರ್ಗಿಯವರ ಹತ್ಯೆಗಳ ಮೂಲಕ ಚಿಂತನೆಮಾಡುವ, ಪ್ರಶ್ನೆಗಳನ್ನು ಕೇಳುವ ಹಾಗೂ ಭಿನ್ನಮತವನ್ನು ಧೈರ್ಯವಾಗಿ ಮಂಡಿಸುವ ವಿಚಾರವಂತರನ್ನೂ ಸುಮ್ಮನಾಗಿಸುವ ಪ್ರಯತ್ನವನ್ನು ಮಾಡಲಾಯಿತು. ಆದರೆ ಈ ಹತ್ಯೆಗಳು ಭೀತಿಯ ಬದಲಾಗಿ ಬರಹಗಾರರಲ್ಲಿ, ವಿಚಾರವಂತರಲ್ಲಿ ಒಗ್ಗಟ್ಟು ಹಾಗೂ ಪ್ರತಿಭಟನೆಯನ್ನು ತಂದವು. ಪ್ರಶಸ್ತಿ ವಾಪಸಿಯಂತಹ ಸಾರ್ವಜನಿಕ ಪ್ರತಿರೋಧದ ಮೂಲಕ ಒಂದು ಮಹತ್ವಪೂರ್ಣ ಸಂಚಲನವು ಆರಂಭವಾಯಿತು. ಆದರೆ, ಇನ್ನೊಂದೆಡೆಗೆ ದಲಿತ ವಿದ್ಯಾರ್ಥಿ ರೋಹಿತ್ ವೇಮುಲನ ಆತ್ಮಹತ್ಯೆ, ಜೆ.ಎನ್.ಯು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಗಳು, ಗೋಮಾಂಸದ ನೆಪದಲ್ಲಿ ದಾದ್ರಿಯ ಅಖ್ಲಾಕ್ನ ಕೊಲೆ, ದೇಶದುದ್ದಕ್ಕೂ ದೈಹಿಕ ಹಲ್ಲೆಗಳು ಇವುಗಳು ತಡೆಯಿಲ್ಲದೆ ನಡೆಯುತ್ತ ಬಂದವು. ಇವು ಬಿಡಿಬಿಡಿಯಾಗಿ ನಡೆದ ಘಟನೆಗಳಾಗಿದ್ದರೂ ಅವು ಸ್ಪಷ್ಟವಾಗಿಯೇ ಒಂದು ಬಗೆಯ ಸಿದ್ಧಾಂತ, ಒಂದು ಬಗೆಯ ರಾಜಕೀಯದ ಬೆಳವಣಿಗೆಯ ಪರಿಣಾಮಗಳಾಗಿರುವುದು ಸ್ಪಷ್ಟವಾಗಿದೆ. ಇಂದು ಸಂದರ್ಭದ ವಿಶಿಷ್ಟತೆಯನ್ನು ಒಟ್ಟುಗೂಡಿಸಿ ನೋಡಿದರೆ ಈ ವಿದ್ಯಮಾನದ ಚಿತ್ರವು ಸಮಗ್ರವಾಗಿ ಕಾಣತೊಡಗುತ್ತದೆ. ಈ ವಿಶಿಷ್ಟತೆಗಳು ಹೀಗಿವೆ:
•
ಕೋಮುವಾದಿ ಗಲಭೆ ಹಾಗೂ ಹಿಂಸೆಗಳ ಮೂಲಕ ದೇಶದ ಜನರನ್ನು ಒಡೆದು, ಆಕ್ರಾಮಕವಾದ ಹುಸಿ ರಾಷ್ಟ್ರವಾದದ ಮೂಲಕ ಅಪನಂಬಿಕೆ ಹಾಗೂ ದ್ವೇಷಗಳನ್ನು ಹುಟ್ಟುಹಾಕಿ ಅವುಗಳ ಮೂಲಕ ಚುನಾವಣಾ ರಾಜಕೀಯದಲ್ಲಿ ಅಧಿಕಾರಕ್ಕೆ ಬಂದ ರಾಜಕೀಯ ಶಕ್ತಿಯು ಪ್ರಜಾಪ್ರಭುತ್ವದಿಂದ ತನಗೆ ಇರುವ ಅಪಾಯಗಳನ್ನು ಅರ್ಥಮಾಡಿಕೊಂಡಿದೆ. ಜನರು ನಿರ್ಭೀತರಾಗಿ ಚಿಂತನೆಮಾಡಿ ತಮ್ಮ ನಿಲುವುಗಳನ್ನು ಯಾವ ಭೀತಿಯು ಇಲ್ಲದೇ ಅಭಿವ್ಯಕ್ತಿಸಿ ಒಂದುಗೂಡತೊಡಗಿದರೆ ಪ್ರಜಾಪ್ರಭುತ್ವವು ಗಟ್ಟಿಗೊಳ್ಳುತ್ತದೆ. ಹಾಗೆ ಆದರೆ ಫ್ಯಾಸಿಸ್ಟ್ ರಾಜಕೀಯವು ಬೆಳೆಯಲಾಗದು.
