Wednesday, 29 March 2017

ಜ್ಞಾನವು ಪ್ರಭುತ್ವದ ಹಂಗಿನಲ್ಲಿದೆ- ಜಿ. ರಾಜಶೇಖರ


ಬೆಳಕು
ವಿಶ್ವರಂಗಭೂಮಿ ದಿನಾಚರಣೆ

         ರಂಗದ ಮೇಲಿನ ಘಟನಾವಳಿಗಳಿಗೂ ಪ್ರೇಕ್ಷಕರಿಗೂ ನಡುವೆ ಒಂದು ಅಂತರವಿರುವುದು ಅತ್ಯಗತ್ಯ. ರಂಗದ ಮೇಲೆ ನಡೆಯುತ್ತಿರುವುದು ನಾಟಕ ಮತ್ತು ತಾವು ಪ್ರ್ರೇಕ್ಷಕರು ಎಂಬ ಅರಿವಿದ್ದರೆ ಮಾತ್ರ ನಾಟಕವನ್ನು ಮತ್ತು ಆ ಮೂಲಕ ಜೀವನವನ್ನು ವಿಮರ್ಶಕ ದೃಷ್ಟಿಯಿಂದ ನೋಡುವುದು ಸಾಧ್ಯ. ಭಾವಾತಿರೇಕದಿಂದ ವಿಚಾರಶಕ್ತಿಯನ್ನು ನಿಶ್ಚೇಷ್ಟಿತಗೊಳಿಸುವುದು ನಾಟಕ ಕಲೆಯ ಉದ್ದೇಶವಲ್ಲ. ನಾಟಕದ ಸದ್ಯದ ಗುರಿ ಮನರಂಜನೆಯಾದರೂ ಅಂತಿಮ ಗುರಿ ಜೀವನ ವಿಮರ್ಶೆಯಾಗಿದೆ ಎಂದು ಖ್ಯಾತ ಚಿಂತಕ, ವಿಮರ್ಶಕ ಜಿ. ರಾಜಶೇಖರ ನುಡಿದರು. ಕುಂದಾಪುರ ಸಮುದಾಯವು ರೋಟರಿ ಸನ್ ರೈಸ್ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವರಂಗಭೂಮಿ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಬರ್ಟೋಲ್ಟ್ ಬ್ರೆಕ್ಟ್ ಅವರ ಎಪಿಕ್ ಥಿಯೇಟರ್ ಸಿದ್ಧಾಂತ ವಿವರಿಸುತ್ತಾ ಒಂದು ಸಾರ್ವತ್ರಿಕ ಸತ್ಯದ ಪ್ರತಿಪಾದನೆಯಲ್ಲಿಯೂ ಸಹ ಧರ್ಮಾಧಿಕಾರಿಗಳು ಹಾಗೂ ಶ್ರೀಮಂತ ವರ್ಗ ಹೇಗೆ ಪ್ರಭಾವ ಬೀರುತ್ತಾರೆ ಎನ್ನುವುದನ್ನು ಬ್ರೆಕ್ಟ್ ಬರೆದು ಆಡಿಸಿದ ಗೆಲಿಲಿಯೋ ನಾಟಕದ ದೃಶ್ಯ ಸಂಯೋಜನೆ ಮತ್ತು ಸಂಭಾಷಣೆಗಳನ್ನು ವಿಮರ್ಶಿಸುತ್ತಾ ಉಪನ್ಯಾಸ ನೀಡಿದರು. ಫ್ರಾನ್ಸಿನ ರಂಗಭೂಮಿ ಹಾಗೂ ಚಲನಚಿತ್ರ ನಟಿ ಇಸಾಬೆಲ್ಲೆ ಹಾಪರ್ಟ್ ವಿಶ್ವ ರಂಗಭೂಮಿ ದಿನದಂದು ನೀಡಿದ ಸಂದೇಶವನ್ನು ರಂಗ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿನ ಉಪನ್ಯಾಸಕರಾಗಿರುವ ವಿನಾಯಕ ಎಸ್ ಎಂ. ಅವರು  ವಾಚಿಸಿದರು. ನಂತರ ಸಮುದಾಯದ  ಉಪಾಧ್ಯಕ್ಷರಾದ ವಾಸುದೇವ ಗಂಗೇರ ಅವರ ನಿರ್ದೇಶನದಲ್ಲಿ ಸಮುದಾಯದ ಸಂಗಾತಿಗಳು ಅಭಿನಯಿಸಿದ ಬರ್ಟೋಲ್ಟ್ ಬ್ರೆಕ್ಟ್ ಅವರ ‘ಪಾಷಂಡಿಯ ಕೋಟು’  ಕಥೆಯ ರಂಗರೂಪವನ್ನು ಪ್ರದರ್ಶಿಸಲಾಯಿತು. ರೋಟರಿ ಸನ್‍ರೈಸ್ ಅಧ್ಯಕ್ಷರಾದ ನರಸಿಂಹ ಹೊಳ್ಳ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಸಮುದಾಯದ ಅಧ್ಯಕ್ಷರಾದ ಉದಯ ಗಾಂವಕರ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ರಂಗಭೂಮಿಗೆ ಸಮಾಜದ ಎಲ್ಲ ವರ್ಗಗಳನ್ನು ಒಳಗೊಳ್ಳುವ, ಪ್ರತಿನಿಧಿಸುವ ಮತ್ತು ಆ ಮೂಲಕ ಅವರೆಲ್ಲರ ಮಾತುಗಳನ್ನು ಆಡುವ ಶಕ್ತಿಯಿದೆ ಎಂದರು. ಮಾತನಾಡಿದರು. ರೋಟರಿ ಸನ್‍ರೈಸ್ ಕಾರ್ಯದರ್ಶಿ ದಿನಕರ ಶೆಟ್ಟಿ ಧನ್ಯವಾದ ಅರ್ಪಿಸಿದರು. ಕುಂದಾಪುರ ಸಮುದಾಯದ ಕಾರ್ಯದರ್ಶಿ ಸದಾನಂದ ಬೈಂದೂರ್ ಕಾರ್ಯಕ್ರಮ ನಿರೂಪಿಸಿದರು.  ರೋಟರಿ ಸನ್‍ರೈಸ್ ಸದಸ್ಯರು, ಸಮುದಾಯದ ಸಂಗಾತಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಜಿ ವಿ ಕಾರಂತ, ಶಂಕರ ಆನಗಳ್ಳಿ, ಬಾಲಕೃಷ್ಣ, ಸಂದೇಶ ಹಾಗೂ ನರಸಿಂಹ ಸಹಕರಿಸಿದರು.


