Tuesday 18 December 2018

ಸಹಯಾನ ಸಾಹಿತ್ಯೋತ್ಸವ-ಭಾರತ ಸಂವಿಧಾನ : ಹೊಸ ತಲೆಮಾರು



ಸರ್ವಾಧ್ಯಕ್ಷರು 
ಸಹಯಾನ ಸಾಹಿತ್ಯೋತ್ಸವ- 30 ಡಿಸೆಂಬರ್, 2018, ರವಿವಾರ

                   ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ಅವರಿಗೆ ಸರ್ವಾಧ್ಯಕ್ಷ ಗೌರವ
ಡಿಸೆಂಬರ್ 30, 2018 ರಂದು ರವಿವಾರ ರಾಜ್ಯ ಮಟ್ಟದ ಸಹಯಾನ ಸಾಹಿತ್ಯೋತ್ಸವವನ್ನು ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. “ಭಾರತ ಸಂವಿಧಾನ: ಹೊಸ ತಲೆಮಾರು” ಎನ್ನುವ ವಿಷಯದ ಮೇಲೆ 8 ನೇ ರಾಜ್ಯ ಮಟ್ಟದ ಸಾಹಿತ್ಯೋತ್ಸವ ನಡೆಯುತ್ತಿದ್ದು ಸರ್ವಾಧ್ಯಕ್ಷತೆಯನ್ನು ಖ್ಯಾತ ಸಂಸ್ಕøತಿ ಚಿಂತಕರೂ ಸಂವಿಧಾನ ತಜ್ಞರೂ ಆದ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಎಚ್. ಎನ್. ನಾಗಮೋಹನದಾಸ್ ವಹಿಸಲಿದ್ದಾರೆ.

ಸರ್ವಾಧ್ಯಕ್ಷತೆ ವಹಿಸಿಕೊಳ್ಳುತ್ತಿರುವ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ಅವರು ಮೂಲತಃ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಹಿನ್ನೆಲೆಯಿಂದ ಬಂದವರು. ಕರ್ನಾಟಕದಲ್ಲಿ ನಡೆದ ಹಲವು ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿರುವ ಅವರು ಹುಟ್ಟಿದ್ದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಹೆಬ್ಬಣ್ಣಿ ಗ್ರಾಮದಲ್ಲಿ 1952ರ ಫೆಬ್ರುವರಿ 12ರಂದು. ತಂದೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎನ್.ನಾಗಪ್ಪ. ತಾಯಿ ಪಾರ್ವತಮ್ಮ.
ಪ್ರಾಥಮಿಕ ಮತ್ತು ಪೌಢ ಶಿಕ್ಷಣವನ್ನು ಕನ್ನಡ ಶಾಲೆಯಲ್ಲಿ ಕಲಿತ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು. ಅಖಿಲ ಭಾರತ ವಕೀಲರ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಯಂಗ್ ಅಡ್ವೊಕೇಟ್ಸ ಫೋರಂನ ಸಂಸ್ಥಾಪಕರು ಇವರು. ಮತ್ತು ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯಲ್ಲಿ ಸದಸ್ಯರಾಗಿ ಸಕ್ರಿಯ ಪಾತ್ರವಹಿಸಿದ್ದಾರೆ.  2004ರ ಅಕ್ಟೋಬರ್‍ನಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕ. 2014ರಿಂದ ದೆಹಲಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ವಕೀಲರಾಗಿ ನೇಮಕ. ಬಾಬಾಬುಡನ್ ಗಿರಿ ಆಯೋಗ, ಲಿಂಗಾಯತ ಸ್ವತಂತ್ರ ಧರ್ಮದ ಕುರಿತ ಆಯೋಗ…ಹೀಗೆ ರಾಜ್ಯ ಸರಕಾರದ ಹಲವು ಆಯೋಗಗಳ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ ಖ್ಯಾತಿ ಇವರದು. ಒಳ್ಳೆಯ ವಾಗ್ಮಿಗಳೂ, ಬರಹಗಾರರೂ ಆಗಿರುವ ಇವರ ಪುಸ್ತಕಗಳು: 
1. ಸಮಾಜವಾದ; 2. ಕರ್ನಾಟಕದಲ್ಲಿ ನ್ಯಾಯಾಂಗ, 3. ಅಸ್ಪøಶ್ಯತೆ, ಸಮಾಜ ಮತ್ತು ಕಾನೂನು; 4. ಅರಿವು ಬೆಳಕು; 5. ಮಹಿಳಾ ಅಸಮಾನತೆ; 6. ಛಾಲೆಂಜಸ್ ಆ್ಯಂಡ್ ಪ್ರಾಬ್ಲೆಮ್ಸ ಬಿಫೋರ್ ಯಂಗ್ ಲಾಯರ್ಸ್; 7. ಚಾಲೆಂಜಸ್ ಟು ದ ಕಾನ್ಸ್ಟಿಟ್ಯೂಷನ್; 8. ಜಾಗತಿಕ ಧುರೀಣ ಡಾ. ಅಂಬೇಡ್ಕರ್;
9. ಡಾ. ಅಂಬೇಡ್ಕರ್ ಮತ್ತು ಕಾರ್ಮಿಕ ಕಾನೂನು, 10. ಮಾಧ್ಯಮ ದಿಕ್ಕು ಎತ್ತ, ಇತ್ಯಾದಿ. ಅವರು ಇತ್ತೀಚೆಗೆ ಬರೆದು ಪ್ರಕಟಿಸಿದ “ಸಂವಿಧಾನ ಓದು” ಪುಸ್ತಕವು 50,000 ಪ್ರತಿಗಳ ದಾಖಲೆಯ ಮಾರಾಟ ಕಂಡಿದೆ. ರಾಜ್ಯದಾದ್ಯಂತ ಓಡಾಡಿ ಸಂವಿಧಾನದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ.