•
ಆದ್ದರಿಂದಾಗಿ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಚುನಾವಣ ರಾಜಕೀಯದಿಂದಾಗಿ ಅಧಿಕಾರಕ್ಕೆ ಬಂದ ಕೂಡಲೇ ಈ ಪ್ರಜಾಪ್ರಭುತ್ವದ ಜೀವಾಳವೇ ಆಗಿರುವ ಮೌಲ್ಯಗಳನ್ನು ಹಾಗೂ ಸಂಸ್ಥೆಗಳನ್ನು ನಾಶಮಾಡಲು ತೊಡಗುವುದು ಫ್ಯಾಸಿಸಮ್ನ ಲಕ್ಷಣವಾಗಿದೆ.
•
ಅದರ ಪ್ರಮುಖ ಗುರಿಗಳೆಂದರೆ ಶಿಕ್ಷಣವಲಯ (ಅದರಲ್ಲೂ ವೈಚಾರಿಕ ಮುಂದಾಳತ್ವವನ್ನು ಕೊಡಬಲ್ಲ ವಿಶ್ವವಿದ್ಯಾನಿಲಯಗಳು), ಮಾಧ್ಯಮಗಳು, ಸರಕಾರೇತರ ನಾಗರೀಕ ಸಂಸ್ಥೆಗಳು, ವೈಚಾರಿಕ ಹಾಗೂ ಸಾಂಸ್ಕøತಿಕ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು ಮತ್ತು ಪ್ರಮುಖವಾಗಿ ತನ್ನ ವಿರುದ್ಧ ಯಾವುದೇ ಬಗೆಯ ಪ್ರತಿಭಟನೆ ಮಾಡುವ ರಾಜಕೀಯ ಪಕ್ಷಗಳು ಹಾಗೂ ಚಳುವಳಿಗಳು.
•
ಇವುಗಳನ್ನು ಗುರಿಯಾಗಿಟ್ಟುಕೊಂಡು ಅದು ಬಳಸುವ ಮುಖ್ಯ ಸಾಧನವೆಂದರೆ ಹಿಂಸೆಯ ಅನೇಕ ಬಗೆಗಳು. ಉದಾಹರಣೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಪರವಾಗಿರುವವರು ಹಾಗೂ ಬಾಡಿಗೆ ಬಂಟರ ಮೂಲಕ ಬಳಸುವ ಶಾಬ್ದಿಕ ಹಾಗೂ ಮಾನಸಿಕ ಹಿಂಸೆ, ಎರಡನೇಯದು ಬೆದರಿಕೆ. ವಿಶೇಷವಾಗಿ ವಿರೋಧಿ ದನಿಯು ಮಹಿಳೆಯರದ್ದಾಗಿದ್ದರೆ ಅವರ ಮೇಲೆ ಮಾನಭಂಗ ಮಾಡುವ ಬೆದರಿಕೆಗಳು, ಅವರನ್ನು ಅವಮಾನಗೊಳಿಸುವ ರೀತಿಯಲ್ಲಿ ಣಡಿoಟಟ ಮಾಡಲಾಗುತ್ತಿದೆ. ವಿಶ್ವವಿದ್ಯಾನಿಲಯ ಹಾಗೂ ಕಾಲೇಜುಗಳಲ್ಲಿ ಈ ರಾಜಕೀಯ ಪಕ್ಷದ ವಿದ್ಯಾರ್ಥಿ ಸಂಘಟನೆಯು ಇತ್ತೀಚಿನ ದಿನಗಳಲ್ಲಿ ನೇರವಾಗಿ ದೈಹಿಕ ಹತ್ಯೆಗಳಲ್ಲಿ ತೊಡಗಿದೆ. ಜೆ.ಎನ್.ಯು. ಹಾಗೂ ಇತ್ತೀಚೆಗೆ ದೆಹಲಿ ವಿಶ್ವವಿದ್ಯಾಲಯದ ರಾಜಮಾಸ್ ಕಾಲೇಜಿನಲ್ಲಿ ಇದನ್ನು ನೋಡಿದ್ದೇವೆ. ವಿಚಾರವಂತ ಅಧ್ಯಾಪಕರು, ಬರಹಗಾರರ ಮೇಲೆ ರಾಷ್ಟ್ರದ್ರೋಹ ಮುಂತಾದ ಕೇಸುಗಳನ್ನು ಹಾಕುವುದು, ಅವರ ಕಾರ್ಯಕ್ರಮಗಳನ್ನು ರದ್ದು ಮಾಡುವುದು, ಅವರನ್ನು ಆಹ್ವಾನಿಸಿದವರನ್ನು ಪೀಡಿಸುವುದು ಇದು ಇನ್ನೊಂದು ಬಗೆಯ ಹಿಂಸೆ.
