Sunday, 19 March 2017

ಸಮುದಾಯ ಕರ್ನಾಟಕ


1975 ರಲ್ಲಿ, ತುರ್ತುಪರಿಸ್ಥಿತಿಯ ಹಿನ್ನೆಲೆಯಲ್ಲಿ ಒಂದು ರಂಗ ತಂಡವಾಗಿ ಆರಂಭಗೊಂಡ ಸಮುದಾಯ `ಕಲೆ ಕಲೆಗಾಗಿ ಅಲ್ಲ, ಜನತೆಗಾಗಿ ಕಲೆ’ ಎಂಬ ಧ್ಯೇಯ (ಘೋಷಣೆ) ಯೊಂದಿಗೆ ಜನತೆಯ ನೋವು ನಲಿವುಗಳಿಗೆ ಸ್ಪಂದಿಸುತ್ತಾ, ಬೀದಿ ನಾಟಕದ ಜಾಥಾ ಗಳನ್ನು ಕರ್ನಾಟಕದ ಉದ್ದಗಲಕ್ಕೂ ಮಾಡುತ್ತಾ ರಾಜ್ಯದಲ್ಲಿ ಪ್ರಭಾವಶಾಲಿಯಾಗಿ ಬೆಳೆದು ಬಂದಿತು. ನಂತರ ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿ ಎಂಬುದಾಗಿ ರಾಜ್ಯ ಸಂಘಟನೆಯಾಗಿ ರೂಪುಗೊಂಡು ರಾಜ್ಯದ ತುಂಬ ಹಲವಾರು ಘಟಕಗಳನ್ನು ಹೊಂದಿ ರಾಜ್ಯಮಟ್ಟದ ಒಂದು ಪ್ರಗತಿಪರ ಸಾಂಸ್ಕೃತಿಕ ಸಂಘಟನೆಯಾಗಿ ಬೆಳೆದು ಬಂತು.
ಹೊಸ ಮೌಲ್ಯಗಳತ್ತ ಸಮುದಾಯ ಜಾಥಾ, ರೈತನತ್ತ ಸಮುದಾಯದ ಜಾಥಾ, ಅಣುಸಮರ ವಿರೋಧಿ ಬಣ್ಣದ ಜಾಥಾ, ಭೀಕರ ಬರದ ಎದುರು ಸಮುದಾಯದ ಜಾಥಾ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಜನತೆಯ ಸಂಕಷ್ಟಗಳಿಗೆ ಸ್ಪಂದಿಸಿದ ಸಾಂಸ್ಕೃತಿಕ ಸಂಘಟನೆ ಸಮುದಾಯ ಕನ್ನಡ ಸಾಂಸ್ಕೃತಿಕ ಲೋಕವನ್ನು ನವ್ಯ ನಾಟಕಗಳು, ಜನಪರ ಹೋರಾಟ ಗೀತೆಗಳಿಂದ ಸಿಂಗರಿಸಿದೆ.
ನಾಟಕ, ಹಾಡು, ಜಾಥಾಗಳಂತಹ ಕಾರ್ಯಕ್ರಮಕ್ಕೆ ತನ್ನನ್ನು ಸೀಮಿತಗೊಳಿಸಿದ್ದ ಸಮುದಾಯ ಈಗ ತನ್ನ ಕಾರ್ಯಕ್ರಮಗಳ ತೆಕ್ಕೆಗೆ ಸಾಹಿತ್ಯ, ಚಲನಚಿತ್ರ ವನ್ನೂ ತೆಗೆದುಕೊಳ್ಳುವ ನಿಟ್ಟಿನಲ್ಲಿದೆ.
ರಾಜ್ಯಾದ್ಯಂತ 30 ಕ್ಕೂ ಹೆಚ್ಚಿನ ಘಟಕಗಳನ್ನು ಹೊಂದಿರುವ ಸಮುದಾಯ ಈಗ ಚಿತ್ರ ಸಮುದಾಯ ಹಾಗೂ ಸಾಹಿತ್ಯ ಸಮುದಾಯ ದ ಅಡಿಯಲ್ಲಿ ಕೆಲವು ಹೊಸ ಘಟಕಗಳನ್ನೂ ಹುಟ್ಟು ಹಾಕಿದೆ.
 ಸಮುದಾಯ ಕ್ಕೆ 40 ವರ್ಷಗಳು ತುಂಬಿವೆ. ಸಮೂಹದ ಆಶಯಗಳನ್ನು ಆಕೃತಿಗೊಳಿಸುತ್ತ, ಕಾಲದ ಕರೆಗೆ ಓಗೊಡುತ್ತ ಸಾಗಿಬಂದ ಪ್ರಗತಿಪರ ಸಂಘಟನೆ ಇದು. ರಂಗಪ್ರಯೋಗ, ವಿಚಾರಸಂಕಿರಣಗಳು, ಜಾಥಾಗಳು ಮುಂತಾದ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡುಬಂದ ‘ಸಮುದಾಯ’ ಈಗ ಸಾಹಿತ್ಯಸಮುದಾಯ, ರಂಗಸಮುದಾಯ, ಚಿತ್ರಸಮುದಾಯ ಹೀಗೆ ಸೌಂದರ್ಯಶಾಸ್ತ್ರದ ಹಲವು ಭೂಮಿಕೆಗಳಲ್ಲಿ ಸಮಾಜದ ಗತಿಬಿಂಬವಾಗಿ ಮುಂದುವರಿಯುತ್ತಿದೆ.
ಎಲ್ಲಿಂದ ಬಂದಿರೆಂದು ಕೇಳಬಹುದು ನೀವು
ಜನರ ನಡುವಿನಿಂದ ಎಂದು ಹೇಳುತೇವೆ ನಾವು
ಮತ್ತೆ ಪಯಣ ಎಲ್ಲಿಗೆಂದು ಕೇಳಬಹುದು ನೀವು=
ತಿರುಗಿ ಮತ್ತೆ ಜನರ ನಡುವೆ ಹೋಗುತೇವೆ ನಾವು


 ಈ ಬ್ಲಾಗ್ ನ ಮೂಲಕ ಜನತೆಯ ಜತೆಗೆ ತನ್ನ ಚಟುವಟಿಕೆಯನ್ನು ಹಂಚಿಕೊಂಡು ಸಂವಾದ ನಡೆಸಲು `ಸಮುದಾಯ’ ಸಾಂಸ್ಕೃತಿಕ ಸಂಘಟನೆ ಬಯಸಿದೆ

No comments:

Post a Comment