____________________________________________________________

ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್  ಅವರು ಇತ್ತೀಚೆಗೆ ಬರೆದು ಪ್ರಕಟಿಸಿದ “ಸಂವಿಧಾನ ಓದು” ಪುಸ್ತಕವು 50,000 ಪ್ರತಿಗಳ ದಾಖಲೆಯ ಮಾರಾಟ ಕಂಡಿದೆ. ರಾಜ್ಯದಾದ್ಯಂತ ಓಡಾಡಿ ಸಂವಿಧಾನದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ.
__________________________________________________

9 ವರ್ಷದ ಹಿಂದೆ ಅವರೇ ಸಹಯಾನವನ್ನು ಕೂಡ ಉದ್ಘಾಟಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಹತ್ತು ವರ್ಷದ ನಂತರ ಮತ್ತೆ ಸಹಯಾನಕ್ಕೆ ಬರುತ್ತಿರುವುದು ಹೆಮ್ಮೆಯ ಸಂಗತಿ. ಇವರೊಂದಿಗೆ, ಸಾಹಿತ್ಯೋತ್ಸವದ ಉದ್ಘಾಟಕರಾಗಿ ಪದ್ಮಶ್ರೀ ಗಣೇಶ ದೇವಿಯವರು ಮತ್ತು ಸಮಾರೋಪ ಮಾತುಗಳನ್ನಾಡಲು ದೆಹಲಿಯ ಜೆ ಎನ್ ಯು ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆಯವರು ಆಗಮಿಸುತ್ತಿದ್ದು ನಾಡಿನ ಸುಮಾರು 200 ಜನ ಚಿಂತಕರು ಪಾಲ್ಗೊಳ್ಳಲಿದ್ದಾರೆ.



Sunday 4 November 2018

ಪ್ರಜಾವಾಣಿಯಲ್ಲಿ ಸಮುದಾಯ ರಾಯಚೂರಿನ ತೀನ್ ಕಂದೀಲು

ಕರ್ನಾಟಕದಲ್ಲಿ ರಂಗಭೂಮಿಗೆ ಸಂಬಂಧಪಟ್ಟ ಅನೇಕ ಸಂಸ್ಥೆಗಳು, ಶಾಲೆಗಳು, ತರಬೇತಿ ಕೇಂದ್ರಗಳು ಮತ್ತು ಸಮುದಾಯಗಳು ರಂಗ ಚಟುವಟಿಕೆಗಳನ್ನು ನಡೆಸುತ್ತಿರುವುದು ಗಮನಾರ್ಹ. ಇಂತಹ ಸಂಸ್ಥೆಗಳಂತೆ ರಾಯಚೂರು ಸಮುದಾಯವು ಕೂಡ ತನ್ನ ಕ್ರಿಯಾಶೀಲತೆಯನ್ನು ಕಾಯ್ದುಕೊಂಡು ಬಂದಿದೆ ಎನ್ನುವುದಕ್ಕೆ ಮೊನ್ನೆ ರಾಯಚೂರಿನ ಜಂಬಲದಿನ್ನಿ ರಂಗಮಂದಿರದಲ್ಲಿ ಸಮುದಾಯ ಅಭಿನಯಿಸಿದ ನಾಟಕಕ್ಕೆ ಕಿಕ್ಕಿರಿದು ಸೇರಿದ ಪ್ರೇಕ್ಷಕರೆ ಸಾಕ್ಷಿಯಾಗಿತ್ತು.

ಒಂದು ಕಾಲದಲ್ಲಿ ರಾಯಚೂರು ಸಮುದಾಯ ತನ್ನ ಗೌರವ ಘನತೆ ಕಾಯ್ದುಕೊಂಡಿತ್ತು. ಆದರೆ ಇಂದು ನಾಟಕದ ಬಗ್ಗೆ ನಮ್ಮ ಭಾಗದ ಜನರ ಧೋರಣೆಗಳು ಬದಲಾದಾಗ ಇನ್ನು ನಮ್ಮ ಭಾಗದಲ್ಲಿ ರಂಗಭೂಮಿ ಬೆಳೆಯುವುದಕ್ಕೆ ಸಾಧ್ಯವಾಗಬಹುದು. ನಾಟಕ ಎಂದರೆ ಮೂಗು ಮುರಿಯುವ ಜನ ನಮ್ಮವರು.

'ಅಯ್ಯ ನಾಟಕ ಮಾಡ್ತಳಂತ? ಮನ್ಯಗೇನು ಯಾರು ಹೇಳವ್ರು ಇಲ್ಲ ಕೇಳವ್ರು ಇಲ್ಲ ಆ ಪೋರಿಗೆ? ನಾಟಕದಾಗ ಗಂಡ್ಸ್ರ ಕೈ ಮುಟ್ಟದು ಮೈ ಮುಟ್ಟದು ಮಾಡ್ತಾಳ ಎನಾ ಯವ್ವ ಅಸಂಯ?’ ಅನ್ನುವಂತ ಮನಸ್ಸುಗಳು ಬದಲಾದಾಗ ರಂಗಭೂಮಿ ಮತ್ತು ರಂಗ ಸಮುದಾಯಗಳು ಬೆಳೆಯಲು ಸಾಧ್ಯವಾಗಬಹುದು. ಕೆಲವೊಬ್ಬರನ್ನು ಬಿಟ್ಟರೆ ಯಾರೂ ವೃತ್ತಿಪರ ಕಲಾವಿದರಲ್ಲ, ಆದರೂ ಆ ವಿದ್ಯಾರ್ಥಿಗಳನ್ನು ಕರೆದುಕೊಂಡು ಒಂದು ಟೀಮ್ ಕಟ್ಟಿ ಒಂದು ಹೊಸ ಪ್ರಯೋಗಗಳ ಮೂಲಕ ರಾಯಚೂರು ಸಮುದಾಯವು ಕ್ರಿಯಾಶೀಲವಾಗಿದೆ. ಯಶಸ್ಸಿನ ಎಲ್ಲಾ ಶ್ರೇಯಸ್ಸು ಈ ನಾಟಕ ನಿರ್ದೇಶಕರಾದ ಪ್ರವೀಣ್ ರೆಡ್ಡಿ ಗುಂಜಳಿಯವರಿಗೆ ಸಲ್ಲಬೇಕು.