•
ಇದಕ್ಕೆ ಬೆಂಬಲವಾಗುವ ರೀತಿಯಲ್ಲಿ ಕೋಮುವಾದಿ, ಹುಸಿ ರಾಷ್ಟ್ರವಾದಿ, ಸ್ತ್ರೀ ಹಾಗೂ ದಲಿತ ವಿರೋಧಿ ಸಿದ್ಧಾಂತಗಳನ್ನು ನಾಗರೀಕ ಸಮಾಜದಲ್ಲಿ ವ್ಯವಸ್ಥಿತವಾಗಿ ಹರಿಬಿಡಲಾಗುತ್ತಿದೆ. ಇಂಥ ದುಷ್ಟ ಚಿಂತನೆಗಳನ್ನು ನಮ್ಮ ಜನರ
common
sense ಆಗಿ ಪರಿವರ್ತಿಸುವ ಯಶಸ್ವಿ ಪ್ರಯೋಗಗಳು ನಡೆಯುತ್ತಿವೆ.
ಇವೆಲ್ಲವುಗಳನ್ನು ನೋಡಿದರೆ ನಮ್ಮ ಕಾಲದ ಗೋಡೆಯ ಮೇಲಿನ ಬರಹವು ಅತಿ ಸ್ಪಷ್ಟವಾಗಿದೆ. ಫ್ಯಾಸಿಜಮ್ ಅಂದರೆ ಏನು ಎನ್ನುವ ಚರ್ಚೆ ಆರಂಭವಾಗುವ ಮೊದಲೇ ಅದು ಸಾಂಸ್ಥಿಕವಾಗಿ, ರಾಜಕೀಯವಾಗಿ ಸಾಮಾಜಿಕವಾಗಿ ಪ್ರಬಲವಾಗಿ ಬೆಳೆಯುತ್ತಿದೆ. ಈ ಸನ್ನಿವೇಶದಲ್ಲಿ ನಾವೆಲ್ಲ ಒಂದುಗೂಡದಿದ್ದರೆ ನಮಗೆ ಉಳಿಗಾಲವಿಲ್ಲ. ಈ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ. ಆದ್ದರಿಂದ ಇದು ಒಂದು ರೀತಿಯಲ್ಲಿ ಕೊನೆಯ ಹೋರಾಟವೂ ಹೌದು. ಕೊನೆಯಿಲ್ಲದ ಹೋರಾಟವೂ ಹೌದು. ಘೋಷಣೆಯ ಶೈಲಿಯಲ್ಲಿ ಈ ಮಾತುಗಳನ್ನು ಹೇಳಬೇಕಾಗಿ ಬಂದಿರುವುದು ನಮ್ಮ ಕಾಲದ ಅನಿವಾರ್ಯತೆಯಾಗಿದೆ.
