Monday 2 October 2017

ಸಂವಾದದ ಹಿರಿಮೆಯನ್ನು ಎತ್ತಿಹಿಡಿದ ಸಮುದಾಯದ ಸೂರ್ಯನ ನೆರಳು




   ಪ್ರತಿ ತಿಂಗಳ ಮೊದಲ ಭಾನುವಾರದಂದು ನಡೆಯುವ ತಿಂಗಳ ಕಥಾ ಓದು ಕಾರ್ಯಕ್ರಮ ಮತ್ತು ಸಂವಾದದ ಹಿರಿಮೆಯನ್ನು ಎತ್ತಿ ಹಿಡಿಯುವ ಸೂರ್ಯನ ನೆರಳು ನಾಟಕಗಳನ್ನು ಒಟ್ಟಿಗೆ ಗಾಂಧಿ ಜಯಂತಿಯಂದು ಹಮ್ಮಿಕೊಳ್ಳುವ ಮೂಲಕ ಕುಂದಾಪುರ ಸಮುದಾಯವು ಗಾಂಧಿಯನ್ನು ಮತ್ತೊಮ್ಮೆ ಚರ್ಚೆಯ ತೆಕ್ಕೆಗೆ ತೆಗೆದುಕೊಂಡಿತು.
   ಬೋಳುವಾರರ ಪಾಪು ಗಾಂಧಿ ಬಾಪೂ ಗಾಂಧಿ ಆದ ಕತೆಯಲ್ಲಿನ ಗಾಂಧಿಯ ಬದುಕಿನ ಮೂರು ಮುಖ್ಯ ಕಾಲಘಟ್ಟವನ್ನು ಪ್ರತಿನಿಧಿಸುವ ಕತೆಗಳನ್ನು ಡಾ. ರಶ್ಮಿ ಕುಂದಾಪುರ ರವರು ಫ್ಲಿಫ್ ಚಾರ್ಟಗಳ ನೆರವಿನಿಂದ ಸೊಗಸಾಗಿ ವಾಚಿಸಿದರು. ವೈದ್ಯ ವೃತ್ತಿಯಲ್ಲಿರುವವರು ಕೆಲವು ಸೂಕ್ಷ್ಮ ವಿಷಯಗಳನ್ನು ಜನರಿಗೆ ಮನದಟ್ಟು ಮಾಡುವಾಗ ಫ್ಲಿಫ್ ಚಾರ್ಟುಗಳನ್ನು ಬಳಸುತ್ತೇವೆ. ಸದ್ಯಕ್ಕೆ, ಗಾಂಧಿಯೂ ಸೂಕ್ಷ್ಮ ಸಂಗತಿಯೇ ಎನ್ನುತ್ತಾ ಆರಂಭಿಸಿದ ಡಾ. ರಶ್ಮಿಯವರು ಕತೆಯ ನಂತರವೂ ಗಾಂಧಿಯ ಈ ಕತೆಯನ್ನು ಓದಲು ಆರಂಭಿಸಿದ ಮೇಲೆ ತನ್ನ ಬದುಕು ಭಾವಗಳ ಮರುಸಂಘಟನೆಗೆ ಹೇಗೆ ಕಾರಣವಾಯಿತು ಎಂಬುದನ್ನೂ ಹಂಚಿಕೊಂಡರು. ಕಥಾ ಓದಿಗೆ ಡಾ. ಹಯವದನ ಮೂಡುಸಗ್ರಿ, ರಾಘವೇಂದ್ರ ಬೈಂದೂರು ಇನ್ನಿತರರು ಪ್ರತಿಕ್ರಿಯಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೋಟೇಶ್ವರ ಘಟಕದ ಅಧ್ಯಕ್ಷರಾದ ಅಶೋಕ ತೆಕ್ಕಟ್ಟೆ ಡಾ. ರಶ್ಮಿಯವರಿಗೆ ಹೂ ನೀಡಿ ಗೌರವಿಸಿದರು.