ಈ ನಾಟಕದ ತಲೆ ಬರಹ ‘ತೀನ್ ಕಂದೀಲು’ ಈ ಪದ ಮೇಲ್ನೋಟಕ್ಕೆ ಇದರಲ್ಲಿ ಏನೋ ವಿಭಿನ್ನವಾದ ಒಳ ಅರಿವು, ವಿಷಯ ವಸ್ತು, ಅಥವಾ ಇತಿಹಾಸನೇನೋ ಹೇಳಲು ಹೊರಟಿರಬೇಕು ಎಂದು ಪ್ರೇಕ್ಷಕರಿಗೆ ಕುತೂಹಲ ಕೆರಳಿಸುತ್ತದೆ. ಇಲ್ಲಿ ‘ತೀನ್ ಕಂದೀಲು’ ಎನ್ನುವ ನಾಟಕದ ತಲೆಬರಹ ರಾಯಚೂರಿನಲ್ಲಿರುವ, ಬಡವರ, ಕೂಲಿ ಕಾರ್ಮಿಕರ, ವ್ಯಾಪಾರಸ್ಥರ, ಹೊಟ್ಟೆ ತುಂಬಿಸುವ ಒಂದು ಪ್ರದೇಶದ ಹೆಸರು. ಒಟ್ಟಿನಲ್ಲಿ ಇದು ರಾಯಚೂರಿನ ಹೃದಯ ಭಾಗ ಎಂದರೆ ತಪ್ಪಾಗಲಾರದು.

ನಾಟಕಕಾರರು ಇದೇ ಪ್ರದೇಶದಲ್ಲಿ ತುಂಬ ಒಡನಾಟ ಇರುವುದರಿಂದ ಅಲ್ಲಿನ ಬಡವರ ಬದುಕು, ಅವರ ಸ್ಥಿತಿಗತಿಗಳು, ಜಾತಿ, ಧರ್ಮ, ಹಿಂಸೆ, ಕೊಲೆ, ಅತ್ಯಾಚಾರ, ಮೋಸ, ವಂಚನೆ ಮರ್ಯಾದೆಗೇಡು ಹತ್ಯೆ ಹೀಗೆ ಎಷ್ಟೋ ವರ್ಷಗಳ ಕಾಲದ ಧರ್ಮಸಂಕಟವನ್ನು ಹೇಳಿಕೊಳ್ಳಲಾಗದೆ ನಿಜಾಮರ ಕೋಟೆಗಳಲ್ಲಿ ಕಳೆದುಹೋದದ್ದು ಈಗ ಇತಿಹಾಸ.

ಕಳೆದು ಹೋದ ಜೀವಗಳಿಗೆ ರಮೇಶ ಅರೋಲಿಯವರು ಪಾತ್ರದ ರೂಪ ಕೊಟ್ಟು ಪ್ರೇಕ್ಷಕರ ಮನಸ್ಸು ಗೆದ್ದಿರುವುದು, ವಾಸ್ತವ ಬದುಕಿನ ಒಂದು ರೋಚಕವಾದ ಸಂಗತಿ. ನಾಟಕ ಆರಂಭವಾಗುವುದೇ ಗಾರೆ ಕೆಲಸಗಾರರು ಕೆಬ್ಬ್ಣಬುಟ್ಟಿ ಹಿಡಿದುಕೊಂಡು ಕೆಲ್ಸ ಮಾಡುವುದು, ನಂತರ ಅನೇಕ ಸಣ್ಣ ಪುಟ್ಟ ವ್ಯಾಪಾರಸ್ಥರು,(ತಳ್ಳುವ ಬಂಡಿ) ಚಹಾ ಹೋಟೆಲ್ ನಂತರ ಮೂರು ದಾರಿ ಕೂಡುವ(ಸರ್ಕಲ್)ನಲ್ಲಿ ಮೂರು ವಿವಿಧ ಬಣ್ಣದಿಂದ ಕೂಡಿರುವ ಕಂದೀಲಿನ ಬೆಳಕಿನ ಕಂಬ ಹೀಗೆ ಅನೇಕ ರಂಗ ಪರಿಕರಗಳು ರಂಗದ ಮೇಲೆ ಪ್ರವೇಶ ಮಾಡಿಸಿರುವುದು ನಿರ್ದೇಶಕರ ಸೂಕ್ಷ್ಮತೆ ತೋರುತ್ತದೆ.