ಕಥಾರಂಗ
ಪಾಷಂಡಿಯ ಕೋಟು

ಕವಿಯಾಗಿ, ನಾಟಕಕಾರನಾಗಿ ಪ್ರಸಿದ್ಧರಾಗಿರುವ ಬರ್ಟೋಲ್ಟ್ ಬ್ರೆಕ್ಟ್ ಅನೇಕ ಸಣ್ಣ ಕತೆಗಳನ್ನೂ ಬರೆದಿದ್ದಾರೆ. ಪಾಷಂಡಿಯ ಕೋಟು ಅವರ ಒಂದು ಸಣ್ಣ ಕತೆ. ಪ್ರಕಾಂಡ ಪಂಡಿತ, ವಿಜ್ಞಾನಿ ಜೋರ್ಡೋನೋ ಬ್ರೂನೋ ಪಾಷಂಡವಾದಿಯೆಂದು ತೀರ್ಮಾನಿಸಿ ರೋಮೊನ ಇನಕ್ವಿಸಿಷನ್ ನ್ಯಾಯಾಲಯ ಅವರಿಗೆ ಮರಣದಂಡನೆಯನ್ನು ವಿಧಿಸುತ್ತದೆ. ಬ್ರೂನೋ ಸುಡುಗಂಬವನ್ನೇರುವ ಮೊದಲು ದೀರ್ಘಕಾಲದವರೆಗೆ ವಿಚಾರಣೆಯನ್ನೆದುರಿಸಬೇಕಾಗುತ್ತದೆ. ವಿಚಾರಣಾದೀನ ಖೈದಿಯಾಗುವ ಮುಂಚೆಯೇ ಬ್ರೂನೋ ಹೊಲಿಸಲು ಕೊಟ್ಟಿದ್ದ ಕೋಟಿನ ಬಾಬ್ತನ್ನು ಅವರಿಂದ ಪಡೆಯಲು ದರ್ಜಿ ಮೊಂಟೋವಿನ ಹೆಂಡತಿ ಮತ್ತು ಆ ಹಣವನ್ನು ಹಿಂದಿರುಗಿಸಲು ಬ್ರೂನೋ ಮಾಡುವ ಮನುಷ್ಯ ಪ್ರಯತ್ನಗಳನ್ನು ಬ್ರೆಕ್ಟ್ ಧರ್ಮಬೀರುಗಳ ಖಾಲಿತನದÀ ಹಿನ್ನೆಲೆಯಲ್ಲಿ ನಮ್ಮೆದುರು ಹಿಡಿಯುತ್ತಾರೆ. ಈ ಪುಟ್ಟ ಕತೆಯನ್ನು ನಿರ್ದೇಶಕ ವಾಸುದೇವ ಗಂಗೇರ ಯಕ್ಷಗಾನದ ಅರ್ಥಗಾರಿಕೆ, ಭಾಗವತಿಕೆಯ ವಿಶಿಷ್ಟ ಸ್ವರಸಂಚಾರವನ್ನು ಬಳಸಿಕೊಂಡು ನಟರಿಂದ ಓದಿಸುತ್ತಾರೆ. ಅಲ್ಲಲ್ಲಿ ಆಡುವಂತೆ, ಹಾಡುವಂತೆ ಮಾಡುತ್ತಾರೆ. ರಂಗಚಲನೆಗಳನ್ನು ಬಳಸಿಕೊಂಡು ದೃಶ್ಯಗಳನ್ನು ಸೃಷ್ಟಿಸುತ್ತಾರೆ. ಕುಂದಾಪುರ ಸಮುದಾಯ ಪ್ರತಿತಿಂಗಳೂ ನಡೆಸುತ್ತಾ ಬಂದಿರುವ ಕಥಾಓದು ಕಾರ್ಯಕ್ರಮಕ್ಕೆ ಈ ಚಿಕ್ಕ ಪ್ರದರ್ಶನದ ಮೂಲಕ ಹೊಸದೊಂದು ಆಯಾಮವನ್ನು ನಿರ್ದೇಶಕರು ನೀಡಿದ್ದಾರೆ. ರಂಗದ ಮೇಲೆ ವೆಂಕಟರಮಣ ನಾಯಕ, ಶಂಕರ ಆನಗಳ್ಳಿ, ಸಂಜೀವ ಹೊಸಾಡು, ಸಂಧ್ಯಾ ನಾಯಕ, ಚೈತ್ರಾ ಎಂ,  ಉದಯ ಗಾಂವಕಾರ. ಧನ್ಯಾ, ಅಜಾದ ಬೈಂದೂರ್, ಹಿತೇಶ್ ಕತೆಯನ್ನು ನೋಡುಗರಿಗೆ ದಾಟಿಸುವಲ್ಲಿ ಸಫಲರಾಗಿದ್ದಾರೆ. ಬಾಲಕೃಷ್ಣ ಎಂ ಇವರ ರಂಗಸಜ್ಜಿಕೆ, ಜಿ.ವಿ ಕಾರಂತ, ನಿಶಾಂತ್, ಸುಧಾಕರ ಕಾಂಚನ್ ಇವರ ಹಿನ್ನೆಲೆ ಸಂಗೀತ ಪ್ರೇಕ್ಷಕರನ್ನು ಕತೆಯೊಂದಿಗೆ ಚಲಿಸುವಂತೆ ಮಾಡುವಲ್ಲ್ಲಿ ನೆರವಾಗಿದೆ. ಇದೊಂದು ಪ್ರಯೋಗವಷ್ಟೇ ಎಂದು ನಿರ್ದೇಶಕರು ಮೊದಲೇ ಹೇಳಿದ್ದರೂ ಆನಂತರದಲ್ಲಿ ಇದೊಂದು ಉತ್ತಮ ಪ್ರಯೋಗ ಎಂಬುದು ಸಾಬೀತಾಯಿತು.

ನಿರ್ದೇಶಕ ವಾಸುದೇವ ಗಂಗೇರ
ಸಮುದಾಯದ ಮೂಲಕವೇ ರಂಗಭೂಮಿಯ ಆಸಕ್ತಿಯನ್ನು ಬೆಳಸಿಕೊಂಡ ವಾಸುದೇವ ಗಂಗೇರ ನಿನಾಸಮ್ ನಲ್ಲಿ ರಂಗಶಿಕ್ಷಣ ಪಡೆದವರು. ರಂಗಾಯಣದಲ್ಲಿ ನಟನಾಗಿ, ನಿರ್ದೇಶಕನಾಗಿ ಅನುಭವ ಗಳಿಸಿಕೊಂಡವರು. ನಡಿನ ಬೇರೆ ಬೇರೆ ರಂಗತಂಡಗಳಿಗೆ ನಿರ್ದೇಶನ ಮಾಡಿದ ಹೆಮ್ಮೆ ಇವರದು. ಧಾರವಾಡ ಸಮುದಾಯಕ್ಕಾಗಿ ವಾಸುದೇವರು ನಿರ್ದೇಶಿಸಿದ ಬುದ್ಧ ಪ್ರಬುದ್ಧ, ಕುಂದಾಪುರ ಸಮುದಾಯಕ್ಕೆ ನಿರ್ದೇಶಿಸಿದ ಕುಲಂ, ಸುಲ್ತಾನ್ ಟಿಪ್ಪು ಅಪಾರ ಜನಮನ್ನಣೆ ಗಳಿಸಿವೆ. ಮಕ್ಕಳಿಗಾಗಿ ಕುಂದಾಪುರ ಸಮುದಾಯವು ಸಂಘಟಿಸುವ ರಜಾಮೇಳದಲ್ಲಿ ವಾಸುದೇವ ಗಂಗೇರ ಪ್ರತಿವರ್ಷವೂ ಒಂದು ಮಕ್ಕಳ ನಾಟಕವನ್ನಾಡಿಸುತ್ತಾರೆ. ಕಥಾರಂಗ ವಾಸುದೇವರ ಪ್ರತಿಭೆಯನ್ನು ಮತ್ತೊಮ್ಮೆ ಸಬೀತುಪಡಿಸಿದೆ.




ಜಿ. ರಾಜಶೇಖರ
ಜಿ . ರಾಜಶೇಖರ ನಮ್ಮ ನಡುವಿನ ಪ್ರಭಾವಶಾಲಿ ಚಿಂತಕರು ಮತ್ತು ಪ್ರಖರ ವಿಮರ್ಶಕರು . ತಮ್ಮ ನುಡಿಯಲ್ಲಿರುವ ನಿಷ್ಠುರತೆಯನ್ನು ನಡೆಯಲ್ಲಿಯೂ ರೂಢಿಸಿಕೊಂಡವರು . ರಷ್ಯಾದಲ್ಲಿ ಕಮುನಿಷ್ಟರಿಂದಾದ ನರಮೇಧವನ್ನೂ, ಇಂದಿರಾ ಹತ್ಯೆಯ ನಂತರದ ಸಿಖ್ ಹತ್ಯಾಕಾಂಡವನ್ನೂ ಖಂಡಿಸಿದ ದನಿಯಲ್ಲೇ ಆನಂತರದಲ್ಲಿ ಗುಜರಾತನಲ್ಲಾದ ಹಿಂಸಾಚಾರವನ್ನು ಖಂಡಿಸಿದ್ದವರು . ಅಡಿಗರ ಕಾವ್ಯದ ಪ್ರತಿಗಾಮಿತನವನ್ನು ತಿರಸ್ಕರಿಸುತ್ತಲೇ ಅದರ ಹೊರತಾದ ಕಾವ್ಯದ ನಿಜವಾದ ಸತ್ವವನ್ನು ತೋರಿಸಿಕೊಡಬಲ್ಲರು . ಅವರ ಬಗ್ಗೆ ಲಂಕೇಶ್ ಹೀಗೆ ಹೇಳುತ್ತಾರೆ "ನಮ್ಮ ರಾಜಶೇಖರ ಎಷ್ಟು ಒಳ್ಳೆಯ ವಿಚಾರವಂತ . ನಿಷ್ಟುರತೆ ಮತ್ತು ಬದುಕಿನ ಬಗ್ಗೆ ಪ್ರೀತಿಯನ್ನು ಇಟ್ಟುಕೊಂಡವರೆಂದರೆ, ಅವರು ಶ್ರೇಷ್ಠ ಚಿಂತನಕಾರ ಎನ್ನುವುದು ನನಗೆ ಹೆಮ್ಮೆಯನ್ನುಂಟು ಮಾಡಿದೆ . "
ಇವರ ಬಿಡಿ ಲೇಖನಗಳ ಸಂಗ್ರಹ ವನ್ನು 'ಬಹುವಚನ ಭಾರತ' ಎಂಬ ಹೆಸರಿನ ಪುಸ್ತಕ ರೂಪದಲ್ಲಿ ಅಭಿನವ ಪ್ರಕಾಶನ ಹೊರತಂದಿದೆ . ತಮ್ಮ ಅಪಾರ ಓದಿನಿಂದ ದಕ್ಕಿದ ಜ್ಞಾನವನ್ನು ಸೋಸಿ ಎಳೆಯರಿಂದ ಹಿಡಿದು ಎಲ್ಲ ವಯೋಮಾನದವರನ್ನೂ ದಾಟಿಸುವ ಓಘದಲ್ಲಿ ಮಾತಾಡುವ ಹಿರಿಯರಾದ ಕವಿ ಹೃದಯದ ಸಮಾಜವಾದಿಯ ಜಿ. ರಾಜಶೇಖರರ ಮಾತು ನಮ್ಮ ಬದುಕನ್ನು ಮತ್ತು ಸುತ್ತಣ ಸಮಾಜವನ್ನು ಸ್ವಸ್ಥವಾಗಿಟ್ಟುಕೊಳ್ಳಲು ಅತ್ಯಂತ ಅವಶ್ಯಕ .