ಈಗ ನಾವು ಮಾಡಬೇಕಾಗಿರುವುದು ಏನು? ಫ್ಯಾಸಿಜಮ್ ವಿರುದ್ಧವಿಡುವ, ಪ್ರಜಾಪ್ರಭುತ್ವ ಹಾಗೂ ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ನಂಬಿಕೆ ಇರುವ ಎಲ್ಲಾ ಬರಹಗಾರರು, ಕಲಾವಿದರು, ಕ್ರಿಯಾಶೀಲರು, ಮಾಧ್ಯಮದವರು ಒಂದುಗೂಡೋಣ. ನಾವು ಅನೇಕ ಸಂಘಟನೆಗಳಿಗೆ ಸೇರಿರಬಹುದು. ರಾಜಕೀಯ ಪಕ್ಷಗಳ ಸದಸ್ಯರಾಗಿರಬಹುದು ಅಥವಾ ಬೆಂಬಲಿಗರಾಗಿರಬಹುದು. ಈಗಾಗಲೇ ಅರ್ಥಪೂರ್ಣವಾಗಿ ನಡೆಯುತ್ತಿರುವ ಚಳುವಳಿಗಳಲ್ಲಿ ಭಾಗಿಯಾಗಿರಬಹುದು. ಇದಾವುದನ್ನೂ ಬಿಟ್ಟುಕೊಡದೇ ಫ್ಯಾಸಿಜಮ್ನ ವಿರುದ್ಧ ಪ್ರಜಾಪ್ರಭುತ್ವವಾದಿ ಹೋರಾಟಕ್ಕಾಗಿ ದಕ್ಷಿಣಾಯಣದ ಹೆಸರಲ್ಲಿ ಒಂದುಗೂಡೋಣ. ದಕ್ಷಿಣಾಯಣ ಏಕೆ ಎಂದರೆ ಅದು ಒಂದು ಸಂಸ್ಥೆಯಲ್ಲ. ಸಂಘಟನೆಯಲ್ಲ. ಅದು ಫ್ಯಾಸಿಜಮ್ ವಿರುದ್ಧ ಪ್ರಜಾಪ್ರಭುತ್ವದ ಪರವಾಗಿರುವ, ಅಭಿವ್ಯಕ್ತಿ ಸ್ವಾತಂತ್ರವನ್ನು ಉಳಿಸ ಬಯಸುವ ಬರಹಗಾರ, ಕಲಾವಿದರ ಒಂದು ಚಳುವಳಿ ಮಾತ್ರ. ಇದರಲ್ಲಿ ಈಗಾಗಲೇ ಭಾರತದ ಅನೇಕ ಭಾಷೆಗಳ ಬರಹಗಾರರು ಸೇರಿಕೊಂಡು ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಇದರ ಬಗ್ಗೆ ದೇಶದ ಪ್ರಮುಖ ಬರಹಗಾರರು, ಚಿಂತಕರು ಆಗಿರುವ ಶ್ರೀ ಗಣೇಶ್ ದೇವಿಯವರ ಟಿಪ್ಪಣಿಯನ್ನು ನೋಡಿ.
ಜನಪರ ಚಳುವಳಿಗಳಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುವ ಕನ್ನಡದ ಬರಹಗಾರರು ಕಲಾವಿದರು ಕ್ರಿಯಾಶೀಲರು ಸೇರಿ ದಕ್ಷಿಣಾಯಣ ಕರ್ನಾಟಕದ ಹೆಸರಿನಲ್ಲಿ ಒಂದುಗೂಡಬೇಕಿದೆ. ಅದಕ್ಕಾಗಿ ಏಪ್ರಿಲ್ 8 ರಂದು ಶಿವಮೊಗ್ಗದಲ್ಲಿ ಸಮಾವೇಶವನ್ನು ಏರ್ಪಡಿಸುತ್ತಿದ್ದೇವೆ. ಇದು ವಿಚಾರಸಂಕಿರಣವಲ್ಲ; ಅತಿಥಿಗಳೂ ಇರುವುದಿಲ್ಲ. ಇದು ಒಂದು ಸಹಚಿಂತನೆ ಹಾಗೂ ಸಮಾಲೋಚನೆಯ ಸ್ವರೂಪದ್ದು. ನಾವು ತುರ್ತಾಗಿ, ಅಗತ್ಯವಾಗಿ ನಮ್ಮೆಲ್ಲ ಶಕ್ತಿಗಳನ್ನು ಬಳಸಿಕೊಂಡು ಮಾಡಬೇಕಾದುದರ ಬಗ್ಗೆ ಸ್ಪಷ್ಟತೆ ಪಡೆದುಕೊಂಡು ಮಾಡಬೇಕಾದ ಕೆಲಸಗಳನ್ನು ಆರಂಭಿಸಲು ಒಂದು ವೇದಿಕೆ. ದಯವಿಟ್ಟು ಬನ್ನಿ. ಈ ಟಿಪ್ಪಣಿ ಮತ್ತು ಗಣೇಶ್ ದೇವಿಯವರ ಟಿಪ್ಪಣಿಗಳನ್ನು ಕಳಿಸಿದ್ದೇವೆ. ನಾವು ಅಂದುಕೊಂಡಿದ್ದುದು ಸರಿಯೆನಿಸಿದರೆ, ನೀವು ಸಹಭಾಗಿಯಾಗಬೇಕೆನಿಸಿದರೆ ನಮಗೆ ಬರೆಯಿರಿ.email ಮಾಡಿ.
ರಾಜೇಂದ್ರ ಚೆನ್ನಿ
ಸಂಪರ್ಕಕ್ಕಾಗಿ:
ರಾಜೇಂದ್ರ ಚೆನ್ನಿ, ಇಂಗ್ಲಿಷ್ ಪ್ರಾಧ್ಯಾಪಕರು, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ- 577 451
email: rajendrachenni@gmail.com
mobile: 9449553349
http://samudayakarnataka.blogspot.in/2017/04/dakshinayana-note-from-prof-ganesh-devy.html