ಈ ನಾಟಕದ ಕೇಂದ್ರ ಬಿಂದು ದಲಿತ ಹುಡುಗ ಹುಸೇನಿ ಮತ್ತು ಮೇಲ್ಜಾತಿಯ ಹುಡುಗಿ ಶಾಂತಿ ಯುವ ಪ್ರೇಮಿಗಳಾದರೂ ಇಡೀ ನಾಟಕಕ್ಕೆ ನಾಯಕನಾಗಿ ನಿಲ್ಲುವುದು ಯಲ್ಲಯ್ಯ ಅಜ್ಜ. ಯುವ ಪ್ರೇಮಿಗಳನ್ನು ಒಂದು ಮಾಡುವ ಒದ್ದಾಟದ ಜೊತೆಗೆ ಪ್ರಸ್ತುತ ದೇಶದಲ್ಲಿ ನಡೆಯುವ ಘಟನೆಗಳು ನಾಟಕದುದ್ದಕೂ ಟೀಕೆಗೆ ಗುರಿಯಾಗುತ್ತಾ ಹೋಗುತ್ತವೆ.

‘ಈ ದೇಶದಲ್ಲಿ ಬಡವರ, ದಲಿತರ, ಪರ ಮಾತಾಡಬೇಡಿ. ನೀವು ಕೂಡ ನಗರ ನಕ್ಸಲೈಟ್ ಎಂಬ ಪಟ್ಟ ಕಟ್ಟಿ ಜೈಲಿಗೆ ಕಳಿಸುತ್ತಾರೆ. ಕಾಯುವವರೇ ಕೊಲ್ಲಲು ಬಂದಾಗ ಯಾರ ಮುಂದ ದೂರು ಕೊಡತೀರಿ’ ಎಂದು ಪರೋಕ್ಷವಾಗಿ ರಾಜಕೀಯ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುವುದು. ಹೀಗೆ ಇಂತಹ ಅನೇಕ ಪ್ರಶ್ನೆಗಳು ನಾಟಕದುದ್ದಕೂ ಎತ್ತುತ್ತ ಹೋಗುತ್ತಾನೆ ಯಲ್ಲಯ್ಯ. ಯುವ ಪ್ರೇಮಿಗಳ ಪ್ರೀತಿಯನ್ನು (ಶಾಂತಿ ಮತ್ತು ಹುಸೇನ) ಒಂದು ಮಾಡಲು ಯಲ್ಲಯ್ಯ ಎಷ್ಟೇ ಪ್ರಯತ್ನಪಟ್ಟರೂ ಮತ್ತು ಇಲ್ಲಿ ಶಾಂತಿ ಎಷ್ಟೇ ಗಟ್ಟಿಗಿತ್ತಿ ಹುಡುಗಿಯಾಗಿದ್ದರೂ ಮನೆಯಲ್ಲಿ ಪ್ರತಿರೋಧ ಒಡ್ಡಿದಾಗ ಜಾತಿವಾದಿಗಳ ಗುಂಪು ಕೊನೆಗೆ ಶಾಂತಿಯ ಹತ್ಯೆ ಮಾಡುತ್ತದೆ.

