Tuesday, 9 May 2017

ಮಳೆ ಬಂತು ಮಳೆ- ಒಂದು ನವಿರಾದ ನಿರೂಪಣೆ.


*ಶ್ರೀಧರ ಎಸ್, ಸಿದ್ಧಾಪುರ


ಸಮುದಾಯ ಕುಂದಾಪುರ, ಬಾಲಭವನ ಸೊಸೈಟಿ, ಬೆಂಗಳೂರು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ನಡೆದ ರಂಗರಂಗು ರಜಾ ಮೇಳದ ಕೊನೆಯ ದಿನ ಮೇಳದ ಮಕ್ಕಳಿಂದ ಎರಡು ಮಕ್ಕಳ ನಾಟಕಗಳು ಮೂಡಿ ಬಂದವು. ಸಾಂಪ್ರದಾಯಿಕ ಶಿಸ್ತಿನಿಂದ ದೂರ ಉಳಿದು, ತೀರಾ ಭಿನ್ನವಾದ ಮಕ್ಕಳ ಮೇಳಕ್ಕೆ ತೆರೆ ಬಿತ್ತು. ಮಕ್ಕಳ ಸಂತೆ, ಕ್ರಾಪ್ಟ್ ಮುಂತಾದ ಚಟುವಟಿಕೆಗಳ ಮೂಲಕ ವಿಭಿನ್ನವಾಗಿ ಮೇಳವು ಜರಗಿತು. ಮೊದಲ ನಾಟಕ 'ಮಳೆ ಬಂತು ಮಳೆ'. ಅದರ ಕಿರು ಪರಿಚಯ.
ಚಿಕ್ಕ ಚೊಕ್ಕ ಪಾತ್ರಗಳು. ನಲಿವ ಪಕ್ಷಿಗಳು, ವಯ್ಯಾರದ ಜಿಂಕೆಗಳು, ಕುಪ್ಪಳಿಸುವ ಕಪ್ಪೆ, ಮಂಗಗಳು, ಕುದುರೆ ಹೀಗೆ ಹಲವು ಪ್ರಾಣಿ ಗಡಣಗಳು. ಇವುಗಳ ಚುರುಕು ಮಾತುಗಾರಿಕೆ. ನಡು ನಡುವೆ ಹರಿದು ಬರುವ ಸೂಕ್ತ ರಂಗ ಗೀತೆಗಳು. ಗರಿಗರಿ ಮಾತಿನ ಮಕ್ಕಳ ಅಭಿನಯ ಮನಮುಟ್ಟುವಂತ್ತಿತ್ತು. ಮಳೆಯಿಲ್ಲದೆ ತತ್ತರಿಸಿರುವ ಸೆಖೆಯಲ್ಲಿ ಮಕ್ಕಳು ಪ್ರಾಣಿಗಳು ಸೇರಿ ಊರ ಹೊರಗಿನ ಗುಡ್ಡಕ್ಕೆ ಹೊರಡುತ್ತಾರೆ. ಅಲ್ಲಿಯೂ ಮರಗಳಿಲ್ಲದ ಬೋಳು ಗುಡ್ಡ ಬತ್ತಿದ ಕೆರೆಯನ್ನು ಕಾಣುತ್ತಾರೆ. ಕೊನೆಗೆ ಕಪ್ಪೆಯೊಂದನ್ನು ಮಾತನಾಡಿಸುತ್ತಾರೆ. ಮಳೆಗಾಗಿ ಪುಟಾಣಿ ಕಪ್ಪೆಯೊಂದು ತನ್ನ ತಾತ ಹೇಳಿದ ಮಾತಿನಂತೆ ಮೋಡಕ್ಕೆ ಪ್ರಾರ್ಥನೆ ಸಲ್ಲಿಸಲು ಹೇಳುತ್ತದೆ. ಅವುಗಳೆಲ್ಲಾ ಮೋಡಕ್ಕೆ ಪ್ರಾರ್ಥನೆ ಸಲ್ಲಿಸುತ್ತವೆ. ಮೋಡಗಳು ಪ್ರತ್ಯಕ್ಷವಾಗಿ ಕಡಿದ ಕಾಡು ಗಿಡಗಳ ಕುರಿತು ಹೇಳುತ್ತವೆ. ಮೂರ್ಖ ಮನುಜ ಮಾಡುವ ಪ್ರಾರ್ಥನೆಯಿಂದ ಮಳೆ ಬರುವುದಿಲ್ಲ. ಮಳೆ ಬರುವುದು ಮರ ಗಿಡಗಳಿಂದ ಎಂದು ಮೋಡಗಳು ಹೇಳ್ತವೆ. ಮರ ಕಡಿಯದಿರಿ ಗಿಡ ನೆಡಿ ಎಂಬ ಸಂದೇಶವನ್ನು ಕೊನೆಗೆ ಸಾರುತ್ತದೆ. ಮರಿ ಕಪ್ಪೆಯೊಂದು ಗಿಡ ನೆಡುವ ಮೂಲಕ ನಾಟಕವು ಮುಗಿಯುತ್ತದೆ. ದೊಡ್ಡವರ ಜಗತ್ತಿನ ಮೂರ್ಖ ನಡೆಗಳನ್ನು ಹೇಳುತ್ತಾ ನಮ್ಮನ್ನು ವಿಶ್ಲೇಷಣೆಗೆ ಹಚ್ಚುವಂತೆ ಮಾಡುವಲ್ಲಿ ನಾಟಕ ಯಶಸ್ವಿಯಾಯಿತು. ರಂಗ ಚಲನೆ, ಪರಿಕರ, ವೇಷ ಭೂಷಣ, ಪಾತ್ರಧಾರಿಗಳ ಸೂಕ್ತ ಬಳಕೆಯಿಂದ ನಾಟಕ ನೋಡುಗರ ಗಮನ ಸೆಳೆಯಿತು. ನಾಟಕದ ಓಘಕ್ಕೆ ಪೆಟ್ಟು ಬೀಳದಂತೆ ಅಲ್ಲಲ್ಲಿ ಸಂಗೀತವನ್ನು ಬಳಸಿದ ರೀತಿ ನಿಜಕ್ಕೂ ಅದ್ಭುತ. ಕಿರು ಅವಧಿಯಲ್ಲಿ ಎಲ್ಲೂ ಗೊಂದಲಕ್ಕೆ ಅವಕಾಶ ನೀಡದಂತೆ ಮಕ್ಕಳು ಅಭಿನಯಿಸಿರುವುದು ಶ್ಲಾಘನೀಯ. ಸುಮಾರು 30 ಮಕ್ಕಳ ಚಲನೆಗೆ ವೇದಿಕೆ ಬಹಳವೇ ಚಿಕ್ಕದಾಯಿತು ಎಂಬುದು ನನ್ನ ಅನಿಸಿಕೆ.
ವಾಸುದೇವ ಗಂಗೇರ ವಿನ್ಯಾಸ ಮತ್ತು ರಂಗ ಗೀತೆಗಳು ನಮ್ಮನ್ನು ಮೂಕವಿಸ್ಮಿತಗೊಳಿಸಿದವು. ಸ್ಥಳೀಯ ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡ ಪರಿ ಅನನ್ಯ. ರಂಗ ಗೀತೆಗಳು ಮಕ್ಕಳ, ದೊಡ್ಡವರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವಂತವು. ಚಿನ್ನಾ ವಾಸುದೇವ್ ನಿರ್ದೇಶನದಲ್ಲಿ ಮಕ್ಕಳ ಅಭಿನಯ ಚೆನ್ನಾಗಿತ್ತು. ಇವತ್ತಿನ ಕಾಲ ಮಾನಕ್ಕೆ ಸರಿಹೊಂದುವ ಕತೆಯನ್ನೇ ಅವರು ಆಯ್ಕೆ ಮಾಡಿಕೊಂದ್ದರು. ಅಭಿಲಾಷಾ ಹಂದೆಯವರ ಹಾಡೊಂದರ ಆಶಯವನ್ನು ಉದಯ ಗಾಂವಕರ  ಗರಿ ಗರಿ ಮಾತುಗಳ ಕಥಾನಕವಾಗಿಸಿದರು. ವಾಸ್ತವಿಕ ನೆಲೆಗಟ್ಟಿನ ಕತೆಯನ್ನು ಪ್ರಸ್ತುತ ಕಾಲದ ಓಘಕ್ಕೆ ಸರಿಯಾಗಿ ಪೋಣಿಸಿದ್ದರು. ನಾಟಕದ ಮೊದಲಿಗೆ ಸಮುದಾಯದ ಅಧ್ಯಕ್ಷರಾದ ಉದಯ್
ಗಾಂವಕರ ಮಾತನಾಡಿ "ಬೇಸಿಗೆ ಶಿಬಿರಗಳು ಬರಿ ಮತ್ತೊಂದು ಶಾಲೆಯಂತಾಗದೆ ಮಗುವಿನ ಅಜ್ಜಿ ಮನೆಯಂತೆ ಮಕ್ಕಳು ಹಾಡಿ, ಕುಣಿವ, ನಲಿವ ತಾಣಗಳಾಗಬೇಕು ಅಂತಹ ಒಂದು ಸಣ್ಣ ಪ್ರಯತ್ನವಿದು." ಎಂದರು.
Also read
  ರಂಗರಂಗು ರಜಾಮೇಳದ ಎರಡು ನಾಟಕಗಳು -ಸುಧಾ ಆಡುಕಳ

No comments:

Post a Comment