   ಕಥಾ ಓದಿನ ನಂತರ ವಾಸುದೇವ ಗಂಗೇರ ನಿರ್ದೇಶನದಲ್ಲಿ ಸಮುದಾಯದ ಕಲಾವಿದರು `ಸೂರ್ಯನ ನೆರಳು’ ನಾಟಕವನ್ನು ಪ್ರದರ್ಶಿಸಲಾಯಿತು. ಉದಯ ಗಾಂವಕಾರ ರಚಿಸಿದ ಈ ಪುಟ್ಟ ನಾಟಕ ಸಂವಾದದ ಸಂಸ್ಕøತಿಯು ಭಾರತದ ಜ್ಞಾನಪರಂಪರೆಯನ್ನು ಹೇಗೆ ಬೆಳೆಸಿತು ಎಂಬ ಸಂಗತಿಗಳನ್ನು ಮನದಟ್ಟು ಮಾಡಿಸುತ್ತಲೇ ಈ ನೆಲದ ಮೂಲನೆಲೆಯಾದ ಮಾತುಕತೆ ಮತ್ತು ವಿಭಿನ್ನ ಅಭಿಪ್ರಾಯಗಳನ್ನು ಗೌರವಿಸುವ ಪರಂಪರೆಯಿಂದ ನಾವು ದೂರಸರಿಯುತ್ತಿರುವ ಆತಂಕವನ್ನು ಪ್ರೇಕ್ಷರೆದುರು ಹಿಡಿಯಿತು. ಉಸಿರಾಟ, ಆಹಾರ ಸೇವನೆ, ನಿದ್ದೆ, ಮೈಥುನಗಳು ಮಾತ್ರವೇ ಜೀವಂತಿಕೆಯ ಚಿಹ್ನೆಗಳಲ್ಲ್ಲ; ಪ್ರಶ್ನಿಸುವ ಚೈತನ್ಯ ಕೂಡಾ ಜೀವಂತಿಕೆಯ ಲಕ್ಷಣ. ನಾವು ಪ್ರಶ್ನಿಸುತ್ತಿದ್ದೇವೆಂದರೆ ಯೋಚಿಸುತ್ತಿದ್ದೇವೆಂದು ಅರ್ಥ. ಸ್ವತಂತ್ರವಾಗಿ ಯೋಚಿಸುವವರು ಸ್ವತಂತ್ರ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯಗಳಿರುವುದು ಪ್ರತಿಯೊಬ್ಬರಿಗೂ ತಮ್ಮದೇ ಆಸೆ, ಆಮಶಂಕೆ, ಜ್ವರ, ನೆಗಡಿ ಕೆಮ್ಮು ಇರುವಷ್ಟು ಸ್ವಾಭಾವಿಕ ಎಂಬುದನ್ನು ಚರಿತ್ರೆಯ ಪುಟಗಳಿಂದ ಪಡೆದ ಪುಟ್ಟ ಪುಟ್ಟ ಸಂವಾದದ ತುಣುಕುಗಳನ್ನು ಪೋಣಿಸಿ ನಿರೂಪಿಸಲಾಯಿತು.
   ಸೂರ್ಯನ ನೆರಳು ನಾಟಕವು ಗಾಂಧಿಯ ಸಾವಿನ ನಂತರದ ಪ್ರಶ್ನೆಗಳನ್ನು ಎದುರಿಸುತ್ತದೆ. ಈ ನೆಲದಲ್ಲಿ ಒಡಮೂಡಿದ ವಿವೇಕದಲ್ಲಿ ನೂರಾರು, ಸಾವಿರಾರು ಸಂವಾದಗಳ ತಿಳಿವಿನ ಎಳೆಗಳು ಜೋಡಿಸಿಕೊಂಡಿವೆ. ಆಧುನಿಕ ಕಾಲದ ಗಾಂಧಿ-ಅಂಬೇಡ್ಕರ್, ಗಾಂಧಿ-ಎಮ್ ಎನ್ ರಾಯ್ ರ ನಡುವೆ ಇದ್ದಿರುವ ವ್ಯತ್ಯಾಸಗಳೇ ಉಪನಿಷತ್ತುಗಳಲ್ಲಿ ಬರುವ ಉದ್ಧಾಲಕ ಮತ್ತು ಯಾಜ್ಞವಲ್ಕ್ಯರ ನಡುವೆ ನಡೆದಿದ್ದವು. ಚಾರ್ವಾಕ, ಬುದ್ಧ, ಬಸವ ಮುಂತಾದವರೆಲ್ಲರೂ ಆಯಾ ಕಾಲದ ಯಥಾಸ್ಥಿತಿವಾದಿಗಳಿಗೆ ಪ್ರಶ್ನೆಗಳನ್ನೆಸದಿದ್ದರು. ಗಾಂಧಿಯಿಂದ ಅಂಬೇಡ್ಕರ್ ಎಷ್ಟನ್ನು ಪಡೆದುಕೊಂಡಿದ್ದರೋ ಅಷ್ಟನ್ನು ಅಂಬೇಡ್ಕರರಿಂದ ಗಾಂಧಿಯೂ ಪಡೆದುಕೊಂಡಿದ್ದರು. ವೈಚಾರಿಕ ವಿಕಾಸಕ್ಕೆ ಸಂವಾದದ ಜರೂರು ಇದೆ ಎನ್ನುವುದನ್ನು ಈ ನಾಟಕ ಮತ್ತೆ ಮತ್ತೆ ಹೇಳುತ್ತದೆ.