ಬರ್ಟೋಲ್ಟ್ ಬ್ರೆಕ್ಟ್

ಕನ್ನಡ ರಂಗಭೂಮಿಗೆ ಶೇಕ್ಸ್‍ಪಿಯರ್‍ನಷ್ಟೇ ಪರಿಚಿತನಾಗಿರುವ ಇನ್ನೊಬ್ಬ ನಾಟಕಕಾರ ಬ್ರೆಕ್ಟ್.  ಸಾಹಿತ್ಯದ ಕೆಲಸವು ಸಮಾಜಕ್ಕೆ ಕನ್ನಡಿ ಹಿಡಿಯುವುದಷ್ಟೇ ಅಲ್ಲ ಸಮಾಜವನ್ನು ತಿದ್ದುವುದೇ ಆಗಿದೆ ಎಂದವನು ಬ್ರೆಕ್ಟ್. ಸೊಕ್ರೆಟಿಸ್, ಕೊಪರ್ನಿಕಸ್, ಸಿದ್ಧಾರ್ಥಬುದ್ಧರಂತೆ ಪ್ರಶ್ನೆಗಳನ್ನು ಕೇಳಬೇಕೆಂದವನು. ಕೇಳಿಯೇ ತೀರಿದವನು. `ಪ್ರಶ್ನೆ ಕೇಳುವುದಕ್ಕೆ ಹೆದರದಿರು ಒಡನಾಡಿ..' ಎಂದ ಬ್ರೆಕ್ಟ್. ಪ್ರಶ್ನೆ ಎನ್ನುವುದು ಒಂದು ಆಯುಧ ಎಂದು ತಿಳಿದ.  ತನ್ನ ನಾಟಕ, ಕವಿತೆಗಳ ಮೂಲಕ ಪ್ರಶ್ನೆಗಳನ್ನು ಕೇಳುತ್ತಾ ಚರಿತ್ರೆಯ ಮಹಾನ್ ಪ್ರಶ್ನÀಕಾರರಲ್ಲಿ ಒಬ್ಬನಾದವನು. ಪ್ರಶ್ನೆ ಮಾಡುವುದರಿಂದ ಸರ್ವಾಧಿಕಾರಿಯನ್ನೂ ಅಲುಗಿಸಬಹುದು ಎಂದು ತಿಳಿದ ಬ್ರೆಕ್ಟ್ ಪ್ರಶ್ನಿಸುತ್ತಲೇ ಹೋದ. ಮಾತ್ರವಲ್ಲ, ಪ್ರಶ್ನಿಸುವಂತೆಯೂ ಪ್ರೇರೇಪಿಸಿದ. ಆತನ ಸರಿಸುಮಾರು 45 ನಾಟಕಗಳು, ಕೈಗೆ ಸಿಕ್ಕಿರುವ ಸಾವಿರಕ್ಕೂ ಹೆಚ್ಚು ಕವಿತೆಗಳು, ನೂರಾರು ರಂಗ ಗೀತೆಗಳು ಸುತ್ತಿಗೆಯಂತೆ ಕೆಲಸ ಮಾಡುತ್ತದೆ.
ವೈದ್ಯಕೀಯ ಶಿಕ್ಷಣ ಪಡೆದ ಬ್ರೆಕ್ಟ್ ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಸೇನಾ ಶಿಬಿರಗಳಲ್ಲಿ ಕೆಲಸ ಮಾಡಬೇಕಾಯಿತು. ಕಣ್ಣೆದುರಿಗೆ ಕಂಡ ಧಾರುಣ ದೃಶ್ಯಗಳು ಬ್ರೆಕ್ಟ್ ನೊಳಗೆ ಪ್ರಶ್ನೆಗಳನ್ನು ಹುಟ್ಟು ಹಾಕಿದವು. ಯುದ್ಧ ಮುಗಿದ ನಂತರ ಕಂಡಿದ್ದು ಬದುಕಿನಲ್ಲಿ ಅಂಧಕಾರ ತುಂಬಿದವರನ್ನು. ದೇಶಕ್ಕೆ ದೇಶವೇ ನಿರಾಶ್ರಿತರ ಶಿಬಿರದಂತೆ ಆಗಿತ್ತು. ಹಿಟ್ಲರ್ ಘರ್ಜಿಸತೊಡಗಿದ, ನಾಜಿ ಪಡೆ ಆರ್ಭಟಿಸತೊಡಗಿತು. ಬ್ರೆಕ್ಟ್ ಗೆ ಅನಿಸಿಹೋಯಿತು- ನಾನು ಬರೆದು ಸಮಾಜ ಹೀಗಿದೆ ಎಂದು ಸಾರುತ್ತ ಹೋದರಷ್ಟೇ ಸಾಲುವುದಿಲ್ಲ ಸಮಾಜವನ್ನು ರಿಪೇರಿಯೂ ಮಾಡಬೇಕು . ತತ್ವಜ್ಞಾನಿಗು ಜಗತ್ತನ್ನು ವಿವರಿಸಿದ್ದಾರಷ್ಟೇ ಸದ್ಯದ ತುರ್ತೆಂದರೆ ಜಗತ್ತನ್ನು ಬದಲಿಸುವುದು ಎಂಬ ಮಾಕ್ರ್ಸ್‍ನ ಮಾತುಗಳು ಬ್ರೆಕ್ಟ್‍ಗೆ ಪ್ರೇರಣೆಯಂತಿದೆ. ಸಮಾಜದ ನೋವಿನೊಳಗೆ ಕಳೆದು ಹೋಗಿಬಿಡುವುದಲ್ಲ, ಆ ನೋವನ್ನು ಅರಿತು ಅದನ್ನು ಬದಲಿಸುವುದು ಮುಖ್ಯ ಎಂದು ಕಂಡುಕೊಂಡ ಕಾರಣಕ್ಕಾಗಿಯೇ `ಎಪಿಕ್ ರಂಗ' ಶೈಲಿ ಸಹಾ ಕುಡಿಯೊಡೆಯಿತು. ಕಕೇಶಿಯನ್ ಚಾಕ್ ಸರ್ಕಲ್, ಥ್ರೀ ಪೆನ್ನಿ ಅಪೇರಾ, ಮದರ್ ಕರೇಜ್, ಗೆಲಿಲಿಯೋ ಹೀಗೆ ಸಾಲು ಸಾಲು ನಾಟಕಗಳು ಬ್ರೆಕ್ಟ್‍ನ ಕಾಣ್ಕೆಯನ್ನು ಸ್ಪಷ್ಟಪಡಿಸಿದವು. ಜರ್ಮನಿಯ ಬವೇರಿಯಾ ಪ್ರಾಂತ್ಯದಿಂದ ಹೊರಟ ಬ್ರೆಕ್ಟ್‍ನ ಬದುಕಿನ ಯಾತ್ರೆ ಕೊನೆಗೆ ದೇಶಭ್ರಷ್ಟನ ಹಣೆಪಟ್ಟಿ ಹೊತ್ತು ದೇಶ ದೇಶ ಅಲೆಯುವಂತೆ ಮಾಡಿತು. ಆ ನಂತರ ಅಮೆರಿಕಾದಲ್ಲೂ ಆತ ವಿಚಾರಣೆಯನ್ನು ಎದುರಿಸಬೇಕಾಗಿ ಬಂತು, ಆದರೆ ಬ್ರೆಕ್ಟ್ ಎಲ್ಲೆಡೆಯೂ ಬರೆದ, ಎಲ್ಲೆಡೆಯೂ ನಾಟಕ ಆಡಿಸಿದ, ಎಲ್ಲೆಡೆಯೂ ಪ್ರಶ್ನೆಗಳನ್ನು ಕೇಳಿದ. ಆದರೆ, ಯಾರಿಗೂ ಪ್ರಶ್ನೆಯಾಗಲಿಲ್ಲ.

No comments:

Post a Comment