ನಾಟಕದಲ್ಲಿ ಅನೇಕ ರೂಪಕಗಳು ಬಳಸಿರುವುದು ವಿಶೇಷ. ಧರ್ಮ ವಿರೋಧಿಗಳು ಹುಸೇನಿಗೆ ಹೊಡೆಯುವಂತಹ ಸಂದರ್ಭದಲ್ಲಿ ಕೋಲಿನ ನಾದದ ಜೊತೆಗೆ ಆ ಕೆಂಪಾದ ಫೋಕಸ್ ಲೈಟಿನಲ್ಲಿ ಪಾತ್ರಗಳು ಸುತ್ತಲೂ ತಿರುಗುವುದು ವಿಶೇಷ ಅನಿಸುತ್ತದೆ. ಇನ್ನೊಂದು ವಿಶೇಷವೆಂದರೆ ಈ ಯಲ್ಲಯ್ಯನ ಪಾತ್ರವೇ ನಾಟಕದುದ್ದಕೂ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡಿದ್ದು. ಈ ನಾಟಕಕ್ಕೆ ಅನೇಕ ಪಾತ್ರಗಳು ಜೊತೆಯಾಗಿವೆ. ಯಲ್ಲಯ್ಯ ಮುದುಕನ ಪಾತ್ರದಲ್ಲಿ ಲಕ್ಷ್ಮಣ ಮಂಡಲಗೇರಾ ಅವರ ಅಭಿನಯ ಮೆಚ್ಚುವಂತಹದ್ದು. ಈ ನಾಟಕದಲ್ಲಿ ಯುವತಿಯ ಹತ್ಯೆಯನ್ನು ತಡೆಯದೆ ದೇಶದ ಆರಕ್ಷಕರು ಹೇಗೆ ಕರ್ತವ್ಯ ನಿರ್ವಹಣೆ ಮಾಡುತ್ತಾರೆ ಎನ್ನುವುದು ಗೊತ್ತಾಗುತ್ತದೆ.

ನಾಟಕಕ್ಕೆ ಬೆಳಕಿನ ವಿನ್ಯಾಸ ಕಡಿಮೆ ಇತ್ತು. ಹಿನ್ನೆಲೆ ಗಾಯನ ನಾಟಕಕ್ಕೆ ಅನುಕೂಲವಾಗುವ ರೀತಿಯಲ್ಲಿ ಇತ್ತು. ಕೆಲವೊಂದು ಪಾತ್ರಗಳು ಬಂದಾಗ ಅನವಶ್ಯಕವಾಗಿ ಚೀರುವಂತೆ ಕಂಡು ಬಂದಿತು. ಅದರ ಜೊತೆಗೆ ಪ್ರೇಕ್ಷಕ ವರ್ಗವೂ ಚೀರಿದಾಗ ಕೆಲ ರಂಗಪ್ರಿಯರಿಗೆ ಮತ್ತು ಶಾಂತತೆಯಿಂದ ಕುಳಿತು ನೋಡುವವರಿಗೆ ಇರಿಸುಮುರಿಸು ಆದುದೂ ಉಂಟು. ಈ ಮೈಸೂರು ಮತ್ತು ಧಾರವಾಡ ರಂಗಪ್ರೇಕ್ಷಕರು ನಾಟಕ ನೋಡುವ ವಿಧಾನ ಬೇರೆ ರೀತಿಯಾಗಿರುತ್ತದೆ.

ಯಾವತ್ತೂ ನಟರಿಗೆ ತೊಂದರೆ ಕೊಡುವ ಕೆಲಸ ಮಾಡುವುದಿಲ್ಲ. ಏನಾದರೂ ನಟರ ಬಾಯಿಯಿಂದ ಹಾಸ್ಯ ಅಥವಾ ಗಂಭೀರ ಮಾತುಗಳು ಬಂದರೆ ಅದಕ್ಕೆ ಒಂದಿಷ್ಟು ಚಪ್ಪಾಳೆ ಕೊಟ್ಟು ಹುರಿದುಂಬಿಸುತ್ತಾರೆ. ಆದರೆ ನಮ್ಮ ರಾಯಚೂರಿನ ಯುವ ಪ್ರೇಕ್ಷಕರು ನಾಟಕವನ್ನು ನೋಡುವ ದೃಷ್ಟಿಕೋನ ಬದಲಾಯಿಸಿಕೊಂಡರೆ ರಾಯಚೂರಿನಲ್ಲೂ ರಂಗಸಂಸ್ಥೆಗಳನ್ನು ಕಟ್ಟುವುದರಲ್ಲಿ ಸಂಶಯವಿಲ್ಲ. ಅದೇ ಇಲ್ಲಿನ ರಂಗಪ್ರಿಯರ ಆಶಯ.

ಮಲ್ಲಮ್ಮ ಯಾಟಗಲ್