 ನಾಟಕದುದ್ದಕ್ಕೂ ವಿಭಿನ್ನ ಯೋಚನೆ, ಸಿದ್ಧಾಂತಗಳನ್ನು ಮುಖಾಮುಖಿಯಾಗಿಸುತ್ತಲೇ ಯಾವುದನ್ನೂ ಕಡೆಯದೆ, ಯಾವುದನ್ನೂ ಹಿರಿದೆಂದು ಎತ್ತಿಹಿಡಿಯದೆ ನಮ್ಮ ನಡುವೆ ಮಾತುಕತೆ ಅಗತ್ಯ ಎಂಬುದಷ್ಟನ್ನೇ ಈ ನಾಟಕ ಸೂಚಿಸುತ್ತದೆ. ಗಾಂಧಿಯ ಸಾವಿನಿಂದ ಆರಂಭವಾಗುವ ನಾಟಕ ಸಮಯರೇಖೆಯ ಹಿಂದಕ್ಕೂ ಮುಂದಕ್ಕೂ ಚಲಿಸುತ್ತಾ ಕಾಲಾತೀತವಾಗುತ್ತದೆ. ಆಗಾಗ ನಟರು ವರ್ತಮಾನಕ್ಕೆ, ದೈನಿಕದ ಕಡು ವಾಸ್ತವಕ್ಕೆ ಹಿಂದಿರುಗುತ್ತಾರೆ. ಈ ನೆಲದ ಇತಿಹಾಸವನ್ನು ಮತ್ತೆ ಮತ್ತೆ ಮುಟ್ಟಿನೋಡುತ್ತಾರೆ.  ಕೆಲವೊಮ್ಮೆ ಹಠಾತ್ತನೆ ನಾಟಕದಿಂದ ಹೊರಬಂದು ಪ್ರೇಕ್ಷಕರಾಗಿಬಿಡುತ್ತಾರೆ. ಶಿವಾನಂದ, ಸಚಿನ್, ಪ್ರಾರ್ಥನಾ, ಸ್ಮಿತಾ, ಅಜಾದ್, ಅನುಷಾ, ಹಿತೇಶ್, ಲಂಕೇಶ್, ನಾಗಶ್ರೀ, ರಶ್ಮಿ, ರಮ್ಯಾ, ಸಂದೇಶ, ಸಂಧ್ಯಾ ನಾಯಕ, ಸುಕನ್ಯಾ ನಾಟಕದುದ್ದಕ್ಕೂ ಲವಲವಿಕೆಯ ಅಭಿನಯ ನೀಡಿದರು.  ಈ ನಾಟಕಕ್ಕೆ ಮೂರು ದಿನಗಳಲ್ಲಿ  ಧ್ವನಿ, ಚಲನೆ ಮತ್ತು ಉಸಿರನ್ನು ನೀಡಿ ಜೀವಂತವಾಗಿಸಿದ ನಿರ್ದೇಶಕ ವಾಸುದೇವ ಗಂಗೇರ ಅವರ ಶ್ರಮ ಮತ್ತು ಸೃಜನಶೀಲತೆ ಪ್ರಶಂಸೆಗೆ ಪಾತ್ರವಾಯಿತು. ನಾಟಕದ ವಿನ್ಯಾಸ, ಸಂಗೀತ ನಿರ್ವಹಣೆಯಲ್ಲಿ ಸಹಕರಿಸಿದ ಚಿನ್ನಾ ವಾಸುದೇವ್, ಸದಾನಂದ ಬೈಂದೂರು, ವಿಕ್ರಂ, ಬಾಲಕೃಷ್ಣ ಎಮ್, ಶಂಕರ ಆನಗಳ್ಳಿ ಇವರೆಲ್ಲರ ಶ್ರಮವೂ ನಾಟಕದಲ್ಲಿ ಪ್ರತಿಫಲಿತವಾಗಿತ್ತು.
    ನಾಟಕದ ನಂತರದ ಸಂವಾದದಲ್ಲಿ ಢಾ. ದಿನೇಶ ಹೆಗ್ಡೆ, ಸುಧಾ ಆಡುಕಳ ಮುಂತಾದವರು ಪ್ರತಿಕ್ರಿಯೆ ನೀಡಿದರು. ರಿಸರ್ವೇಷನ್ ಸಿನೇಮಾ ಖ್ಯಾತಿಯ ಶ್ರೀ ಯಾಕೂಬ್ ಖಾದರ್ ಗುಲ್ವಾಡಿ, ಕಿನಾರೆ ಮತ್ತು ಕನ್ನಡ ಶಾಲೆ ಸಿನೆಮಾ ತಂಡದ ಸದಸ್ಯರು ನಾಟಕವನ್ನು ವೀಕ್ಷಿಸಿದರು. ಕೊನೆಯಲ್ಲಿ ಜಿ.ವಿ.ಕಾರಂತರು ಎಲ್ಲರಿಗೂ ವಂದನೆಗಳನ್ನು ತಿಳಿಸಿದರು.

No comments:

Post a Comment