Tuesday 29 August 2017

ವಿದ್ಯಾರ್ಥಿಗಳ ಮನಸೂರೆಗೊಂಡ ಸಮುದಾಯದ ಕಾವ್ಯರಂಗ














ಯುವಕ-ಯುವತಿಯರ ದೇಹಭಾಷೆಗೆ ಕಾವ್ಯದ ಸಾಹಚರ್ಯವನ್ನು ಒದಗಿಸುವ ಉದ್ಧೇಶದಿಂದ ಸಮುದಾಯ ಕರ್ನಾಟಕ ರೆಪರ್ಟರಿ ರೂಪಿಸಿದ ಕಾವ್ಯರಂಗ ಪ್ರಯೋಗ ಕುಂದಾಪುರದ ಆಸುಪಾಸಿನ ಐದು ಕಾಲೇಜುಗಳಲ್ಲಿ  ಪ್ರದರ್ಶನ ಗೊಂಡು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಯಿತು. ಕುಂದಾಪುರ ಸಮುದಾಯದ ಸಂಯೋಜನೆಯಲ್ಲಿ ಎರಡು ದಿನಗಳಲ್ಲಿ ಸುಮಾರು ಮೂರುಸಾವಿರ ವಿದ್ಯಾರ್ಥಿಗಳನ್ನು ತಲುಪಿದ ಈ ಪ್ರಯೋಗವು ಕನ್ನಡದ ನಾಡು-ನುಡಿ ರೂಢಿಸಿಕೊಂಡುಬಂದ ಸಾಮರಸ್ಯ, ಸಹಬಾಳ್ವೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಕಥನ-ಕಾವ್ಯಗಳನ್ನು ವಿದ್ಯಾರ್ಥಿಗಳಿಗೆ ರಂಗದ ಸಶಕ್ತ ಭಾಷೆಯ ಮೂಲಕ ತಲುಪಿಸುವಲ್ಲಿ ಯಶಸ್ವಿಯಾಯಿತು. ಕವಿರಾಜ ಮಾರ್ಗಕಾರ ನೃಪತುಂಗನಿಂದ ನಾವು ಹುಡುಗಿಯರೇ ಹೀಗೆ ಎಂದ ಪ್ರತಿಭಾ ನಂದಕುಮಾರರವರೆಗೆ, ಭಾರತವನ್ನು ಕನ್ನಡದ ಕಣ್ಣಿನಲ್ಲಿ ಕಂಡ ಪಂಪನಿಂದ ರಾಮಾಯಣವನ್ನು ವೈಚಾರಿಕ ನೆಲೆಯಲ್ಲಿ ಮರುಲೇಖಿಸಿದ ಕುವೆಂಪುವರೆಗೆ, ಮಣ್ಣಿನ ಸಂಗಾತವನ್ನು ಹಪಹಪಿಸಿದ ಕಾರಂತರ ಚೋಮನಿಂದ ವ್ಯವಸ್ಥೆಯ ಕ್ರೌರ್ಯವನ್ನು ವ್ಯಂಗ್ಯದಲ್ಲಿ ತೆರೆದಿಡುವ ದೇವನೂರರ ಸಾಕವ್ವನವರೆಗೆ, ವಚನಕಾರರಿಂದ ತತ್ವಪದಕಾರರವರೆಗೆ ಹೀಗೆ ಕನ್ನಡ ಪರಂಪರೆಯ ಪ್ರಾತಿನಿಧಿಕ ಕೃತಿಗಳ ತುಣುಕುಗಳನ್ನು ಸಂಬಂಧ ಪರಿಕಲ್ಪನೆಯಲ್ಲಿ ಜೋಡಿಸಿ ರಂಗ ನಿರ್ದೇಶಕ ಡಾ ಶ್ರೀಪಾದ ಭಟ್ ನಿರ್ದೇಶಿಸಿದ ಈ ಪ್ರಯೋಗಕ್ಕೆ ಜೀವತುಂಬಿದವರು ಧಾರವಾಡ ಸಮುದಾಯದ ನಟ-ನಟಿಯರು.

 ಬೈಂದೂರು ಪದವಿಪೂರ್ವ ಕಾಲೇಜು, ಬಸ್ರೂರಿನ ಶಾರದಾ ಕಾಲೇಜು, ಬ್ರಹ್ಮಾವರದ ಎಸ್ ಎಮ್ ಎಸ್ ಕಾಲೇಜು, ಕುಂದಾಪುರದ ಡಾ. ಬಿ. ಬಿ .ಹೆಗ್ಡೆ ಕಾಲೇಜು ಮತ್ತು ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ನಡೆದ ಈ ಪ್ರಯೋಗಗಳ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನೂ ಏರ್ಪಡಿಸಲಾಯಿತು. ಯುವಕ-ಯುವತಿಯರು ಮತ್ತೆ ಪುಸ್ತಕಗಳಿಗೆ, ಕಾವ್ಯದ ಕಂಪಿಗೆ ಮರು ಪ್ರಯಾಣ ನಡೆಸಲು ಈ ಪ್ರದರ್ಶನ ಸ್ಪೂರ್ತಿಯಾಗುತ್ತದೆ ಎಂಬ ಭರವಸೆಯನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದರು. ಈ ಪ್ರದರ್ಶನಕ್ಕೆ ಬೆಂಬಲ ನೀಡಿದ ವಿವಿಧ ಕಾಲೇಜುಗಳ ಆಡಳಿತ ವೃಂದ, ಕುಂದಾಪುರದ ರೋಟರಿ ಸಂಸ್ಥೆಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಕೋಟೇಶ್ವರ ಹೋಬಳಿ ಘಟಕ ಮತ್ತು ಉಡುಪಿ ಜಿಲ್ಲೆಯ ಪ್ರೌಢಶಾಲಾ ಕನ್ನಡ ಶಿಕ್ಷಕರ ಸಂಘ ಮತ್ತು ಸಾವಿರ ಸಾವಿರ ಸಂಖ್ಯೆಯ ಸಹೃದಯರಿಗೆ ಕೃತಜ್ಙತೆಗಳು

No comments:

Post a Comment